ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್ಗಳಿಂದ ಸೋಲಿಸಿ, ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯ ಫೆಬ್ರವರಿ 2 ರಿಂದ ನಡೆಯಲಿದೆ. ಈ ಪಂದ್ಯಕ್ಕೆ ವಿಶಾಖಪಟ್ಟಣದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಕ್ಷಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ತಂಡದ ಮುಖ್ಯ ಕೋಚ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ನ ಟಾಮ್ ಹಾರ್ಟ್ಲಿ ಮೊದಲ ಟೆಸ್ಟ್ನಲ್ಲಿ ಅದ್ಭುತ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಭಾರತದ ಬ್ಯಾಟ್ಸ್ಮನ್ಗಳಿಗೆ ಕಾಟ ನೀಡಿದ್ದಾರೆ. ನಂತರ ಇಂಗ್ಲೆಂಡ್ ಎರಡನೇ ಟೆಸ್ಟ್ನಲ್ಲಿ ಎಲ್ಲಾ ಸ್ಪಿನ್ ಬೌಲರ್ಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಇದೀಗ ಎರಡನೇ ಟೆಸ್ಟ್ ಪಂದ್ಯದ ಪಿಚ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ವಿಶಾಖಪಟ್ಟಣಂನ ಮೈದಾನವು ಸಾಮಾನ್ಯವಾಗಿ ಬೃಹತ್ ಮೊತ್ತಕ್ಕೆ ಹೆಸರುವಾಸಿಯಾಗಿದೆ. ಆದರೆ ಕೆಲವು ಪಂದ್ಯಗಳಲ್ಲಿ ಇಲ್ಲಿ ಸ್ಪಿನ್ನರ್ಗಳು ಪ್ರಾಬಲ್ಯ ಹೊಂದಿದ್ದಾರೆ. ಪರಿಸ್ಥಿತಿಗಳು ಸಂಪೂರ್ಣವಾಗಿ ಸ್ಪಿನ್ನರ್ಗಳಿಗೆ ಅನುಕೂಲಕರವಾಗಿದ್ದರೆ, ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಸ್ಪಿನ್ನರ್ಗಳೊಂದಿಗೆ ಹೋಗಲು ಇಂಗ್ಲೆಂಡ್ ತಂಡವು ಹಿಂಜರಿಯುವುದಿಲ್ಲ ಎಂದು ಮೆಕಲಮ್ ಹೇಳಿದ್ದಾರೆ.
ಶೋಯೆಬ್ ಬಶೀರ್ ಈ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯಬಹುದು. ಆದರೆ ಅನುಭವಿ ಸ್ಪಿನ್ನರ್ ಜಾಕ್ ಲೀಚ್ ಅವರ ಗಾಯದ ಸ್ಥಿತಿಯ ಬಗ್ಗೆ ಹೆಚ್ಚು ಅಪ್ಡೇಟ್ ಲಭ್ಯವಾಗಿಲ್ಲ. ಲೀಚ್ ಫಿಟ್ ಆಗಿ ಉಳಿದರೆ, ಬಶೀರ್ ಮೊದಲ ಟೆಸ್ಟ್ನಲ್ಲಿ ಆಡಿದ ಏಕೈಕ ವೇಗದ ಬೌಲರ್ ಮಾರ್ಕ್ ವುಡ್ ಅನ್ನು ಬದಲಾಯಿಸಬಹುದು.

ಮೊದಲ ಟೆಸ್ಟ್ನಲ್ಲಿ ಆದಂತೆ ಸರಣಿಯ ಮುಂದಿನ ಪಂದ್ಯಗಳಲ್ಲಿ ಪಿಚ್ ತಿರುಗುತ್ತಲೇ ಇದ್ದರೆ, ನಾವು ಎಲ್ಲಾ ಸ್ಪಿನ್ನರ್ಗಳನ್ನು ಆಡಿಸಲು ಹಿಂಜರಿಯುವುದಿಲ್ಲ ಎಂದು ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಬಶೀರ್ ಅಬುಧಾಬಿಯಲ್ಲಿ ನಮ್ಮೊಂದಿಗಿದ್ದರು ಮತ್ತು ಅವರು ಸ್ಪಿನ್ ಬೌಲಿಂಗ್ನಿಂದ ತಂಡದ ಗಮನ ಸೆಳೆದಿದ್ದಾರೆ. ಅವರು ಸುಲಭವಾಗಿ ತಂಡದಲ್ಲಿ ಸ್ಥಾನ ಪಡೆದರು. ಇಳಿವಯಸ್ಸು ಹಾಗೂ ಪ್ರಥಮ ದರ್ಜೆಯ ಅನುಭವ ಕಡಿಮೆಯಿದ್ದರೂ ಉತ್ಸಾಹಕ್ಕೆ ಕೊರತೆಯಿಲ್ಲದ ಆಟಗಾರ ಬಶೀರ್.
ನಾಯಕ ಬೆನ್ ಸ್ಟೋಕ್ಸ್ ಅನನುಭವಿ ಬೌಲರ್ ಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ ಎಂದು ಮೆಕಲಮ್ ಹೊಗಳಿದ್ದಾರೆ. ಹಾರ್ಟ್ಲಿ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಎದೆ ಗುಂದದೆ ಆಡಿ ರನ್ ಗಳಿಸಿದ್ದರು. ಆದರೆ ಅವರು ಎರಡನೇ ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ಗಳನ್ನು ಪಡೆಯುವ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು. ಅವರು ಸಹ ಹೆಚ್ಚಿನ ಪ್ರಥಮ ದರ್ಜೆ ಅನುಭವವನ್ನು ಹೊಂದಿಲ್ಲದ ಕಾರಣ ಅವರನ್ನು ಆಯ್ಕೆ ಮಾಡುವುದು ಕಷ್ಟವೇ ಆಗಿತ್ತುಎಂದು ಹೇಳಿದರು.
ಹಾರ್ಟ್ಲಿಯಲ್ಲಿ ಉತ್ಸಾಹಕ್ಕೇನೂ ಕೊರತೆಯಿಲ್ಲ. ನಾಯಕ ಅದನ್ನು ನಿಭಾಯಿಸಿದ ರೀತಿ ಅದ್ಭುತವಾಗಿದೆ. ಇವರ ಉತ್ತಮ ಪ್ರದರ್ಶನದ ಬಲದಿಂದಲೇ ಪಂದ್ಯ ಗೆಲ್ಲಲು ಅವರು ಸಹಾಯ ಮಾಡಿದರು. ಇದು ಅದ್ಭುತ ನಾಯಕತ್ವದ ನಿದರ್ಶನವಾಗಿತ್ತು ಎಂದು ಕೋಚ್ ನಾಯಕನ ನಡೆಯನ್ನು ಹೊಗಳಿದ್ದಾರೆ.
ಇಂಗ್ಲೆಂಡ್ ತಂಡ ಈ ಪಂದ್ಯದಲ್ಲೂ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.