ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸುವ ಮೊದಲು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಭ್ಯತೆಯ ಬಗ್ಗೆ ವ್ಯಾಪಕ ಅನುಮಾನಗಳು ಹುಟ್ಟಿಕೊಂಡಿವೆ.
ಇದೇ ವೇಳೆ ಮಾಜಿ ಇಂಗ್ಲೆಂಡ್ ನಾಯಕ ನಾಸೇರ್ ಹುಸೇನ್ ಅವರು ವಿರಾಟ್ ಕೊಹ್ಲಿ ಅವರ ಖಾಸಗಿ ಜೀವನಕ್ಕೆ ಆದ್ಯತೆ ನೀಡುವ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಆದರೆ ಕೊಹ್ಲಿ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಎಂದು ಭಾವಿಸಿದ್ದಾರೆ.

ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ 35 ವರ್ಷದ ವಿರಾಟ್ ಕೊಹ್ಲಿ ಅವರು ರಾಜ್ಕೋಟ್ ಮತ್ತು ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
15 ವರ್ಷಗಳ ಕಾಲ ತನ್ನ ವೃತ್ತಿಜೀವನದಲ್ಲಿ ಅವರು ನೀಡಿದ ಕೊಡುಗೆಗಾಗಿ ಇಂಗ್ಲೆಂಡ್ ಮಾಜಿ ನಾಯಕ ನಾಸೇರ್ ಹುಸೇನ್ ಅವರು ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದರು ಮತ್ತು ಯಾವುದೇ ತಂಡವು ಕೊಹ್ಲಿಯಂತಹ ಸ್ಟಾರ್ ಬ್ಯಾಟರ್ನ ಉಪಸ್ಥಿತಿಯನ್ನು ಕಳೆದುಕೊಳ್ಳುತ್ತದೆ ಎಂದರು.

"ವಿರಾಟ್ ಕೊಹ್ಲಿ ಕ್ರಿಕೆಟ್ ಆಡಿದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರು ಮತ್ತು ಯಾವುದೇ ಸರಣಿ ಮತ್ತು ಯಾವುದೇ ತಂಡವು ಕೊಹ್ಲಿಯ ಸ್ಥಾನಮಾನವನ್ನು ಕಳೆದುಕೊಳ್ಳುತ್ತದೆ. ಕ್ರಿಕೆಟ್ ವಿರಾಟ್ ಕೊಹ್ಲಿಯಂತಹವರನ್ನು ಸಹ ನೋಡಿಕೊಳ್ಳಬೇಕು. ಅವರು 15 ವರ್ಷಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ಆಟದಿಂದ ಸ್ವಲ್ಪ ದೂರವಿರಲು ಮತ್ತು ಈ ಸಮಯದಲ್ಲಿ ಕುಟುಂಬದೊಂದಿಗೆ ಇರಲು ವಿರಾಮ ಬೇಕಾದರೆ ನಾವು ವಿರಾಟ್ ಕೊಹ್ಲಿಗೆ ಶುಭ ಹಾರೈಸುತ್ತೇವೆ," ಎಂದು ನಾಸೇರ್ ಹುಸೇನ್ ಹೇಳಿದರು.
"ಇದರರ್ಥ ನಾವು ವರ್ಷಗಳಿಂದ ನೋಡುತ್ತಿರುವ ಜೇಮ್ಸ್ ಆಂಡರ್ಸನ್-ವಿರಾಟ್ ಕೊಹ್ಲಿ ಪೈಪೋಟಿಯು ಬಾಯಲ್ಲಿ ನೀರೂರಿಸುವ ಸಾಧ್ಯತೆ ಇಲ್ಲ," ಎಂದು ನಾಸೇರ್ ಹುಸೇನ್ ಸ್ಕೈ ಸ್ಪೋರ್ಟ್ಸ್ಗೆ ತಿಳಿಸಿದರು.
ಒಂದು ವೇಳೆ ವಿರಾಟ್ ಕೊಹ್ಲಿ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳಿಂದ ಹೊರಗುಳಿದರೆ, ಭಾರತ ತಂಡವು ಖಂಡಿತವಾಗಿಯೂ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಶೂನ್ಯವನ್ನು ಎದುರಿಸಬೇಕಾಗುತ್ತದೆ.
ಈ ಮೊದಲು ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ಹೆಸರಿಸಲಾಯಿತು. ಆದರೆ ಅವರು ಚೊಚ್ಚಲ ಅವಕಾಶವನ್ನು ಹೆಚ್ಚು ಬಳಸಿಕೊಳ್ಳುವಲ್ಲಿ ವಿಫಲರಾದರು.
ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಕೆಎಲ್ ರಾಹುಲ್ ಫಿಟ್ ಆಗಿದ್ದರೆ ಮತ್ತು ಮೂರನೇ ಟೆಸ್ಟ್ಗೆ ಫಿಟ್ನೆಸ್ ಮರಳಿ ಪಡೆಯಲು ಸಾಧ್ಯವಾದರೆ, ಭಾರತದ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸುವ ಆಟಗಾರನಾಗುತ್ತಾರೆ ಎಂದು ಇಂಗ್ಲಂಡ್ ಮಾಜಿ ನಾಯಕ ಅಭಿಪ್ರಾಯಟ್ಟರು.
"ವಿರಾಟ್ ಕೊಹ್ಲಿಗೆ ಅವರ ಕುಟುಂಬ ಮತ್ತು ಅವರ ಖಾಸಗಿ ಜೀವನವು ಮೊದಲು ಬರಬೇಕು. ಆದ್ದರಿಂದ ಇದು ಭಾರತಕ್ಕೆ ಹೊಡೆತವಾಗಿದೆ. ಆದರೆ ನಾವು ನೋಡಿದಂತೆ, ಭಾರತ ಸಾಕಷ್ಟು ಉತ್ತಮ ಯುವ ಬ್ಯಾಟರ್ಗಳನ್ನು ಹೊಂದಿದ್ದಾರೆ".
"ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ತಂಡಕ್ಕೆ ಎಲ್ಲಾ ಸ್ವರೂಪಗಳಲ್ಲಿ ಅದ್ಭುತವಾಗಿ ಆಡಿದ್ದಾರೆ. ಅವರು ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ನಾಸೇರ್ ಹುಸೇನ್ ಹೇಳಿದರು.
ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸರ್ಫರಾಜ್ ಖಾನ್ಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ನೀಡುವ ಆಯ್ಕೆಯನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ಹೊಂದಿದೆ.
ಆತಿಥೇಯ ಭಾರತ ತಂಡವು ಫೆಬ್ರವರಿ 15ರಂದು ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿದೆ.