ಬಿಸಿಸಿಐ ತೀರ್ಮಾನವನ್ನು ಸ್ವಾಗತಿಸಿದ ಸುನಿಲ್ ಗವಾಸ್ಕರ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದು ಗೊಳಿಸಿದ ನಂತರ ಮುಂದಿನ ದಿನಗಳಲ್ಲಿ ಈ ಪಂದ್ಯವನ್ನು ಪುನಃ ಆಯೋಜಿಸುವ ತೀರ್ಮಾನ ಕೈಗೊಂಡ ಬಿಸಿಸಿಐ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಮಾಡದೇ ಮುಂದಿನ ದಿನಗಳಲ್ಲಿ ಪಂದ್ಯವನ್ನು ಆಯೋಜಿಸಲು ಮುಂದಾಗಿರುವ ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಡೆಯನ್ನು ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ನಡೆದುಕೊಂಡ ರೀತಿಯನ್ನು ಮರೆಯೋಕಾಗಲ್ಲ ಎಂದ ಗವಾಸ್ಕರ್
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ರೀತಿಯೇ 2008ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 2 ಏಕದಿನ ಪಂದ್ಯಗಳು ರದ್ದಾಗಿದ್ದವು. ನವೆಂಬರ್ 26ರಂದು ಮುಂಬೈ ಅಟ್ಯಾಕ್ ನಡೆದಿದ್ದ ಕಾರಣ 7 ಪಂದ್ಯಗಳ ಏಕದಿನ ಸರಣಿಯ ಕೊನೆಯ 2 ಪಂದ್ಯಗಳು ರದ್ದಾಗಿದ್ದವು ಮತ್ತು ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ತವರಿಗೆ ಮರಳಿದ್ದರು. ಹೀಗೆ ರದ್ದಾಗಿದ್ದ 2 ಏಕದಿನ ಪಂದ್ಯಗಳನ್ನು ನಂತರದ ದಿನಗಳಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನಾಡಲು ಭಾರತ ಪ್ರವಾಸವನ್ನು ಕೈಗೊಂಡಿದ್ದಾಗ ಯಶಸ್ವಿಯಾಗಿ ಮುಂದುವರಿಸಲಾಯಿತು ಎಂದು ಸುನೀಲ್ ಗವಾಸ್ಕರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ರದ್ದಾದ ಮ್ಯಾಂಚೆಸ್ಟರ್ ಪಂದ್ಯ ಮುಂದಿನ ವರ್ಷ ನಡೆಯಲಿದೆ
ಸದ್ಯ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಕೊರೊನ ವೈರಸ್ ಕಾರಣದಿಂದ ರದ್ದಾಗಿದ್ದು ಮುಂದಿನ ವರ್ಷ ಟೀಮ್ ಇಂಡಿಯಾ ಸೀಮಿತ ಓವರ್ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ರದ್ದಾದ ಈ ಟೆಸ್ಟ್ ಪಂದ್ಯವನ್ನು ಪುನಃ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಚಿಂತನೆ ನಡೆಸಿದೆ.