ಸೋಮವಾರ, ಜನವರಿ 5ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 106 ರನ್ಗಳ ಅಮೋಘ ಗೆಲುವು ದಾಖಲಿಸಿದ ಭಾರತ ತಂಡ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.
ಇನ್ನು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆದ್ದರೂ ಮತ್ತೊಂದು ಆತಂಕ ಎದುರಾಗಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಶುಭ್ಮನ್ ಗಿಲ್ ಸ್ಕ್ಯಾನ್ಗೆ ಒಳಗಾಗಿರುವುದು, ಮೂರನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ತಲೆನೋವು ಶುರುವಾಗಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಮೈದಾನದಿಂದ ಹೊರಗುಳಿದಿದ್ದ ಭಾರತೀಯ ಬ್ಯಾಟರ್ ಶುಭ್ಮನ್ ಗಿಲ್ ಸೋಮವಾರ ಬೆರಳಿನ ಗಾಯಕ್ಕೆ ಸ್ಕ್ಯಾನ್ ಮಾಡಿಸಿದ್ದಾರೆ. ಸ್ಕ್ಯಾನ್ಗಳು ಯಾವುದೇ ಕಳವಳವನ್ನು ತಿಳಿಸಿಲ್ಲ ಮತ್ತು ಮುಂದಿನ ದಿನಗಳಲ್ಲಿ ಅವರು ಚೆನ್ನಾಗಿರುತ್ತಾರೆ ಎಂದು ಬಹಿರಂಗಪಡಿಸಲಾಗಿದೆ.
3ನೇ ದಿನದಂದು ಬ್ಯಾಟ್ ಮಾಡಿದ ಶುಭ್ಮನ್ ಗಿಲ್, 147 ಎಸೆತಗಳಲ್ಲಿ 104 ರನ್ ಗಳಿಸಿ ಔಟಾದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ 106 ರನ್ಗಳ ಅಮೋಘ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಆದರೆ ಫೀಲ್ಡಿಂಗ್ ವೇಳೆ ಶುಭ್ಮನ್ ಗಿಲ್ ಸೋಮವಾರ ಮೈದಾನಕ್ಕೆ ಇಳಿಯಲಿಲ್ಲ. ಅವರ ಬದಲಾಗಿ ಸರ್ಫರಾಜ್ ಖಾನ್ ಫೀಲ್ಡಿಂಗ್ನಲ್ಲಿ ಕಾಣಿಸಿಕೊಂಡರು.
ತಮ್ಮ ಬಲ ತೋರು ಬೆರಳಿಗೆ ಗಾಯವಾದ ಕಾರಣ, ಭಾನುವಾರ ದಿನದ ಆಟದ ಅಂತ್ಯದಲ್ಲಿ ಶುಭ್ಮನ್ ಗಿಲ್ ತರಾತುರಿಯಲ್ಲಿ ಮೈದಾನದಿಂದ ನಿರ್ಗಮಿಸಿದ್ದರು. ನಾಲ್ಕನೇ ದಿನವಾದ ಸೋಮವಾರ ಪಂದ್ಯ ಮುಕ್ತಾಯವಾದ ನಂತರ, ಅವರು ಸ್ಕ್ಯಾನ್ಗೆ ಹೋಗಿರುವುದಾಗಿ ಸ್ವತಃ ಶುಭ್ಮನ್ ಗಿಲ್ ಬಹಿರಂಗಪಡಿಸಿದರು.

"ನಾನು ನಿನ್ನೆ ಸ್ಕ್ಯಾನ್ಗೆ ಹೋಗಬೇಕಾಯಿತು. ಆದ್ದರಿಂದ ಭಾನುವಾರ ಸಂಜೆ ನನ್ನ ಬೆರಳು ಎಷ್ಟು ನೋಯುತ್ತಿದೆ ಎಂದು ತಿಳಿಯಲು ನನ್ನನ್ನು ಮೈದಾನದಿಂದ ಓಡಿಸಿದರು. ಅದನ್ನು ಪರಿಶೀಲಿಸಲು ಮತ್ತು ನನಗೆ ಹೇಗೆ ಫೀಲ್ ಆಗುತ್ತಿದೆ ಎಂದು ತಿಳಿಯಲು ನಾನು ಸ್ಕ್ಯಾನ್ಗೆ ಒಳಪಟ್ಟಿದ್ದೇನೆ. ಈಗ ಉತ್ತಮವಾಗಿದ್ದೇನೆ," ಎಂದು ಭಾರತ ತಂಡದ ಗೆಲುವಿನ ನಂತರ ಪ್ರಸಾರಕರಿಗೆ ಶುಭ್ಮನ್ ಗಿಲ್ ಹೇಳಿದರು.
ಇದಕ್ಕೂ ಮುನ್ನ ಸೋಮವಾರ ಭಾರತ ತಂಡದ ಮ್ಯಾನೇಜ್ಮೆಂಟ್ ಹೇಳಿಕೆ ನೀಡಿದ್ದು, "2ನೇ ದಿನದಂದು ಫೀಲ್ಡಿಂಗ್ ಮಾಡುವಾಗ ಶುಭ್ಮನ್ ಗಿಲ್ ಅವರ ಬಲ ತೋರು ಬೆರಳಿಗೆ ಗಾಯವಾಗಿದೆ. ಅವರು ಸೋಮವಾರ ಮೈದಾನಕ್ಕೆ ಇಳಿಯುವುದಿಲ್ಲ. ಸ್ಲಿಪ್ ಸ್ಥಾನದಲ್ಲಿ ಪ್ರಮುಖ ಸದಸ್ಯರಾದ ಶುಭ್ಮನ್ ಗಿಲ್ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ಕ್ಯಾಚ್ಗಳನ್ನು ತೆಗೆದುಕೊಂಡಿದ್ದರು".
ಭಾರತ ತಂಡದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಫೆಬ್ರವರಿ 15ರಿಂದ ರಾಜ್ಕೋಟ್ನಲ್ಲಿ ನಡೆಯಲಿದೆ.