ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಹೀನಾಯ ಸೋಲ ಕಂಡಿದೆ. ಈ ಸೋಲಿನ ನಂತರ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರಿಗೆ ಆತಂಕ ಎದುರಾಗಿದೆ. ಟೀಮ್ ಇಂಡಿಯಾ ಸ್ಪಿನ್ನರ್ಗಳನ್ನು ಎದುರಿಸುವುದು ಇಂಗ್ಲೆಂಡ್ ತಂಡಕ್ಕೆ ಸವಾಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ಅನ್ನು ಎದುರಿಸಲು ಇಂಗ್ಲೆಂಡ್ ಬ್ಯಾಟರ್ಸ್ ಕಂಡುಕೊಂಡಿರುವ ಮಾರ್ಗವನ್ನು ಬಟ್ಲರ್ ಹೇಳಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾದ ತ್ರಿವಳಿ ಸ್ಪಿನ್ನರ್ಸ್ ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಕಾಡಿದರು.
ಈಡನ್ ಗಾರ್ಡನ್ಸ್ನಲ್ಲಿ ನಡೆದ ಮೊದಲ ಟಿ20 ಪಂದ್ಯದ ನಂತರ ಮಾತನಾಡಿದ ಜೋಸ್ ಬಟ್ಲರ್ ತಂಡದ ಸೋಲಿಗೆ ಕಾರಣಗಳನ್ನು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡ ಯಾವ ಹಂತದಲ್ಲಿ ಎಡವಿತು ಎಂದು ಬಟ್ಲರ್ ಹೇಳಿದ್ದಾರೆ.

'ನಾವು ಆಡಲು ಬಯಸಿದ ರೀತಿಯ ಆಟವನ್ನು ಆಡಲು ಸಾಧ್ಯವಾಗಲಿಲ್ಲ. ಭಾರತ ತಂಡದ ಬೌಲರ್ಸ್ ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮ ಕೆಲವು ಬ್ಯಾಟರ್ಗಳು ಮೊದಲ ಬಾರಿಗೆ ಟೀಮ್ ಇಂಡಿಯಾದ ಕೆಲವು ಬೌಲರ್ಗಳನ್ನು ಎದುರಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ನಮ್ಮ ಬ್ಯಾಟರ್ಗಳು ಪ್ರದರ್ಶನದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಪ್ರತಿಯೊಬ್ಬರೂ ಚೆನ್ನಾಗಿ ಆಡಬೇಕು. ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಒತ್ತಡ ಹೇರಬೇಕು. ಭಾರತದಲ್ಲಿ ಸ್ಪಿನ್ ನಿರಂತರ ಸವಾಲಾಗಿದೆ ಎಂದು ಒಪ್ಪಿಕೊಂಡಿರುವ ಬಟ್ಲರ್ ಸ್ಪಿನ್ ಬೌಲಿಂಗ್ ಎದುರಿಸಲು ವೈಯಕ್ತಿಕ ತಂತ್ರಗಳನ್ನು ಸಿದ್ಧಪಡಿಸುವಂತೆ ತಮ್ಮ ತಂಡದ ಬ್ಯಾಟರ್ಗಳಿಗೆ ಕಿವಿ ಮಾತು ಹೇಳಿದ್ದಾರೆ.
ನಮ್ಮ ತಂಡದಲ್ಲಿ ಉತ್ತಮ ಕೌಶಲ್ಯವನ್ನು ಹೊಂದಿರುವ ಆಟಗಾರರಿದ್ದಾರೆ. ಅವರು ಸರಣಿಯಲ್ಲಿ ಭಾರತದ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ನಮಗೆ ತಿಳಿದಿದೆ. ಪ್ರತಿ ಪಂದ್ಯದಲ್ಲಿ ಕನಿಷ್ಠ ಮೂವರು ಸ್ಪಿನ್ನರ್ಗಳನ್ನು ಎದುರಿಸಬೇಕಾಗುತ್ತದೆ ಅಂದುಕೊಂಡಿದ್ದೇವೆ. ಅವರ ಮೇಲೆ ಒತ್ತಡ ಹೇರಲು ನಾವು ನಮ್ಮ ವೈಯಕ್ತಿಕ ತಂತ್ರಗಳೊಂದಿಗೆ ಆಟವಾಡಬೇಕು ಎಂದು ಬ್ಲಟರ್ ಮುಂದಿನ ಪಂದ್ಯಕ್ಕೆ ಹೊಸ ಯೋಜನೆಯೊಂದಿಗೆ ಬರುವುದಾಗಿ ತಿಳಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ನಾವು ಯಾವಾಗಲೂ ಆಕ್ರಮಣಕಾರಿ ಆಟವಾಡಲು ಪ್ರಯತ್ನಿಸುತ್ತೇವೆ. ನಿಜ ಹೇಳಬೇಕೆಂದರೆ, ಇದು 2015 ರಿಂದ ನಮ್ಮ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಆಡುವ ಮಾರ್ಗವಾಗಿದೆ. ಹೀಗಾಗಿ ಸೋಲಿನ ನಂತರವೂ ಆಕ್ರಮಣಕಾರಿ ಆಟದಿಂದ ಹಿಂದೆ ಸರಿಯಲ್ಲ ಎಂದು ಜೋಸ್ ಬಟ್ಲರ್ ತಂಡದ ಶಕ್ತಿ ಬಗ್ಗೆ ಮಾತನಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಮಾಡಿದೆ. ಕೋಲ್ಕತ್ತಾದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಾರಥ್ಯದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.