ಗುರುವಾರ, ಫೆಬ್ರವರಿ 15ರಂದು ರಾಜ್ಕೋಟ್ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಹೊರಗುಳಿದಿರುವುದರಿಂದ ಆತಿಥೇಯ ಭಾರತ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ.
ಹೈದರಾಬಾದ್ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ನಂತರ, ಕೆಎಲ್ ರಾಹುಲ್ ಬಲ ಕ್ವಾಡ್ರೈಸ್ಪ್ಸ್ ನೋವು ಅನುಭವಿಸಿದರು ಮತ್ತು ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು.

ಶನಿವಾರ, ಫೆಬ್ರವರಿ 10ರಂದು ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸುವಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ""ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಭಾಗವಹಿಸುವಿಕೆಯು ಬಿಸಿಸಿಐ ವೈದ್ಯಕೀಯ ತಂಡದಿಂದ ಫಿಟ್ನೆಸ್ ಕ್ಲಿಯರೆನ್ಸ್ಗೆ ಒಳಪಟ್ಟಿರುತ್ತದೆ,'' ಎಂದು ಹೇಳಿತ್ತು.
ಬಿಸಿಸಿಐ ಇತ್ತೀಚಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಕರ್ನಾಟಕದ ಬ್ಯಾಟರ್ ಕೆಎಲ್ ರಾಹುಲ್ ಬಿಸಿಸಿಐ ವೈದ್ಯಕೀಯ ತಂಡದಿಂದ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಕಂಡುಬಂದಿದೆ ಮತ್ತು ಅವರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವೈದ್ಯಕೀಯ ತಂಡವು ಇನ್ನೂ ಒಂದು ವಾರದ ನಂತರ ಅವರು ಹಿಂದಿರುಗುವ ನಿರ್ಧಾರಕ್ಕೆ ಬರಬಹುದು ಎಂದು ತಿಳಿಸಿದೆ.
ಕೆಎಲ್ ರಾಹುಲ್ ಇನ್ನೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಇದ್ದಾರೆ. ಅವರು ಭಾರತೀಯ ತಂಡದೊಂದಿಗೆ ರಾಜ್ಕೋಟ್ಗೆ ಆಗಮಿಸಿಲ್ಲ ಮತ್ತು ತಂಡದ ಮ್ಯಾನೇಜ್ಮೆಂಟ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರ ಸೇವೆಯನ್ನು ಪಡೆಯುವ ಭರವಸೆಯಲ್ಲಿದೆ ಎಂದು ಹೇಳಿದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಕೆಎಲ್ ರಾಹುಲ್ ಬದಲಿಗೆ ಕರ್ನಾಟಕದ ಅವರ ಸಹ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಹೆಸರಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ 2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಎಡಗೈ ಬ್ಯಾಟರ್ ಅದ್ಭುತ ಫಾರ್ಮ್ನಲ್ಲಿದ್ದಾರೆ ಮತ್ತು ರಾಷ್ಟ್ರೀಯ ಟೆಸ್ಟ್ ತಂಡದಿಂದ ಚೊಚ್ಚಲ ಕರೆಯು ಅವರ ಪ್ರದರ್ಶನಕ್ಕೆ ಪ್ರತಿಫಲವಾಗಿದೆ.
ಇತ್ತೀಚಿನ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ 151 ರನ್ಗಳ ಭರ್ಜರಿ ಶತಕ ಬಾರಿಸಿದರು. ಇದನ್ನು ಖುದ್ದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಸ್ಟ್ಯಾಂಡ್ನಿಂದ ವೀಕ್ಷಿಸಿದ್ದರು.
ಪ್ರತಿಭಾವಂತ ಯುವ ಆಟಗಾರ ಭಾರತದ ಪ್ರಧಾನ ದೇಶೀಯ ರೆಡ್-ಬಾಲ್ ರಣಜಿ ಟ್ರೋಫಿ ಪಂದ್ಯಾವಳಿಯ ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಆರು ಇನ್ನಿಂಗ್ಸ್ಗಳಿಂದ 92.67ರ ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ.
ದೇವದತ್ ಪಡಿಕ್ಕಲ್ ಅವರು ಪಂಜಾಬ್ ಮತ್ತು ಗೋವಾ ವಿರುದ್ಧವೂ ಶತಕ ಬಾರಿಸಿದ್ದರು. ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡದ ಪರ ತಮ್ಮ ಮೂರು ಇನ್ನಿಂಗ್ಸ್ಗಳಲ್ಲಿ 105, 65 ಮತ್ತು 21 ರನ್ ಗಳಿಸಿದರು.
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿರುವಂತೆಯೇ ಟೆಸ್ಟ್ ಸರಣಿಯು 1-1 ಅಂತರದಲ್ಲಿ ಸಮಬಲ ಸಾಧಿಸಿ ಕುತೂಹಲ ಮೂಡಿಸಿದೆ. ಈ ಹಂತದಲ್ಲಿ ಯಾವುದೇ ತಂಡ ಹಿಂದೆ ಬೀಳಲು ಬಯಸುವುದಿಲ್ಲವಾದ್ದರಿಂದ ಮೂರನೇ ಟೆಸ್ಟ್ ಅತ್ಯಂತ ನಿರ್ಣಾಯಕವಾಗಿದೆ.