ಶುಕ್ರವಾರ, ಫೆಬ್ರವರಿ 2ರಂದು ವಿಶಾಖಪಟ್ಟಣಂನಲ್ಲಿ ಆರಂಭವಾಗಲಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನವೇ ನಿರೀಕ್ಷೆಯು ಹೆಚ್ಚಾಗಿದೆ.
ಹೈದರಾಬಾದ್ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರಾಶಾದಾಯಕ ಸೋಲಿನ ನಂತರ, ಟೀಮ್ ಇಂಡಿಯಾ ಗೆಲುವಿಗಾಗಿ ಹಾತೊರೆಯುತ್ತಿದೆ.
ಇದೇ ವೇಳೆ, ಸೋಲಿನ ಮೇಲೆ ಗಾಯದ ಬರೆ ಎಳೆಯಲಾಗಿದ್ದು, ಗಾಯದ ಕಾರಣದಿಂದ ಹೊರಗುಳಿದಿರುವ ಇಬ್ಬರು ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರ ಸೇವೆಯಿಲ್ಲದೆ ಭಾರತ ತಂಡ ಕಣಕ್ಕಿಳಿಯುತ್ತಿದೆ.

ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರ ಅನುಪಸ್ಥಿತಿಯು ಭಾರತ ತಂಡದ ಸಂಯೋಜನೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗುತ್ತದೆ. ಪ್ರಮುಖ ಆಟಗಾರರು ತಂಡದಿಂದ ಹೊರಗುಳಿದಿರುವುದರಿಂದ ಮುಂಬರುವ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಯಾವ ತಂಡವನ್ನು ಕಣಕ್ಕಿಳಿಸಲಿದೆ ಎಂಬುದು ಕುತೂಹಲಕಾರಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡನೇ ಪಂದ್ಯಕ್ಕಾಗಿ ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಇತ್ತೀಚಿನ ಸೇರ್ಪಡೆಗಳು ಆಯ್ಕೆಯ ಸಂದಿಗ್ಧತೆಗೆ ಮತ್ತಷ್ಟು ಜಿಜ್ಞಾಸೆ ಹೆಚ್ಚಿಸಿವೆ.
ಇದೀಗ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ತಮ್ಮ ಆದ್ಯತೆಯ ಆಡುವ 11ರ ಬಳಗವನ್ನು ಬಹಿರಂಗಪಡಿಸಿದ್ದಾರೆ.
ಹರ್ಭಜನ್ ಸಿಂಗ್ ಅವರು ಯುವ ಆಟಗಾರನ ಸಮೃದ್ಧ ದೇಶೀಯ ಫಾರ್ಮ್ ಮತ್ತು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪ್ರಭಾವಶಾಲಿ ಪ್ರದರ್ಶನಗಳನ್ನು ಉಲ್ಲೇಖಿಸಿ ಸರ್ಫರಾಜ್ ಖಾನ್ ಅವರನ್ನು ಸೇರಿಸಿಕೊಳ್ಳಲು ಸಲಹೆ ನೀಡಿದರು.

"ನನ್ನ ಪ್ರಕಾರ ಸರ್ಫರಾಜ್ ಖಾನ್ ಆಡಬೇಕು. ಅವರು ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಗಳಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ನಿಭಾಯಿಸಿದರು. ಇದೀಗ ಕೆಎಲ್ ರಾಹುಲ್ ಅನುಪಸ್ಥಿತಿಯೊಂದಿಗೆ, ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಮೇಲಿನ ಹೆಚ್ಚಿನ ಜವಾಬ್ದಾರಿಯನ್ನು ಹರ್ಭಜನ್ ಸಿಂಗ್ ಒತ್ತಿ ಹೇಳಿದರು.
ಇಬ್ಬರೂ ಆಟಗಾರರು ಇತ್ತೀಚಿನ ಫಾರ್ಮ್ನಲ್ಲಿ ಕುಸಿತದ ಹೊರತಾಗಿಯೂ, ಸಂದರ್ಭಕ್ಕೆ ತಕ್ಕಂತೆ ಮತ್ತು ತಂಡಕ್ಕಾಗಿ ಆಡುವ ನಿರೀಕ್ಷೆಯಿದೆ.
"ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರು ಇನ್ನಿಂಗ್ಸ್ ತೆರೆಯಬೇಕು ಮತ್ತು ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ನಂತರದ ಕ್ರಮಾಂಕದಲ್ಲಿ ಆಡಬೇಕು. ಗಿಲ್ ಮತ್ತು ಅಯ್ಯರ್ ಕಳೆದ 10 ಇನ್ನಿಂಗ್ಸ್ಗಳಲ್ಲಿ ಹೆಚ್ಚು ರನ್ ಗಳಿಸಿಲ್ಲ ಎಂಬುದು ಆತಂಕದ ಸಂಗತಿ".

"ಅವರಿಂದ ಬಹಳಷ್ಟು ನಿರೀಕ್ಷಿಸಲಾಗಿದೆ ಮತ್ತು ಆಶಾದಾಯಕವಾಗಿ ಅವರು ಪ್ರದರ್ಶನ ನೀಡುತ್ತಾರೆ. ಕೆಎಲ್ ರಾಹುಲ್ ತಂಡದಲ್ಲಿಲ್ಲದ ಕಾರಣ, ಈಗ ಅವರಿಬ್ಬರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ," ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ನಂತರದ ಸ್ಥಾನಗಳಲ್ಲಿ ವಾಷಿಂಗ್ಟನ್ ಸುಂದರ್, ಕೆಎಸ್ ಭರತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಇರಿಸಿದ್ದಾರೆ. ಕುಲದೀಪ್ ಯಾದವ್ ಅಥವಾ ಮೊಹಮ್ಮದ್ ಸಿರಾಜ್ ಅವರು ಪಿಚ್ ಪರಿಸ್ಥಿತಿಗಳಿಗೆ ಅನುಗುಣವಾಗಿ ತಂಡವನ್ನು ಕೂಡಿಕೊಳ್ಳುತ್ತಾರೆ.
"ಸರ್ಫರಾಜ್ ಖಾನ್ 5ನೇ ಕ್ರಮಾಂಕ, ವಾಷಿಂಗ್ಟನ್ ಸುಂದರ್ 6, ಕೆಎಸ್ ಭರತ್ 7, ಅಕ್ಷರ್ ಪಟೇಲ್ 8, ರವಿಚಂದ್ರನ್ ಅಶ್ವಿನ್ 9 ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು 10ನೇ ಸ್ಥಾನದಲ್ಲಿ ಇರಿಸಲಾಗಿದೆ".
"ಪಿಚ್ ಪರಿಸ್ಥಿತಿಗಳು ಸಾಕಷ್ಟು ಸೂಕ್ತವಾಗಿದ್ದರೆ, ಕುಲದೀಪ್ ಯಾದವ್ ನಾಲ್ಕನೇ ಸ್ಪಿನ್ನರ್ ಆಗಿ ಒಪ್ಪಿಗೆ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಮೊಹಮ್ಮದ್ ಸಿರಾಜ್ ಅವರನ್ನು ಅಂತಿಮ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಬೇಕು," ಎಂದು ಹರ್ಭಜನ್ ಸಿಂಗ್ ತಿಳಿಸಿದರು.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್ರ್ಪಿತ್ ಬುಮ್ರಾ, ಕುಲದೀಪ್ ಯಾದವ್/ಮೊಹಮ್ಮದ್ ಸಿರಾಜ್.