ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಆ ಒಂದು ಭಯದಿಂದಲೇ ಕೊಹ್ಲಿ ಪಡೆ ಓಡಿಹೋಯಿತು ಎಂದ ಮಾಜಿ ಕ್ರಿಕೆಟಿಗ

ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಅಂತಿಮವಾಗಿ ಸ್ಪಷ್ಟ ಫಲಿತಾಂಶ ಸಿಗದೇ ಕೊನೆಗೊಂಡಿದೆ. ಮೊದಲ 4 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಟೀಮ್ ಇಂಡಿಯಾ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿತ್ತು, ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಭಾರತದ ಕೈವಶ ಆಗುವ ಹಂತದಲ್ಲಿತ್ತು. ಇನ್ನು ಇಂಗ್ಲೆಂಡ್ 4 ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿತ್ತು.
ಹೀಗೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಅಂತಿಮ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾರು ವಿಜೇತರು ಎಂಬುದನ್ನು ನಿರ್ಧರಿಸುವ ಅತಿಮುಖ್ಯವಾದ ಪಂದ್ಯವಾಗಿತ್ತು. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟು ಹಾಕಿತ್ತು. ಆದರೆ ಪಂದ್ಯ ಆರಂಭದ ಮುನ್ನಾದಿನ ಟೀಮ್ ಇಂಡಿಯಾದ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಟೀಮ್ ಇಂಡಿಯಾ ತನ್ನ ಆಟಗಾರರನ್ನು ಕಣಕ್ಕಿಳಿಸದೇ ಪಂದ್ಯದಿಂದ ಹಿಂದೆ ಸರಿಯಿತು.
ಹೀಗೆ ಸ್ಥಗಿತವಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಟೀಮ್ ಇಂಡಿಯಾ ಸೀಮಿತ ಓವರ್ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ನಡೆಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ನಡುವೆ ಐದನೇ ಟೆಸ್ಟ್ ಪಂದ್ಯ ಯಾಕೆ ರದ್ದಾಯಿತು ಎಂಬುದರ ಕುರಿತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಚರ್ಚೆಗಳಾಗುತ್ತಿವೆ. ಹೀಗೆ ನಡೆಯುತ್ತಿರುವ ಚರ್ಚೆಗಳಲ್ಲಿ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ಭಾರತದ ನಡೆಯ ವಿರುದ್ಧವೂ ಸಹ ಸಾಕಷ್ಟು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು ಇದೀಗ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಪೌಲ್ ನ್ಯೂಮನ್ ಕೂಡ ಟೀಮ್ ಇಂಡಿಯಾದ ನಡೆಯ ವಿರುದ್ಧ ಈ ಕೆಳಕಂಡಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ಹಿಂದೆ ಸರಿಯಲು ಕಾರಣ ತಿಳಿಸಿದ ಪೌಲ್ ನ್ಯೂಮನ್
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಪೌಲ್ ನ್ಯೂಮನ್ ಪ್ರಕಾರ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಲು ಕಾರಣ ಇದೇ ಸೆಪ್ಟೆಂಬರ್ 19ರಿಂದ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಅಂತಿಮ ಟೆಸ್ಟ್ ಪಂದ್ಯವನ್ನು ಆಡದೆ ಟೀಮ್ ಇಂಡಿಯಾ ಆಟಗಾರರು ಯುಎಇ ಪ್ರಯಾಣವನ್ನು ತಡಮಾಡದೆ ಕೈಗೊಂಡರು ಎಂದು ಪೌಲ್ ನ್ಯೂಮನ್ ಹೇಳಿದ್ದಾರೆ.

ರಿಸ್ಕ್ ತೆಗೆದುಕೊಳ್ಳಲು ಭಾರತೀಯರು ಸಿದ್ಧರಿರಲಿಲ್ಲ
ಅಂತಿಮ ಟೆಸ್ಟ್ ಪಂದ್ಯದ ಮುನ್ನಾ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಭಾರತ ತಂಡದ ಆಟಗಾರರ ವರದಿಗಳು ನೆಗೆಟಿವ್ ಬಂದರೂ ಕೂಡ ಟೀಮ್ ಇಂಡಿಯಾ ತನ್ನ ಆಟಗಾರರನ್ನು ಕಣಕ್ಕಿಳಿಸಲು ಮುಂದಾಗಲಿಲ್ಲ. ಐಪಿಎಲ್ ಪುನಾರಂಭಕ್ಕೆ ಕೇವಲ 10 ದಿನಗಳು ಬಾಕಿ ಇದ್ದ ಕಾರಣದಿಂದಲೇ ವರದಿಗಳು ನೆಗೆಟಿವ್ ಬಂದರೂ ಕೂಡ ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನಾಡದೇ ಯುಎಇ ಪ್ರಯಾಣವನ್ನು ಕೈಗೊಂಡರು ಎಂದು ಪೌಲ್ ನ್ಯೂಮನ್ ವ್ಯಂಗ್ಯವಾಡಿದ್ದಾರೆ.

ಕೊರೊನಾ ಬರಲು ಭಾರತೀಯರೇ ಕಾರಣ
ಇನ್ನೂ ಮುಂದುವರೆದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ಪೌಲ್ ನ್ಯೂಮನ್ ಕೊರೊನಾವೈರಸ್ ಬರುವುದಕ್ಕೆ ಟೀಮ್ ಇಂಡಿಯಾವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಲಂಡನ್ ನಗರದಲ್ಲಿ ರವಿಶಾಸ್ತ್ರಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿದ ಕಾರಣದಿಂದಲೇ ಸೋಂಕು ಕಾಣಿಸಿಕೊಂಡಿದೆ ಎಂದು ಪೌಲ್ ನ್ಯೂಮನ್ ಪುಸ್ತಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications