
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇದೇ ಗುರುವಾರ ಆಗಸ್ಟ್ 12ರಂದು ಆರಂಭವಾಗಲಿದೆ. ಈ ಹಿಂದೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವುದೇ ಫಲಿತಾಂಶ ಸಿಗದೇ ಪಂದ್ಯ ಡ್ರಾ ಆಗಿತ್ತು. ಕೊನೆಯ ಹಂತದಲ್ಲಿ ಗೆಲ್ಲುವ ಸನಿಹ ಬಂದಿದ್ದ ಟೀಮ್ ಇಂಡಿಯಾಕ್ಕೆ ವರುಣನ ಅಡ್ಡಿಯುಂಟಾಯಿತು.
ಹೀಗೆ ಮಳೆ ಕಾಟದಿಂದ ಮೊದಲನೇ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡ ಟೀಮ್ ಇಂಡಿಯಾ ಸದ್ಯ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಜಯಗಳಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆಯಲು ಹಾತೊರೆಯುತ್ತಿದೆ. ಇದೀಗ ಮೊದಲನೇ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ಕುರಿತು ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಜಯ ಸಿಗದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಮುಂಬರಲಿರುವ ಎರಡನೇ ಟೆಸ್ಟ್ ಪಂದ್ಯದ ಕುರಿತು ಹವಾಮಾನ ವರದಿಯನ್ನು ರವಿಚಂದ್ರನ್ ಅಶ್ವಿನ್ ನೀಡಿದ್ದಾರೆ.
'ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಫಲಿತಾಂಶ ಸಿಗದೇ ಇರುವುದು ಬೇಸರವನ್ನುಂಟು ಮಾಡಿದೆ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ ರೀತಿ ನಿಜಕ್ಕೂ ಅತ್ಯುತ್ತಮವಾಗಿತ್ತು. ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಪಡೆದಿದ್ದವು ಆದರೆ ಈ ಬಾರಿ ಮಳೆಯಿಂದಾಗಿ ಯಾವುದೇ ಫಲಿತಾಂಶ ಸಿಗದೇ ಇರುವುದು ಬೇಸರ ಸೃಷ್ಟಿಸಿದೆ. ವರುಣನ ಆಗಮನ ಆಗದೆ ಇದ್ದಿದ್ದರೆ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಬಹುದಿತ್ತು' ಎಂದು ರವಿಚಂದ್ರನ್ ಅಶ್ವಿನ್ ಮೊದಲನೇ ಪಂದ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಷ್ಟೇ ಅಲ್ಲದೆ ಸದ್ಯ ಲಾರ್ಡ್ಸ್ ಅಂಗಳದಲ್ಲಿರುವ ರವಿಚಂದ್ರನ್ ಅಶ್ವಿನ್ ಆಗಸ್ಟ್ 12 ಗುರುವಾರದಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕುರಿತು ಸಹ ಮಾತನಾಡಿದ್ದು ಲಾರ್ಡ್ಸ್ನಲ್ಲಿ ಹವಾಮಾನ ವರದಿ ಹೇಗಿದೆ ಮತ್ತು ಎರಡನೇ ಪಂದ್ಯಕ್ಕೂ ಸಹ ಮಳೆ ಅಡ್ಡಿ ಉಂಟಾಗಲಿದೆಯಾ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಲಾರ್ಡ್ಸ್ ಹವಾಮಾನ ವರದಿ ಕುರಿತು ಮಾತನಾಡಿರುವ ರವಿಚಂದ್ರನ್ ಅಶ್ವಿನ್ 'ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದುದ್ದಕ್ಕೂ ಮಳೆಯಾಗುವ ಸಂಭವ ಕಡಿಮೆಯಿದ್ದು ಆಟಗಾರರಿಗೆ ಅನುಕೂಲವಾಗುವಂತಹ ವಾತಾವರಣವಿರಲಿದೆ' ಎಂದು ತಿಳಿಸಿದ್ದಾರೆ.
ಇದೇ ವೇಳೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ತಮಗಿರುವ ಕೆಲ ನೆನಪುಗಳ ಕುರಿತು ಮೆಲುಕು ಹಾಕಿರುವ ರವಿಚಂದ್ರನ್ ಅಶ್ವಿನ್ 2011ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು 2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಅವಕಾಶ ಪಡೆದ ರವಿಚಂದ್ರನ್ ಅಶ್ವಿನ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ಆಡಿದ್ದ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದಾಗ ತಮ್ಮ ತಂಡದ ಸಹ ಆಟಗಾರ ಅಜಿಂಕ್ಯ ರಹಾನೆ ಅಮೋಘ ಶತಕ ಸಿಡಿಸಿದ್ದ ಘಳಗೆಯನ್ನು ರವಿಚಂದ್ರನ್ ಅಶ್ವಿನ್ ನೆನಪಿಸಿಕೊಂಡಿದ್ದಾರೆ.
ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮತ್ತು ಮುಂಬರಲಿರುವ ಎರಡನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿರುವ ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿಯೂ ಮೊದಲನೇ ಪಂದ್ಯದಲ್ಲಿ ಭಾಗವಹಿಸಿದ್ದ ಶಾರ್ದೂಲ್ ಠಾಕೂರ್ ಸದ್ಯ ಗಾಯದ ಸಮಸ್ಯೆಗೆ ಒಳಗಾಗಿದ್ದು ಎರಡನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲು ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.