ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡ ಸೌರಾಷ್ಟ್ರದ ರಾಜ್ಕೋಟ್ಗೆ ಭಾನುವಾರ, ಫೆಬ್ರವರಿ 11ರಂದು ಆಗಮಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಫೆಬ್ರವರಿ 15ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ ಸೆಣಸಾಡಲಿದೆ.

ರಾಜ್ಕೋಟ್ನ ಸಯಾಜಿ ಹೋಟೆಲ್ನಲ್ಲಿ ಭಾರತ ತಂಡವನ್ನು ಸ್ವಾಗತಿಸಲಾಯಿತು. ಅಲ್ಲಿ ಟೀಮ್ ಇಂಡಿಯಾ ಆಟಗಾರರು ಫೆಬ್ರವರಿ 11ರಿಂದ 19ರವರೆಗೆ ತಂಗಲಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟರ್ ಕೆಎಲ್ ರಾಹುಲ್ ಅವರಿಗೆ ಸೌರಾಷ್ಟ್ರ ಹೆರಿಟೇಜ್ ಥೀಮ್ನೊಂದಿಗೆ ಸೂಟ್ ಅನ್ನು ನಿಗದಿಪಡಿಸಲಾಗಿದೆ. ಇನ್ನು ತಂಡವು ವಿಶೇಷ ಕಥಿಯವಾಡಿ ಪಾಕಪದ್ಧತಿಯನ್ನು ಸವಿದಿದೆ.
ಸೌರಾಷ್ಟ್ರದ ರಾಯಲ್ ಸಂಸ್ಕೃತಿಯನ್ನು ಪ್ರದರ್ಶಿಸುವ ರಾಯಲ್ ಹೆರಿಟೇಜ್ ಥೀಮ್ನ ಪ್ರೆಸಿಡೆನ್ಸಿ ಸೂಟ್ ಕೋಣೆಯನ್ನು ರೋಹಿತ್ ಶರ್ಮಾಗೆ ನಿಯೋಜಿಸಲಾಗಿದೆ.
ಹೋಟೆಲ್ ನಿರ್ದೇಶಕ ಊರ್ವೇಶ್ ಪುರೋಹಿತ್ ಮಾತನಾಡಿ, ಭಾರತೀಯ ಆಟಗಾರರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ ಮತ್ತು ಸಾಮಾನ್ಯವಾಗಿ ಎಲ್ಲೆಡೆ ಪಾಶ್ಚಿಮಾತ್ಯ ವಿಷಯದ ಕೊಠಡಿಗಳನ್ನು ಪಡೆಯುತ್ತಾರೆ. ಹೀಗಾಗಿ ಇದು ಅವರಿಗೆ ಸ್ವಲ್ಪ ಬದಲಾವಣೆಯನ್ನು ನೀಡಲಿದೆ ಎಂದರು.
ಫೆಬ್ರವರಿ 13ರಂದು ಭಾರತ ತಂಡದ ಆಟಗಾರರಿಗೆ ಗುಜರಾತಿ ಮತ್ತು ಕಥಿಯವಾಡಿ ವಿಶೇಷ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೋಟೆಲ್ ನಿರ್ದೇಶಕರು ತಿಳಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಉಪಾಹಾರಕ್ಕಾಗಿ ಫಫ್ಡಾ-ಜಿಲೇಬಿ, ಖಖ್ರಾ, ಗಥಿಯಾ, ಥೇಪ್ಲಾ, ಖ್ಮಾನ್ ಮತ್ತು ವಿಶೇಷ ಕಥಿಯವಾಡಿ ಆಹಾರಗಳಾದ ದಹಿ ಟಿಕಾರಿ, ವಘೆರೆಲಾ ರೊಟ್ಲೋ (ಮೊಸರು ಮತ್ತು ಬೆಳ್ಳುಳ್ಳಿಯೊಂದಿಗೆ ಹುರಿದ ಬಜ್ರಾ ರೋಟಿ), ರಾತ್ರಿಯ ಊಟಕ್ಕೆ ಖಿಚಡಿ ಕಢಿಯನ್ನು ನೀಡಲಾಗುತ್ತದೆ.
ಟೀಂ ಇಂಡಿಯಾ ಆಟಗಾರರು ಕಥಿಯವಾಡಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೋಟೆಲ್ ನಿರ್ದೇಶಕರು ತಿಳಿಸಿದ್ದಾರೆ. ಇದಲ್ಲದೆ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿಶೇಷವಾಗಿ ಖಿಚಡಿ-ಕಢಿಯನ್ನು ಆನಂದಿಸುತ್ತಾರೆ ಮತ್ತು ಮಹೇಂದ್ರ ಸಿಂಗ್ ಧೋನಿ ರಾಜ್ಕೋಟ್ಗೆ ಬಂದಾಗ ಖಿಚಡಿ-ಕಢಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಸದ್ಯ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಫೆಬ್ರವರಿ 15ರಿಂದ 19ರವರೆಗೆ ರಾಜ್ಕೋಟ್ನಲ್ಲಿ ನಡೆಯಲಿದೆ. ಪ್ರಸ್ತುತ ಸರಣಿಯು 1-1 ಅಂತರದಲ್ಲಿ ಸಮಬಲಗೊಂಡಿದೆ ಮತ್ತು ಎರಡೂ ತಂಡಗಳು ಮೂರನೇ ಟೆಸ್ಟ್ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಲು ಪ್ರಯತ್ನಿಸಲಿವೆ.
ಭಾರತ ತಂಡ ಮಂಗಳವಾರ, ಫೆಬ್ರವರಿ 13ರಿಂದ ಮೂರನೇ ಟೆಸ್ಟ್ ಪಂದ್ಯಕ್ಕೆ ಅಭ್ಯಾಸದ ಅವಧಿ ಆರಂಭಿಸಲಿದೆ.
11 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಸೋಲಿಸಿದ ಮೊದಲ ತಂಡವಾಗಿ ಹೊರಹೊಮ್ಮುವ ಗುರಿಯನ್ನು ಇಂಗ್ಲೆಂಡ್ ಹೊಂದಿದೆ. ಕುತೂಹಲಕಾರಿಯಾಗಿ, 2012-13ರಲ್ಲಿ ಅಲೆಸ್ಟರ್ ಕುಕ್ ನಾಯಕತ್ವ ಇಂಗ್ಲೆಂಡ್ ತಂಡವು ಈ ಸಾಧನೆಯನ್ನು ಸಾಧಿಸಿದ ಕೊನೆಯ ತಂಡವಾಗಿದೆ.
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.