IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ 20 ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ.
ಇತ್ತಂಡಗಳ ನಡುವಿನ ಟೆಸ್ಟ್ ಪಂದ್ಯ ಇಂದಿನಿಂದ ( ಜುಲೈ 1 ) ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಈ ಪಂದ್ಯ ಕಳೆದ ವರ್ಷ ಆಯೋಜನೆಯಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವಾಗಿತ್ತು. ಆದರೆ, ಕೊರೋನಾವೈರಸ್ ಅವಾಂತರದಿಂದ ಈ ಪಂದ್ಯ ಆರಂಭವಾಗದೇ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟು ಇದೀಗ ಮರು ಆಯೋಜನೆಯಾಗಿದೆ.
ಇನ್ನು ಈ ಪಂದ್ಯ ಸಂಪೂರ್ಣವಾಗಿ ಮುಕ್ತಾಯವಾದರಷ್ಟೇ ಈ ಸರಣಿ ಅಂತ್ಯ ಕಾಣಲಿದ್ದು ಸರಣಿಯಲ್ಲಿ ಯಾವ ತಂಡ ವಿಜೇತ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಇತ್ತ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾಗೆ ಈ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಮಾತ್ರ ಸರಣಿ ದಕ್ಕಲಿದ್ದು, ಪಂದ್ಯದಲ್ಲಿ ಉತ್ತಮ ಆಟಗಾರರನ್ನು ಕಣಕ್ಕೆ ಇಳಿಸಬೇಕಾದ ಅನಿವಾರ್ಯತೆ ಇತ್ತು. ಇನ್ನು ಪಂದ್ಯದ ಟಾಸ್ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ತಂಡದ ಪ್ರಮುಖ ಆಟಗಾರ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ದೊರೆತಿಲ್ಲ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಅವರನ್ನೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಸಲಾಗಿದೆ ಎಂಬ ವಿಷಯ ತಿಳಿದ ಕೂಡಲೇ ಟೀಮ್ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ತಪ್ಪು ಹಾಕೋಕೆ ಕೊಹ್ಲಿ - ರವಿಶಾಸ್ತ್ರಿ ಇಲ್ಲ
ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಟೆಸ್ಟ್ ಪಂದ್ಯದಲ್ಲಿಯೂ ಅವಕಾಶ ಸಿಗದೇ ಇರುವುದರ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು 'ಸಾಮಾಜಿಕ ಜಾಲತಾಣದಲ್ಲಿ ಯಾಕೆ ಯಾರು ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಮೇಲೆ ತಪ್ಪು ಹಾಕುವ ಯತ್ನ ಮಾಡುತ್ತಿಲ್ಲ? ಓಹ್... ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಸದ್ಯ ಕೋಚ್ ಮತ್ತು ನಾಯಕರಲ್ಲ ಹೀಗಾಗಿ ಅವರ ಮೇಲೆ ಯಾರೂ ಸಹ ತಪ್ಪನ್ನು ಹಾಕುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರವಿಚಂದ್ರನ್ ಅಶ್ವಿನ್ ಅವರಿಗೆ ಕಳೆದ ವರ್ಷ ಅವಕಾಶ ಸಿಗದೇ ಇದ್ದಾಗ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅಶ್ವಿನ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಾತನಾಡಿದ್ದವರಿಗೆ ಈ ಅಭಿಮಾನಿ ತಿರುಗೇಟು ಕೊಟ್ಟಿದ್ದಾರೆ.

ಅಶ್ವಿನ್ ಕುರಿತು ಕೊಹ್ಲಿಗೆ ಹೊಟ್ಟೆಕಿಚ್ಚು ಇರಲಿಲ್ಲ ಎಂಬುದು ಈಗ ಅರ್ಥವಾಗಿರಬೇಕು
ಕಳೆದ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ನಾಯಕನಾಗಿದ್ದಾಗ ಅಶ್ವಿನ್ ಅವರಿಗೆ ಅವಕಾಶ ನೀಡದೇ ಇದ್ದದ್ದು ಹೊಟ್ಟೆಕಿಚ್ಚಿನಿಂದ ಎಂದು ಕೆಲವರು ಕೊಹ್ಲಿ ವಿರುದ್ಧ ಗರಂ ಆಗಿದ್ದರು. ಅದರ ಕುರಿತಾಗಿ ಇದೀಗ ನೆಟ್ಟಿಗನೋರ್ವ ಕಿಡಿಕಾರಿದ್ದು, ಅಂದು ಬಾಯಿಗೆ ಬಂದ ಹಾಗೆ ಮಾತನಾಡಿದ್ದವರಿಗೆ ಈಗ ಕೊಹ್ಲಿ ಅಂದು ಅಶ್ವಿನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಹೊಟ್ಟೆಕಿಚ್ಚಿನಿಂದಲ್ಲ, ಅದೊಂದು ಗೇಮ್ ಪ್ಲಾನ್ ಎಂಬುದು ಈಗ ಅರ್ಥವಾಗಿರಬೇಕು, ಅಂದು ಕೊಹ್ಲಿ ಉಪಯೋಗಿಸಿದ್ದ ತಂತ್ರವನ್ನೇ ಇಂದು ಇತರರು ಉಪಯೋಗಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸರಣಿ ಪೂರ್ತಿ ಅವಕಾಶವಿಲ್ಲದೇ ಹೊರಗುಳಿದ ಅಶ್ವಿನ್
ಈ ಸರಣಿಯ ಆರಂಭದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ನಂತರ ಚೇತರಿಸಿಕೊಂಡು ತಂಡಕ್ಕೆ ರವಿಚಂದ್ರನ್ ಅಶ್ವಿನ್ ಮರಳಿದರೂ ಸಹ ಆಡುವ ಬಳಗದಲ್ಲಿ ಯಾವ ಪಂದ್ಯದಲ್ಲಿಯೂ ಅವಕಾಶ ದೊರೆತಿರಲಿಲ್ಲ. ಸದ್ಯ ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ ಐದನೇ ಪಂದ್ಯದಲ್ಲಿ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಖಡಾಖಂಡಿತವಾಗಿ ಅವಕಾಶ ಸಿಗಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಪಂದ್ಯದಲ್ಲಿಯೂ ಸಹ ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶ ನೀಡದೇ ತಂಡದಿಂದ ಹೊರಗಿಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications