ಇಂಗ್ಲೆಂಡ್ ತಂಡ ಭಾರತದ ಪ್ರವಾಸ ಬೆಳೆಸಿದೆ. ಈ ಪ್ರವಾಸದಲ್ಲಿ ಇಂಗ್ಲೆಂಡ್ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಸರಣಿಯ ಮೊದಲ ಪಂದ್ಯ ಹೈದರಾಬಾದ್ನಲ್ಲಿ ನಡೆದಿದ್ದು, ಟೀಮ್ ಇಂಡಿಯಾ 28 ರನ್ಗಳಿಂದ ಪಂದ್ಯವನ್ನು ಸೋತಿದೆ. ಈ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸೋಲಿನಿಂದ ಇಬ್ಬರು ಯುವ ಆಟಗಾರರು ಎರಡನೇ ಟೆಸ್ಟ್ ಪಂದ್ಯವನ್ನು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಮಿಡ್ಲ್ ಆರ್ಡರ್ ಬ್ಯಾಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಸ್ಟಾರ್ ಆಟಗಾರ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಒಟ್ಟರೆ ಈ ಇಬ್ಬರೂ ಆಟಗಾರರು ತಮಗೆ ತಂಡ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಶುಭ್ಮನ್ ಗಿಲ್ ಮೊದಲ ಹಾಗೂ ಎರಡನೇ ಇನ್ನಿಂಗ್ಸ್ ಸೇರಿ ಒಟ್ಟು 88 ನಿಮಿಷ ಬ್ಯಾಟಿಂಗ್ ಮಾಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಭರವಸೆ ಮೂಡಿಸಿದ್ದ ಗಿಲ್, ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು. ಇನ್ನು ಶ್ರೇಯಸ್ ಅಯ್ಯರ್ ಸಹ ಎರಡೂ ಇನ್ನಿಂಗ್ಸ್ ಸೇರಿ ಎರಡು ಗಂಟೆ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಬಿಗ್ ಸ್ಕೋರ್ ಮಾಡುವಲ್ಲಿ ಎಡವಿದ್ದಾರೆ.

ಶುಭಮನ್ ಗಿಲ್ ಆರಂಭಿಕರಾಗಿ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನಿಡುತ್ತಲೇ ಇದ್ದರು. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂಬ ಆಸೆ ಇವರದ್ದಾಗಿತ್ತು. ಈ ಆಸೆಯನ್ನು ಗಿಲ್ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಅವರ ಮುಂದೆ ಹೇಳಿದ್ದಾರೆ. ಶಿಷ್ಯನ ಆಸೆಗೆ ಗುರು ವರ ನೀಡಿದ್ದಾರೆ. ಆದರೆ ಶಿಷ್ಯ ತನ್ನ ಮೇಲೆ ಗುರು ಇಟ್ಟಿದ್ದ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಆಗಿದೆ.
ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ ಅವರ ಫಾರ್ಮ್ ಇಲ್ಲದೆ ಬಳಲುತ್ತಿರುವುದರಿಂದ ಅವರನ್ನು ತಂಡದಿಂದ ಹೊರಗಿಟ್ಟು, ಈ ಸ್ಥಾನದಲ್ಲಿ ಗಿಲ್ ಅವರಿಗೆ ಆಡಿಸಲಾಗಿದೆ. ಆದರೆ ಗಿಲ್ ಈ ಕ್ರಮಾಂಕದಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಪ್ರಶ್ನೆಗಳು ಎದ್ದಿವೆ.
ಒಂದು ವೇಳೆ ಗಿಲ್ ತಂಡದಲ್ಲಿ ಉಳಿಯಲೇ ಬೇಕು ಎಂಬ ನಿರ್ಧಾರ ಟೀಮ್ ಮ್ಯಾನೇಜ್ಮೆಂಟ್ ನದ್ದಾದರೆ, ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಳ್ಳಬೇಕು. ನಾಯಕ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡಿ, ಯುವ ಬ್ಯಾಟರ್ಗಳನ್ನು ಆಡಿಸಿಕೊಳ್ಳಬೇಕು.

ಇನ್ನು ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಸ್ಥಾನದ ಮೇಲೂ ಅಪಾಯದ ತೂಗುಗತ್ತಿ ನೀತಾಡುತ್ತಿದೆ. ಇವರು ಸಹ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಇವರ ಸ್ಥಾನದಲ್ಲಿ ಬೇರೆ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
ಒಂದು ವೇಳೆ ಇಬ್ಬರೂ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಲಭಿಸದೇ ಇದ್ದಲ್ಲಿ ತಂಡವನ್ನು ಕಟ್ಟುವುದೇ ದೊಡ್ಡ ಸಮಸ್ಯೆ ಆಗಲಿದೆ. ಎರಡನೇ ಟೆಸ್ಟ್ನಲ್ಲಿ ಒಬ್ಬ ಯುವ ಆಟಗಾರನಿಗೆ ಟೀಮ್ ಮ್ಯಾನೇಜ್ಮೆಂಟ್ ಪದಾರ್ಪಣೆಯ ಅವಕಾಶವನ್ನು ನೀಡಬಹುದು. ಹೀಗೆ ಆದಲ್ಲಿ ಅಲ್ಲಿಯೂ ಒಂದು ಸ್ಥಾನಕ್ಕೆ ಇಬ್ಬರು ಆಟಗಾರ ನಡುವೆ ಪೈಪೋಟೊ ಏರ್ಪಡಲಿದೆ. ಭಾರತ ಎ ತಂಡದ ಪರ ಸ್ಥಿರ ಪ್ರದರ್ಶನ ನೀಡಿರುವ ರಜತ್ ಪಟೀದಾರ್ ಹಾಗೂ ಸರ್ಫರಾಜ್ ಖಾನ್ ಮೂರನೇ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಯುವ ಆಟಗಾರರು ಒಂದು ಚಾನ್ಸ್ಗಾಗಿ ಕಾಯತ್ತಿದ್ದಾರೆ. ಒಂದು ವೇಳೆ ಅವಕಾಶ ಸಿಕ್ಕಿದ್ದೆ ಆದಲ್ಲಿ ಆರ್ಭಟಿಸಲು ತಯಾರಿ ನಡೆಸಿದ್ದಾರೆ.