ಮುಂಬೈನ ವಾಂಖೇಡೆ ಅಂಗಳದಲ್ಲಿ ಭಾನುವಾರ ಐದನೇ ಟಿ20 ಪಂದ್ಯ ನಡೆಯಲಿದ್ದು, ಮಹತ್ವದ ಟಾಸ್ ಇಂಗ್ಲೆಂಡ್ ತಂಡದ ಪಾಲಾಗಿದೆ. ಇಂಗ್ಲೆಂಡ್ ಟಾಸ್ ಗೆಲ್ಲುತ್ತಿದ್ದಂತೆ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಅನುಭವಿ ವೇಗದ ಬೌಲರ್ ಮಾರ್ಕ್ ವುಡ್ ಮರಳಿದ್ದಾರೆ. ಇಂಗ್ಲೆಂಡ್ ತನ್ನ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ದೃಷ್ಟಿಯನ್ನು ನೆಟ್ಟಿದೆ.
ಭಾರತ ಈ ಪಂದ್ಯಕ್ಕಾಗಿ ಕೇವಲ ಒಂದೇ ಒಂದು ಚೇಂಜ್ ಮಾಡಿದೆ. ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಅವಕಾಶ ಸಿಕ್ಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಶಮಿ ಅವರಿಗೆ ಮ್ಯಾಚ್ ಪ್ರ್ಯಾಕ್ಟಿಸ್ ಸಹ ಆಗಲಿದೆ. ಆದರೆ ಅರ್ಷದೀಪ್ ಸಿಂಗ್ ಅವರನ್ನು ಬೆಂಚ್ ಮೇಲೆ ಕೂರಿಸಲಾಗಿದೆ. ಈ ಮೂಲಕ ಅರ್ಷದೀಪ್ ಅವರ ವಿಕೆಟ್ಗಳ ಶತಕದ ಕನಸು ಮುಂದೆ ಸಾಗಿದೆ. ಈಗಾಗಲೇ ಟೂರ್ನಿಯನ್ನು ಟೀಮ್ ಇಂಡಿಯಾ ಗೆದ್ದು ಕೊಂಡಿದ್ದು, ಐದನೇ ಪಂದ್ಯವನ್ನು ಗೆದ್ದು ಬೀಗುವ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಟಾಪ್ ಆರ್ಡರ್ ಬ್ಯಾಟರ್ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ.

ಕಳೆದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದ ಸಕೀಬ್ ಮಹಮೂದ್ ಅವರಿಗೆ ಇಂಗ್ಲೆಂಡ್ ವಿಶ್ರಾಂತಿ ನೀಡಿದೆ. ಇವರು ಕಳೆದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ ಮೂರು ವಿಕೆಟ್ ಪಡೆದು ಅಬ್ಬರಿಸಿದ್ದರು. ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೆ ಭಾರೀ ಪೆಟ್ಟು ನೀಡಿದ್ದ ಬೌಲರ್, ಭಾನುವಾರದ ಪಂದ್ಯದಲ್ಲಿ ಬೆಂಚ್ ಕಾಯಲಿದ್ದಾರೆ. ಇವರ ಸ್ಥಾನದಲ್ಲಿ ಅನುಭವಿ ಮಾರ್ಕ್ ವುಡ್ ತಂಡ ಪ್ರವೇಶಿಸಲಿದ್ದಾರೆ. ಐದನೇ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಏಕದಿನ ಸರಣಿ ಆಡುವ ಇರಾದೆ ಇಂಗ್ಲೆಂಡ್ ತಂಡದ್ದಾಗಿದೆ.
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಈ ಪಂದ್ಯದಲ್ಲಿ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಪ್ರಸಕ್ತ ಸರಣಿಯಲ್ಲಿ ಸೂರ್ಯ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರು ಈ ಪಂದ್ಯದಲ್ಲಿ ಲಯ ಬದ್ಧ ಬ್ಯಾಟಿಂಗ್ ನಡೆಸಿದ್ದೇ ಆದಲ್ಲಿ ಇತಿಹಾಸವನ್ನು ನಿರ್ಮಿಸಬಹುದು. ಇವರು ಈ ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರೆ, ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 150 ಸಿಕ್ಸರ್ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲಿದ್ದಾರೆ.
ಭಾರತ ತಂಡ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿ ಬಿಷ್ಣೋಯಿಮ ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್, ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ ಸ್ಟೋನ್, ಜಾಕಬ್ ಬೇತೆಲ್, ಬ್ರೈಡನ್ ಕಾರ್ಸೆ, ಜೇಮೀ ಓವರ್ಟನ್, ಆದೀಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್,