
ಲಂಡನ್, ಸೆಪ್ಟೆಂಬರ್ 2: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೋಚ್ ರವಿ ಶಾಸ್ತ್ರಿ ಹಾಗೂ ತಮ್ಮ ನಡುವಿನ ಬಾಂಧವ್ಯದ ಬಗ್ಗೆ ನಾಯಕ ಮುಕ್ತವಾಗಿ ಮಾತನಾಡಿದ್ದಾರೆ. ಇಬ್ಬರ ನಡುವೆ ಪರಸ್ಪರ ಗೌರವ ಹಾಗೂ ನಂಬಿಕೆ ಗಟ್ಟಿಯಾಗಿದೆ. ಅದೇ ಕಾರಣದಿಂದಾಗಿ ತಂಡ ಸಾಕಷ್ಟು ಬಲಿಷ್ಠವಾಗಿದೆ. ವಿಶ್ವದ ಉಳಿದ ಎಲ್ಲಾ ತಂಡಗಳು ಕೂಡ ನಮ್ಮ ವಿರುದ್ಧ ಗೆಲುವು ಸಾಧಿಸಬೇಕು ಎಂಬ ಭಾವನೆ ಮೂಡಲು ಇದೇ ಕಾರಣ ಎಂದಿದ್ದಾರೆ ವಿರಾಟ್ ಕೊಹ್ಲಿ.
ನಾಲ್ಕನೇ ಟೆಸ್ಟ್ನ ಆರಂಭಕ್ಕೆ ಮುನ್ನಾದಿನ ಸಂಜೆ ಹೋಟೆಲ್ನಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಹಾಗೂ ತಂಡ ಭಾಗಿಯಾಗಿತ್ತು. ಭಾರತದ ಕೋಚ್ ರವಿ ಶಾಸ್ತ್ರಿ ಜೊತೆಗೆ ತಮ್ಮ ಒಡನಾಟ ಹಾಗೂ ಆಪ್ತತೆಯ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಕೊಹ್ಲಿ ಟೀಮ್ ಇಂಡಿಯಾ ಈಗ ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡವಾಗಿದ್ದು ಉಳಿದ ಎಲ್ಲಾ ತಂಡಗಳು ಕೂಡ ನಮ್ಮ ವಿರುದ್ಧ ಗೆಲುವು ಸಾಧಿಸಬೇಕೆಂದುಕೊಂಡಿರುತ್ತಾರೆ. ತಂಡದ ಈ ಸ್ಥಾನಕ್ಕೆ ಕಾರಣ ಕೋಚ್ ರವಿ ಶಾಸ್ತ್ರಿ ಜೊತೆಗೆ ಹೊಂದಿರುವ ಬಾಂಧವ್ಯ ಎಂದಿದ್ದಾರೆ ವಿರಾಟ್ ಕೊಹ್ಲಿ.
"ನಮ್ಮ ನಡುವೆ ಮೈದಾನದ ಒಳಗೆ ಮತ್ತು ಹೊರಗಿನ ಬಾಂಧವ್ಯ ಅದ್ಭುತವಾಗಿದೆ. ಪರಸ್ಪರ ಗೌರವ ಮತ್ತು ವಿಶ್ವಾಸ, ಸ್ಪಷ್ಟವಾದ ದೃಷ್ಟಿಕೋನದೊಂದಿಗೆ ಈ ಬಾಂಧವ್ಯ ಗಟ್ಟಿಯಾಗಿದೆ. ನಮ್ಮ ಗುರಿ ಕೂಡ ಒಂದೇ ದಿಕ್ಕಿನತ್ತ ಕೇಂದ್ರೀಕರಿಸಲ್ಪಟ್ಟಿದೆ. ಇದು ಭಾರತೀಯ ಕ್ರಿಕೆಟ್ಅನ್ನು ನಾವು ಅಂದುಕೊಂಡಿದ್ದಕ್ಕಿಂತ ಉನ್ನತ ಸ್ಥಾನಕ್ಕೆ ಏರಿಸುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ನಾವು ಇದೇ ಗುರಿಯನ್ನು ಹೊಂದಿದ್ದೆವು. ಇಡೀ ತಂಡದಲ್ಲಿ ಉತ್ತಮ ಪ್ರತಿಭೆಗಳನ್ನು ಪಡೆಯಲು ನಾವು ಅದೃಷ್ಟಹೊಂದಿದ್ದೇವೆ. ಹೀಗಾಗಿ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
"ಈಗ ನಾವು ಜಗತ್ತಿನಲ್ಲಿ ಕ್ರಿಕೆಟ್ ಆಡುವ ಎಲ್ಲಾ ತಂಡಗಳು ಕೂಡ ಸೋಲಿಸಲು ಬಯಸುವ ತಂಡವಾಗಿ ಬೆಳೆದಿದ್ದೇವೆ. ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ.
ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಬರೆದಿರುವ ಪುಸ್ತಕ "ಸ್ಟಾರ್ಗೇಸಿಂಗ್: ದಿ ಪ್ಲೇಯರ್ಸ್ ಇನ್ ಮೈ ಲೈಫ್" ಬಿಡುಗಡೆಯ ನಂತರ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾ ಈ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರು "ಇದು ಅವರ ರವಿ ಶಾಸ್ತ್ರಿ ಅವರ ಮೊದಲ ಪುಸ್ತಕ. ನನ್ನ ಪ್ರಕಾರ ಅವರು ಮತ್ತಷ್ಟು ಪುಸ್ತಕಗಳನ್ನು ಬರೆಯಲಿದ್ದಾರೆ. ಯಾಕೆಂದರೆ ಅವರಲ್ಲಿ ಹಂಚಿಕೊಳ್ಳಲು ಸಾಕಷ್ಟು ಸಂಗತಿಗಳು ಇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ"
ಇನ್ನು ಮುಮದುವರಿದು ಮಾತನಾಡಿದ ವಿರಾಟ್ ಕೊಹ್ಲಿ, "ರವಿ ಶಾಸ್ತ್ರಿ ಹೊಂದಿರುವ ಅನುಭವ ನಮ್ಮ ಪಾಲಿಗೆ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಮುಂದುವರಿಯುವ ವಿಶ್ವಾಸವಿದೆ. ನಮ್ಮ ನಡುವಿನ ಕೆಲಸದ ಹೊಂದಾಣಿಹೆಯ ಬಗ್ಗೆ ಹಾಗೂ ಬಾಂಧವ್ಯದ ಬಗ್ಗೆ ಕೆಲ ಮಾತುಗಳನ್ನು ನಾನು ಹೇಳಬಹುದು. ಇದು 2014 ರಿಂದ ಆರಂಭವಾಯಿತು. ನಾನು ಇವರನ್ನು ತುಂಬಾ ಬಾರಿ ಭೇಟಿಯಾಗಿದ್ದೆ ಯಾಕೆಂದರೆ ಭಾರತದಲ್ಲಿ ಹಾಗೂ ವಿಶ್ವಾದ್ಯಂತ ಕ್ರಿಕೆಟ್ ವಿಚಾರವಾಗಿ ತುಂಬಾ ಗಟ್ಟಿ ಧ್ವನಿಯನ್ನು ಹೊಂದಿದವರು ರವಿ ಶಾಸ್ತ್ರಿ. ನಾವು ಮೊದಲಿಗೆ ಅವರ ಕಾಮೆಂಟರಿ ಕೌಶಲ್ಯದ ಬಗ್ಗೆ ಎದುರುನೋಡುತ್ತಿದ್ದೆವು. ನಾವು ಅದಾದ ಬಳಿಕ ಜೊತೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದೆವು" ಎಂದು ನೆನಪಿಸಿಕೊಂಡಿದ್ದಾರೆ ಟೀಮ್ ಇಂಡಿಯಾ ನಾಯಕ.