ಶುಕ್ರವಾರ, ಫೆಬ್ರವರಿ 23ರಿಂದ ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ಬಲಗೈ ವೇಗಿಯ ಕೆಲಸದ ನಿರ್ವಹಣೆಯನ್ನು (ವರ್ಕ್ ಲೋಡ್) ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹಿರಂಗಪಡಿಸಿದೆ.

ಗಮನಾರ್ಹವಾಗಿ, ಜಸ್ಪ್ರೀತ್ ಬುಮ್ರಾ ಈ ಟೆಸ್ಟ್ ಸರಣಿಯಲ್ಲಿ ಆರು ಇನ್ನಿಂಗ್ಸ್ಗಳಿಂದ 13.64ರ ಸರಾಸರಿಯಲ್ಲಿ ಮತ್ತು 2.87ರ ಎಕಾನಮಿ ದರದಲ್ಲಿ 17 ವಿಕೆಟ್ಗಳೊಂದಿಗೆ ಇದುವರೆಗೆ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಮಾತ್ರವಲ್ಲದೆ, ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಮೊದಲ ಪಂದ್ಯದ ನಂತರ, ಕೆಎಲ್ ರಾಹುಲ್ ಬಲ ಕ್ವಾಡ್ರೈಸ್ಪ್ ನೋವಿನಿಂದ ಬಳಲುತ್ತಿದ್ದಾರೆ ಮತ್ತು ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು.
ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದಾಗ ರವೀಂದ್ರ ಜಡೇಜಾ ಜೊತೆಗೆ ಕೆಎಲ್ ರಾಹುಲ್ರನ್ನು ಮರಳಿ ಕರೆಯಲಾಯಿತು. ಆದರೆ ಪಂದ್ಯದ ಫಿಟ್ನೆಸ್ ಅನ್ನು ಮರಳಿ ಪಡೆಯಲು ವಿಫಲವಾದ ಕಾರಣ, ಮೂರನೇ ಪಂದ್ಯಕ್ಕೆ ಮುಂಚಿತವಾಗಿ ಅವರನ್ನು ಮತ್ತೊಮ್ಮೆ ಹೊರಗಿಡಲಾಗಿತ್ತು.
ಧರ್ಮಶಾಲಾದಲ್ಲಿ ನಡೆಯುವ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾಗವಹಿಸುವುದು ಅವರ ಫಿಟ್ನೆಸ್ಗೆ ಒಳಪಟ್ಟಿರುತ್ತದೆ.
ರಾಜ್ಕೋಟ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮೂರನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ, ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆಯನ್ನು ನಿರ್ವಹಿಸಲು ವಿಶ್ರಾಂತಿ ನೀಡುವ ಬಗ್ಗೆ ವ್ಯಾಪಕವಾದ ಮಾತುಕತೆಗಳು ನಡೆದಿದ್ದವು.
ಆದಾಗ್ಯೂ, ರಾಜ್ಕೋಟ್ನ ಫ್ಲಾಟ್ ಪಿಚ್ನಲ್ಲಿ ಬುಮ್ರಾ ರಿವರ್ಸ್ ಸ್ವಿಂಗ್ ಪರಾಕ್ರಮವು ಹೆಚ್ಚು ಅಗತ್ಯವಿರುವುದರಿಂದ ವೇಗಿಯನ್ನು ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು.
30 ವರ್ಷದ ಜಸ್ಪ್ರೀತ್ ಬುಮ್ರಾ 2023ರ ಡಿಸೆಂಬರ್ 26ರಿಂದ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಐದು ಪಂದ್ಯಗಳಲ್ಲಿ 129.2 ಓವರ್ಗಳನ್ನು ಬೌಲ್ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಇನ್ನಿಂಗ್ಸ್ಗಳಿಂದ 12.91ರ ಸರಾಸರಿಯಲ್ಲಿ 12 ವಿಕೆಟ್ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನ್ನು ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 91 ರನ್ಗಳಿಗೆ 9 ವಿಕೆಟ್ಗಳ ತಮ್ಮ ಎರಡನೇ ಅತ್ಯುತ್ತಮ ಟೆಸ್ಟ್ ಪಂದ್ಯದ ಅಂಕಿಅಂಶಗಳನ್ನು ದಾಖಲಿಸಿದ್ದಕ್ಕಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಇದೇ ವೇಳೆ ಪಂದ್ಯ-ವಿಜೇತ ಪ್ರದರ್ಶನದ ನಂತರ, ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದರು ಮತ್ತು ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದರು.
ಇನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ರಣಜಿ ಟ್ರೋಫಿ ಪಂದ್ಯಕ್ಕಾಗಿ ಭಾರತ ತಂಡದಿಂದ ಬಿಡುಗಡೆಯಾದ ಬಲಗೈ ವೇಗಿ ಮುಖೇಶ್ ಕುಮಾರ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅವರೊಂದಿಗಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಎರಡನೇ ವೇಗಿಯಾಗಿ ಆಗಿ ಮುಖೇಶ್ ಅಥವಾ ಆಕಾಶ್ ದೀಪ್ ಅವರೊಂದಿಗೆ ಹೋಗಲು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸುತ್ತದೆಯೇ ಎಂಬುದುನ್ನು ಕಾದು ನೋಡಬೇಕಿದೆ. ಈಗಾಗಗಲೇ ಭಾರತ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ರಾಂಚಿಯಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.