ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಸ್ಥಾನ ಪಡೆದುಕೊಳ್ಳುವುದರ ಕುರಿತು ಅನುಮಾನ ವ್ಯಕ್ತಪಡಿಸಿದ ಬೌಲಿಂಗ್ ಕೋಚ್
ಪಂದ್ಯ ಆರಂಭಕ್ಕೂ ಮುನ್ನವೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳುವುದರ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಲು ತಿರಸ್ಕರಿಸಿದ್ದಾರೆ. ಹೌದು, 'ರವಿಚಂದ್ರನ್ ಅಶ್ವಿನ್ ನಮ್ಮ ತಂಡದಲ್ಲಿರುವ ಓರ್ವ ಅತ್ಯುತ್ತಮ ಸ್ಪಿನ್ ಬೌಲರ್, ಆದರೆ ಇದುವರೆಗೂ ಅವರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಓವಲ್ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡುವುದನ್ನು ಪಿಚ್ ಪರಿಸ್ಥಿತಿ ತೀರ್ಮಾನಿಸಲಿದೆ. ಈ ಹಿಂದಿನ ಹಾಗೆ ಈ ಪಂದ್ಯದಲ್ಲಿಯೂ ಸಹ ಸ್ಪಿನ್ ಬೌಲರ್ಗಳಿಗೆ ಓವಲ್ ಕ್ರೀಡಾಂಗಣ ಸಹಕಾರಿಯಾಗಿದ್ದರೆ ಖಂಡಿತವಾಗಿಯೂ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಆಡುವ ಸ್ಥಾನ ಸಿಗಲಿದೆ' ಎಂದು ಭರತ್ ಅರುಣ್ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದರ ಮೂಲಕ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಪಿಚ್ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಭರತ್ ಅರುಣ್ ತಿಳಿಸಿದ್ದಾರೆ.
ರವೀಂದ್ರ ಜಡೇಜಾ ಚೇತರಿಕೆ
ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದ ಸಮಯದಲ್ಲಿ ಗಾಯಕ್ಕೊಳಗಾಗಿದ್ದ ರವೀಂದ್ರ ಜಡೇಜಾ ಚಿಕಿತ್ಸೆಗೆ ಒಳಗಾಗಿದ್ದರು. ಗಾಯದ ಪರಿಣಾಮ ತುಸು ಹೆಚ್ಚೇ ಇದ್ದ ಕಾರಣ ರವೀಂದ್ರ ಜಡೇಜಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಕೂಡಾ ಪಡೆದುಕೊಂಡಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ರವೀಂದ್ರ ಜಡೇಜಾ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯ ಕುರಿತು ಹರಿದಾಡುತ್ತಿದ್ದ ಸುದ್ದಿಗೆ ಉತ್ತರ ನೀಡುವುದರ ಮೂಲಕ ಪೂರ್ಣ ವಿರಾಮ ಇಟ್ಟಿದ್ದಾರೆ. ಹೌದು, ಗಾಯದ ಸಮಸ್ಯೆಗೆ ಒಳಗಾಗಿದ್ದ ರವೀಂದ್ರ ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲು ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ತಿಳಿಸಿದ್ದಾರೆ. ರವೀಂದ್ರ ಜಡೇಜಾ ಚೇತರಿಕೆ ತಡವಾಗಿದ್ದರೆ ಜಡೇಜಾ ಬದಲು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಅಪೇಕ್ಷಿಸುತ್ತಿದ್ದ ಕ್ರೀಡಾಭಿಮಾನಿಗಳಿಗೆ ಇದು ತುಸು ಬೇಸರದ ಸಂಗತಿ ಎಂದೇ ಹೇಳಬಹುದು.
ಅವಕಾಶವಿದ್ದರೆ ಜಡೇಜಾ, ಅಶ್ವಿನ್ ಇಬ್ಬರೂ ಕಣಕ್ಕೆ
ಇನ್ನೂ ಮುಂದುವರೆದು ಮಾತನಾಡಿರುವ ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಒಂದುವೇಳೆ ಓವಲ್ ಕ್ರೀಡಾಂಗಣದ ಪಿಚ್ ಸ್ಪಿನ್ ಬೌಲರ್ಗಳಿಗೆ ಸಹಕಾರಿಯಾಗಿರಲಿದೆ ಎಂಬ ವರದಿ ಬಂದರೆ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರಿಗೂ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಮೂಲಕ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಸ್ಪಿನ್ ಬೌಲರ್ಗಳನ್ನು ಕಣಕ್ಕಿಳಿಸುವ ಮುನ್ಸೂಚನೆಯನ್ನೂ ಸಹ ಪರೋಕ್ಷವಾಗಿ ನೀಡಿದ್ದಾರೆ ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್