
ಭಾರತ ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿ ಮುಗಿದಿದೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 7 ರನ್ಗಳ ರೋಚಕ ಜಯವನ್ನು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 48.2 ಓವರ್ಗಳಲ್ಲಿ 329 ರನ್ಗಳಿಗೆ ಆಲ್ ಔಟ್ ಆಯಿತು.
50 ಓವರ್ಗಳಲ್ಲಿ 330 ರನ್ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಮಲನ್ ಬಿಟ್ಟರೆ ಬೇರೆ ಯಾವ ಆಟಗಾರನೂ ಸಹ ಗೆಲ್ಲುವ ಭರವಸೆ ಮೂಡಿಸುವಷ್ಟು ಆಟ ಆಡಲಿಲ್ಲ. 168 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ ಹೀನಾಯ ಸೋಲು ಕಾಣಲಿದೆ ಎಂದೇ ಎಲ್ಲರೂ ಭಾವಿಸಿದ್ದರು ಆದರೆ 8 ನೇ ಆಟಗಾರನಾಗಿ ಬಂದ ಸ್ಯಾಮ್ ಕರನ್ ಏಕಾಂಗಿಯಾಗಿ ಹೋರಾಡಿ ಇಂಗ್ಲೆಂಡ್ ತಂಡವನ್ನು ಬಹುತೇಕ ಗೆಲ್ಲುವ ಹಂತಕ್ಕೆ ತಂದು ಬಿಟ್ಟರು.
ಡೇವಿಡ್ ಮಲಾನ್ ಔಟಾದ ಬಳಿಕ ಬಂದ ಸ್ಯಾಮ್ ಕರನ್ ಇಂಗ್ಲೆಂಡ್ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಲಿದೆ ಎನ್ನುವ ಮಟ್ಟಿಗೆ ಆಟವನ್ನು ಆಡಿ ಭರವಸೆಯನ್ನು ಮೂಡಿಸಿದರು. ಆದರೆ ಇಂಗ್ಲೆಂಡ್ 7 ರನ್ ಗಳಿಂದ ಟೀಂ ಇಂಡಿಯಾ ವಿರುದ್ಧ ಸೋಲನ್ನು ಒಪ್ಪಿಕೊಂಡಿತು. ಪಂದ್ಯದ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡಿದ ಸ್ಯಾಮ್ ಕರನ್ 83 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಯಾಮ್ ಕರನ್ ಅವರ ಈ ಅದ್ಭುತ ಇನಿಂಗ್ಸ್ ನಂತರ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಇಂದಿನ ಪಂದ್ಯದಲ್ಲಿ ಸ್ಯಾಮ್ ಕರನ್ ಅವರ ಆಟದಲ್ಲಿ ಧೋನಿ ಅವರ ಛಾಯೆಯನ್ನು ಕಂಡೆ ಎಂದು ಹೇಳಿದ್ದಾರೆ. ಸ್ಯಾಮ್ ಆಡಿದ ರೀತಿ ಮತ್ತು ಪಂದ್ಯವನ್ನು ಗೆಲ್ಲುವ ಹಂತದವರೆಗೆ ಕೊನೆಯವರೆಗೂ ತೆಗೆದುಕೊಂಡು ಹೋದದ್ದು ನೋಡಿದರೆ ಆತನಲ್ಲಿ ಗ್ರೇಟ್ ಫಿನಿಷರ್ ಎಂಎಸ್ ಧೋನಿ ಕಂಡರು ಎಂದು ಬಟ್ಲರ್ ಹೇಳಿದ್ದಾರೆ.
ಈ ಅದ್ಭುತ ಇನಿಂಗ್ಸ್ ನಂತರ ಖಂಡಿತವಾಗಿಯೂ ಸ್ಯಾಮ್ ಕರನ್ ಎಂಎಸ್ ಧೋನಿ ಅವರಿಗೆ ಕರೆ ಮಾಡಿ ಮಾತನಾಡುತ್ತಾರೆ ಎಂಬ ಖಾತರಿ ನನಗಿದೆ ಎಂದು ಬಟ್ಲರ್ ತಿಳಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಯಾಮ್ ಕರನ್ ಆಡಲು ಅದೃಷ್ಟ ಮಾಡಿದ್ದಾರೆ, ಧೋನಿ ಅವರ ನಾಯಕತ್ವದಲ್ಲಿ ಮತ್ತಷ್ಟು ವಿಷಯಗಳನ್ನು ಸ್ಯಾಮ್ ಕರನ್ ಕಲಿಯಲಿದ್ದಾರೆ ಎಂದು ಬಟ್ಲರ್ ಶ್ಲಾಘಿಸಿದರು.