ಓರ್ವ ಸ್ಪಿನ್ನರ್ ಇಡೀ ಪಂದ್ಯವನ್ನೇ ಬದಲಿಸಿದ ಎಂದ ಶೇನ್ ವಾರ್ನ್
ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿಯದೇ ಇದ್ದ ಮೊಯಿನ್ ಅಲಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಹೀಗೆ ಕಣಕ್ಕಿಳಿಯುವುದರ ಮೂಲಕ ಮೊದಲನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಪಡೆದಿದ್ದ ಮೊಯಿನ್ ಅಲಿ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಪ್ರಮುಖ 2 ವಿಕೆಟ್ಗಳನ್ನು ಪಡೆದುಕೊಳ್ಳುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ. ಹೌದು ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಅಜಿಂಕ್ಯ ರಹಾನೆ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 61 ರನ್ ಕಲೆ ಹಾಕಿ ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದ ವೇಳೆ ಮೊಯಿನ್ ಅಲಿ ಎಸೆತಕ್ಕೆ ಬಲಿಯಾದರು ಹಾಗೂ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಕೂಡ ಕೇವಲ 3 ರನ್ ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಸ್ಪಿನ್ನರ್ ಓರ್ವ ಟೀಮ್ ಇಂಡಿಯಾದ 2ಪ್ರಮುಖ ವಿಕೆಟ್ಗಳನ್ನು ಪಡೆಯುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ ಎಂದು ಶೇನ್ ವಾರ್ನ್ ಶ್ಲಾಘಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಇರಬೇಕಿತ್ತು
ಇಂಗ್ಲೆಂಡ್ ತಂಡದ ಮೊಯಿನ್ ಅಲಿ ಉತ್ತಮ ಪ್ರದರ್ಶನ ನೀಡಿ ಎರಡನೇ ಇನ್ನಿಂಗ್ಸ್ನಲ್ಲಿ ಪಂದ್ಯವೇ ಪಥ ಬದಲಿಸುವಂತಹ ಬೌಲಿಂಗ್ ಮಾಡಿದ ಕುರಿತು ಮಾತನಾಡಿರುವ ಶೇನ್ ವಾರ್ನ್ ಟೀಮ್ ಇಂಡಿಯಾ ರವಿಚಂದ್ರನ್ ಅಶ್ವಿನ್ ರೀತಿಯ ಸ್ಪಿನ್ ಬೌಲರ್ಗೆ ಆದ್ಯತೆ ನೀಡಬೇಕಿತ್ತು ಎಂದಿದ್ದಾರೆ. ಟೀಮ್ ಇಂಡಿಯಾ ಆಯ್ಕೆ ಮಾಡಿರುವ ತಂಡ ಮೊದಲನೇ ಇನ್ನಿಂಗ್ಸ್ಗೆ ಸರಿಯಾದ ತಂಡವಾಗಿತ್ತು ಆದರೆ ಎರಡನೇ ಇನ್ನಿಂಗ್ಸ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕೆಂದರೆ ಸ್ಪಿನ್ ಬೌಲರ್ಗಳ ಅಗತ್ಯತೆಯಿದೆ ಎಂದು ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿ ಭಾರತವನ್ನು ಸಮಸ್ಯೆಗೆ ದೂಡಲಿದೆ ಎಂಬುದನ್ನು ಪರೋಕ್ಷವಾಗಿ ಶೇನ್ ವಾರ್ನ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪಿಚ್ಗಳಿಗೆ ಸ್ಪಿನ್ ಬೌಲರ್ಗಳು ಇರಬೇಕು
ಇಂಗ್ಲೆಂಡ್ ಪಿಚ್ಗಳಲ್ಲಿ ವೇಗಿಗಳಿಗೆ ಹೆಚ್ಚು ಅನುಕೂಲ ಎಂದು ಭಾವಿಸುವುದು ತಪ್ಪು. ಪಂದ್ಯದ ಅರ್ಧ ಭಾಗ ಮುಗಿದ ನಂತರ ಇಂಗ್ಲೆಂಡ್ ಪಿಚ್ನಲ್ಲಿ ಬದಲಾವಣೆಗಳಾಗಲಿವೆ ಹಾಗೂ ಸ್ಪಿನ್ ಬೌಲರ್ಗಳು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಶುರು ಮಾಡುತ್ತಾರೆ. ಹೀಗಾಗಿ ಪಂದ್ಯ ಗೆಲ್ಲುವುದಕ್ಕೋಸ್ಕರ ತಂಡಗಳು ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂಬರ್ಥದಲ್ಲಿ ಶೇನ್ ವಾರ್ನ್ ಟೀಮ್ ಇಂಡಿಯಾ ಆಟಗಾರರ ಆಯ್ಕೆಯನ್ನು ಟೀಕಿಸಿದ್ದಾರೆ.