ಗುರುವಾರ, ಜನವರಿ 25ರಿಂದ ಆರಂಭವಾಗುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ವೈಯಕ್ತಿಕ ಕಾರಣಗಳಿಗಾಗಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ.
ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತನ್ನ ಅಧಿಕೃತ ಹೇಳಿಕೆಯಲ್ಲಿ, ವಿರಾಟ್ ಕೊಹ್ಲಿ ಅವರು ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್ಮೆಂಟ್ನೊಂದಿಗೆ ತಮ್ಮ ಅನುಪಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಮತ್ತು ತಂಡದ ಆಟಗಾರರಿಗೆ ತಮ್ಮ ಬೆಂಬಲವನ್ನು ನೀಡಿದರು ಎಂದು ತಿಳಿಸಿದೆ.

"ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ಕೈಬಿಡುವಂತೆ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ," ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
"ವಿರಾಟ್ ಕೊಹ್ಲಿ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಂಡದ ಮ್ಯಾನೇಜ್ಮೆಂಟ್ ಮತ್ತು ಆಯ್ಕೆಗಾರರೊಂದಿಗೆ ಮಾತನಾಡಿದ್ದಾರೆ. ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ತನ್ನ ಪ್ರಮುಖ ಆದ್ಯತೆಯಾಗಿದೆ, ಕೆಲವು ವೈಯಕ್ತಿಕ ಸನ್ನಿವೇಶಗಳು ತಮ್ಮ ಉಪಸ್ಥಿತಿ ಮತ್ತು ಗಮನವನ್ನು ಬಯಸುತ್ತವೆ ಎಂದು ಒತ್ತಿಹೇಳಿದ್ದಾರೆ," ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿಗೆ 'ವೈಯಕ್ತಿಕ ಕಾರಣಗಳಿಂದ' ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯವನ್ನು ವಿರಾಟ್ ಕೊಹ್ಲಿ ತಪ್ಪಿಸಿಕೊಂಡಿದ್ದರು.
ಬಿಸಿಸಿಐ ಹೇಳಿಕೆಯಲ್ಲಿ ಮಾಧ್ಯಮಗಳಿಗೆ 'ಕೊಹ್ಲಿಯ ವೈಯಕ್ತಿಕ ಕಾರಣಗಳ ಸ್ವರೂಪದ ಬಗ್ಗೆ' ಊಹಾಪೋಹಗಳಿಂದ ದೂರವಿರಲು ಕೇಳಿಕೊಂಡಿದೆ ಮತ್ತು ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿಗೆ ಬದಲಿ ಆಟಗಾರನನ್ನು ಘೋಷಿಸಲಾಗುವುದು ಎಂದು ಹೇಳಿದೆ.
"ಕೊಹ್ಲಿ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ ಮತ್ತು ಮಂಡಳಿ ಮತ್ತು ತಂಡದ ಮ್ಯಾನೇಜ್ಮೆಂಟ್ ಸ್ಟಾರ್ ಬ್ಯಾಟರ್ಗೆ ತನ್ನ ಬೆಂಬಲವನ್ನು ನೀಡಿದೆ ಮತ್ತು ಟೆಸ್ಟ್ ಸರಣಿಯಲ್ಲಿ ಶ್ಲಾಘನೀಯ ಪ್ರದರ್ಶನಗಳನ್ನು ಹೆಚ್ಚಿಸಲು ಮತ್ತು ಉಳಿದ ತಂಡದ ಸದಸ್ಯರ ಸಾಮರ್ಥ್ಯಗಳಲ್ಲಿ ವಿಶ್ವಾಸವಿದೆ," ಎಂದು ಹೇಳಿದೆ.
ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಮತ್ತು ಅವರ ವೈಯಕ್ತಿಕ ಕಾರಣಗಳ ಸ್ವರೂಪದ ಬಗ್ಗೆ ಊಹಾಪೋಹಗಳಿಂದ ದೂರವಿರಲು ಬಿಸಿಸಿಐ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ವಿನಂತಿಸಿದೆ.
"ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಂಬರುವ ಸವಾಲುಗಳನ್ನು ಎದುರಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡವನ್ನು ಬೆಂಬಲಿಸುವತ್ತ ಗಮನಹರಿಸಬೇಕು,'' ಎಂದು ಬಿಸಿಸಿಐ ತನ್ನ ಹೇಳಿಕೆಯನ್ನು ಮುಕ್ತಾಯಗೊಳಿಸಿದೆ.