ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3-1 ಅಂತರದಿಂದ ಮುನ್ನಡೆ ಸಾಧಿಸಿರುವ ಭಾರತ ತಂಡ, ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ತನ್ನ ಆಡುವ 11ರ ಬಳಗದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಯಿದೆ.
ಈ ಸರಣಿಯಲ್ಲಿ ಈಗಾಗಲೇ ನಾಲ್ಕು ಭಾರತೀಯ ಆಟಗಾರರು ಚೊಚ್ಚಲ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದೀಗ ಐದನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಸಮಯಕ್ಕೆ ಸರಿಯಾಗಿ ಫಿಟ್ನೆಸ್ ಮರಳಿ ಪಡೆಯದಿದ್ದರೆ, ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಸಾಲಿನಲ್ಲಿದ್ದಾರೆ.

31 ವರ್ಷದ ಕೆಎಲ್ ರಾಹುಲ್ ಕಳೆದ ವರ್ಷ ತನ್ನ ಕ್ವಾಡ್ರೈಸ್ಪ್ಸ್ನಲ್ಲಿ ಆಪರೇಷನ್ ಮಾಡಿದ ತಜ್ಞರನ್ನು ಸಂಪರ್ಕಿಸಲು ಇತ್ತೀಚೆಗೆ ಮತ್ತೆ ಲಂಡನ್ಗೆ ಹಾರಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಭಾರತ ಟೆಸ್ಟ್ ತಂಡವು ಶನಿವಾರ, ಮಾರ್ಚ್ 2ರಂದು ಧರ್ಮಶಾಲಾಗೆ ಚಾರ್ಟರ್ಡ್ ಫ್ಲೈಟ್ ಅನ್ನು ಏರುವ ಮೊದಲು ಚಂಡೀಗಢದಲ್ಲಿ ಸೇರಲಿದೆ.

ಹಾಗಾಗಿ, ಆ ವೇಳೆಗೆ ಕೆಎಲ್ ರಾಹುಲ್ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವ ಸಾಧ್ಯತೆಗಳು ಕಡಿಮೆ ಇದ್ದು, ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಹಾದಿಯನ್ನು ಸುಗಮಗೊಳಿಸಲಿದೆ.
ರಾಂಚಿ ಟೆಸ್ಟ್ ಪಂದ್ಯದ ನಂತರ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರು ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲಂಡನ್ನಲ್ಲಿ ತಜ್ಞರನ್ನು ಸಂಪರ್ಕಿಸುವ ಕೆಎಲ್ ರಾಹುಲ್ ನಿರ್ಧಾರದ ಹಿನ್ನೆಲೆಯಲ್ಲಿ, ಭಾರತ ತಂಡವು ದೇವದತ್ ಪಡಿಕ್ಕಲ್ ಅವರೊಂದಿಗೆ ಮುಂದುವರಿಯಲು ನಿರ್ಧರಿಸಲಾಗಿದೆ.
ಕರ್ನಾಟಕ ಆಟಗಾರ ದೇವದತ್ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 31 ಪಂದ್ಯಗಳಿಂದ 44.54ರ ಸರಾಸರಿಯಲ್ಲಿ ಆರು ಶತಕಗಳು ಮತ್ತು 12 ಅರ್ಧ ಶತಕಗಳೊಂದಿಗೆ 2227 ರನ್ ಗಳಿಸಿದ್ದಾರೆ.
ಸದ್ಯ ನಡೆಯುತ್ತಿರುವ 2024ರ ರಣಜಿ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ 92.66ರ ಸರಾಸರಿಯಲ್ಲಿ 556 ರನ್ ಗಳಿಸುವ ಮೂಲಕ ಕರ್ನಾಟಕದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ.
ಇದಕ್ಕೂ ಮೊದಲು, ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಗಾಯಗೊಂಡಿದ್ದರಿಂದ, ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ರಜತ್ ಪಾಟಿದಾರ್ ಅವರನ್ನು ತಂಡದಿಂದ ಕೈಬಿಡುವ ಯೋಜನೆಗೆ ಬರಲಾಗಿದೆ.
30 ವರ್ಷದ ರಜತ್ ಪಾಟಿದಾರ್ ಸರಣಿಯಲ್ಲಿ ಇದುವರೆಗೆ 10.5ರ ಸರಾಸರಿಯಲ್ಲಿ ಆರು ಇನ್ನಿಂಗ್ಸ್ಗಳಿಂದ ಕೇವಲ 63 ರನ್ ಗಳಿಸಿದ್ದಾರೆ. ಅವರು ಮೂರನೇ ಮತ್ತು ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕ್ರಮವಾಗಿ ಎರಡು ಡಕ್ ಔಟ್ಗಳನ್ನು ಸಹ ದಾಖಲಿಸಿದರು.
ರಜತ್ ಪಾಟಿದಾರ್ ಕಳಪೆ ಫಾರ್ಮ್ ಅನ್ನು ಅನುಸರಿಸಿ, ಆಯ್ಕೆಗಾರರು ಅವರನ್ನು 2024ರ ರಣಜಿ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಮಧ್ಯಪ್ರದೇಶದ ಸೆಮಿಫೈನಲ್ನಲ್ಲಿ ಭಾಗವಹಿಸಲು ಭಾರತ ತಂಡದಿಂದ ಬಿಡುಗಡೆ ಮಾಡಲು ಬಯಸಿದ್ದಾರೆ.
ಆದಾಗ್ಯೂ, ಕೆಎಲ್ ರಾಹುಲ್ ಫಿಟ್ನೆಸ್ ಅನ್ನು ಮರಳಿ ಪಡೆದ ನಂತರ, ತಂಡಕ್ಕೆ ಮರಳಿದ ಬಳಿಕ ಮಾತ್ರ ಅದು ಸಾಧ್ಯವಾಗುತ್ತದೆ. ಏಕೆಂದರೆ ಭಾರತ ತಂಡಕ್ಕೆ ಬದಲಿ ಅಗತ್ಯವಿದ್ದರೆ ತಂಡದಲ್ಲಿ ಹೆಚ್ಚುವರಿ ಬ್ಯಾಟರ್ ಬೇಕಾಗುತ್ತದೆ.
ಪ್ರಸ್ತುತ, ಕೆಎಲ್ ರಾಹುಲ್ ಲಂಡನ್ನಿಂದ ಹಿಂದಿರುಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಮತ್ತು ಬಲಗೈ ಬ್ಯಾಟರ್ ಬ್ಯಾಟಿಂಗ್ ಪುನರಾರಂಭಿಸುವ ಮೊದಲು ಎನ್ಸಿಎಯಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗುತ್ತದೆ.