1. ಪ್ರಸಿದ್ಧ್ ಕೃಷ್ಣ ಬದಲು ಶಾರ್ದೂಲ್ ಠಾಕೂರ್ ಕಣಕ್ಕೆ
ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಮತ್ತು ಅರ್ಶದೀಪ್ ಸಿಂಗ್ ಬೆಂಚ್ ಕಾದರು ಹಾಗೂ ಇವರ ಬದಲಾಗಿ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ನಂತರ ಮೂರನೇ ವೇಗಿಯಾಗಿ ಕಣಕ್ಕಿಳಿದರು. ಆದರೆ ಪ್ರಸಿದ್ಧ್ ಕೃಷ್ಣ ಅಗತ್ಯವಿದ್ದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಎರಡೂ ಪಂದ್ಯಗಳಲ್ಲಿಯೂ ತಲಾ ಒಂದೊಂದು ವಿಕೆಟ್ ಪಡೆದ ಪ್ರಸಿದ್ಧ್ ಹೆಚ್ಚು ರನ್ ನೀಡಿ ದುಬಾರಿ ಕೂಡ ಆದರು. ಪ್ರಥಮ ಪಂದ್ಯದಲ್ಲಿ 5 ಓವರ್ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 26 ರನ್ ನೀಡಿದರೆ, ದ್ವಿತೀಯ ಏಕದಿನ ಪಂದ್ಯದಲ್ಲಿ 8 ಓವರ್ ಬೌಲಿಂಗ್ ಮಾಡಿ 53 ರನ್ ನೀಡಿ ದುಬಾರಿಯಾದರು. ಹೀಗಾಗಿ ಪ್ರಸಿದ್ಧ್ ಕೃಷ್ಣ ಅವರನ್ನು ತೃತೀಯ ಏಕದಿನ ಪಂದ್ಯದಿಂದ ಹೊರಗಿಟ್ಟು ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಾಗೂ ಇಂಗ್ಲೆಂಡ್ ನೆಲದಲ್ಲಿ ಬೌಲಿಂಗ್ ಮಾಡಿರುವ ಅನುಭವ ಹೊಂದಿರುವ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡಬೇಕಿದೆ. ಹೀಗಿದ್ದಾಗ ಭಾರತದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ.
2. ಮೂರನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯಾಗೆ ಬೌಲಿಂಗ್
ಪ್ರಸಿದ್ಧ್ ಕೃಷ್ಣ ಬದಲಾಗಿ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೂ ಸಹ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಮೂರನೇ ವೇಗಿಯಾಗಿ ಪ್ರಾತಿನಿಧ್ಯ ನೀಡಿ ಹೆಚ್ಚು ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ನಾಯಕ ರೋಹಿತ್ ಶರ್ಮಾ ನೀಡಬೇಕಿದೆ. ಕಳೆದೆರಡು ಪಂದ್ಯಗಳಲ್ಲಿ ಒಟ್ಟು 10 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 50 ರನ್ ನೀಡಿ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ಜೇಸನ್ ರಾಯ್ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ಅವರ ವಿಕೆಟ್ಗಳನ್ನು ಪಡೆದಿದ್ದರು. ಹೀಗಾಗಿ ಈ ಬದಲಾವಣೆ ಮಾಡಿಕೊಂಡರೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಇನ್ನಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗಲಿದೆ.
3. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ
ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದರು ಹಾಗೂ ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಉತ್ತಮ ಫಾರ್ಮ್ ಹೊಂದಿರುವ ಸೂರ್ಯಕುಮಾರ್ ಯಾದವ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೆ ತಂಡಕ್ಕೆ ಮತ್ತಷ್ಟು ರನ್ ಸಿಗಲಿದೆ ಹಾಗೂ ಸೂರ್ಯಕುಮಾರ್ ಯಾದವ್ ನೆಲಕಚ್ಚಿ ನಿಂತು ವಿಕೆಟ್ ಕಾಯ್ದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಮೂರನೇ ಏಕದಿನ ಪಂದ್ಯಕ್ಕೆ ಈ ಬದಲಾವಣೆಯನ್ನು ಟೀಮ್ ಇಂಡಿಯಾ ಮಾಡಿಕೊಳ್ಳಬೇಕಿದೆ.