ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಪಂದ್ಯ ಶುಕ್ರವಾರ ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವತ್ತ ಟೀಮ್ ಇಂಡಿಯಾ ಚಿತ್ತ ನೆಟ್ಟಿದೆ. ಈಗಾಗಲೇ ಐದು ಪಂದ್ಯಗಳ ಸರಣಿಯ ಮೂರು ಪಂದ್ಯಗಳು ಮುಗಿದಿವೆ. ಈ ಪಂದ್ಯಗಳಲ್ಲಿ ಆತಿಥೇಯ ತಂಡ 2 ಗೆಲುವು, ಪ್ರವಾಸಿ ತಂಡ 1 ಗೆಲುವು ದಾಖಲಿಸಿದೆ. ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಕನಸಿನಲ್ಲಿ ಟೀಮ್ ಇಂಡಿಯಾ ಇದೆ. ಇನ್ನು ರಾಜ್ಕೋಟ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಇಂಗ್ಲೆಂಡ್ ಮತ್ತೊಂದು ಜಯದ ಕನಸು ಕಾಣುತ್ತಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಪಿಚ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿಯೂ ಸ್ಪಿನ್ ಫ್ರೆಂಡ್ಲಿ ಪಿಚ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಟೀಮ್ ಇಂಡಿಯಾ ಮೂರು ಸ್ಪಿನ್ ಬೌಲರ್ಗಳ ರಣ ತಂತ್ರದೊಂದಿಗೆ ಅಖಾಡಕ್ಕೆ ಇಳಿಯಬಹುದು. ಆದರೆ ನಾಲ್ಕನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಎಷ್ಟು ಓವರ್ ಬೌಲರ್ ಮಾಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಟೀಮ್ ಇಂಡಿಯಾದ ಸ್ಟಾರ್ ಟಾಪ್ ಆರ್ಡರ್ ಬ್ಯಾಟರ್ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುತ್ತಿದ್ದಾರೆ. ಇನ್ನು ಆರಂಭಿಕ ಸಂಜು ಸ್ಯಾಮ್ಸನ್ ಸರಣಿಯಲ್ಲಿ ರನ್ ಬರ ಅನುಭವಿಸುತ್ತಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ನಾಲ್ಕನೇ ಪಂದ್ಯದಲ್ಲಿ ಸಂಜು ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಇನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿರಲಿದೆ. ನಾಯಕತ್ವ ವಹಿಸಿಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಮಂಕಾಗಿದ್ದು, ತಮ್ಮ ಹಳೆಯ ಲಯಕ್ಕೆ ಮರಳಬೇಕಿದೆ.
ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಇನ್ನು ಮೊಹಮ್ಮದ್ ಶಮಿ ಅವರಿಗೆ ಮತ್ತು ಅವಕಾಶ ನೀಡಬೇಕು. ಅಂದಾಗ ಅವರು ಚಾಂಪಿಯನ್ಸ್ ಟ್ರೋಫಿ ವೇಳೆಗೆ ಲಯಕ್ಕೆ ಮರಳಲಿದ್ದಾರೆ. ಇನ್ನು ಅರ್ಷದೀಪ್ ಸಿಂಗ್ ತಮ್ಮ ಕರಾರುವಾಕ್ ದಾಳಿಯನ್ನು ಮುಂದುವರೆಸಬೇಕು.

ರಾಜ್ಕೋಟ್ನಲ್ಲಿ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ಗೆಲುವಿನ ಉತ್ಸಾಹದಲ್ಲಿರುವ ಇಂಗ್ಲೆಂಡ್, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹಾಗೂ ಆರ್ಸಿಬಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಇನ್ನು ಬೆನ್ ಡಕೆಟ್ ತಮ್ಮ ನೈಜ ಆಟವನ್ನು ಆಡಬೇಕಿದೆ. ಇನ್ನು ಬೌಲರ್ಗಳಾದ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಅವರು ಆರಂಭದಲ್ಲಿ ಬಿಗುವಿನ ದಾಳಿ ನಡೆಸಬೇಕಿದೆ. ಆದಿಲ್ ರಶೀದ್ ತಮ್ಮ ಸ್ಪಿನ್ ಮೋಡಿಯಿಂದ ತಂಡಕ್ಕೆ ನೆರವಾಗಬೇಕಿದೆ.