ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಕೇವಲ ಎರಡು ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಮೊದಲ ಇನ್ನಿಂಗ್ಸ್ನ ಆಟಕ್ಕೆ ಮಳೆ ಯಾವುದೇ ರೀತಿಯಲ್ಲಿಯೂ ಅಡ್ಡಿಯುಂಟು ಮಾಡಿರಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 6.5 ಓವರ್ಗಳ ಆಟಕ್ಕೆ ಮಾತ್ರವೇ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಡಿಎಲ್ ನಿಯಮದ ಆಧಾರದಲ್ಲಿ ಪಂದ್ಯದ ಫಲಿತಾಂಶವನ್ನು ಕಂಡುಕೊಳ್ಳಬೇಕಾಯಿತು.
ಈರ್ಲೆಂಡ್ ತಂಡ ನೀಡಿದ್ದ 140 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಮೊದಲ ವಿಕೆಟ್ಗೆ 46 ರನ್ಗಳ ಜೊತೆಯಾಟವನ್ನು ಪಡೆಯಿತು. 6.2 ಓವರ್ಗಳಾಗಿದ್ದಾಗ ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 24 ರನ್ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಮುಂದಿನ ಎಸೆತದಲ್ಲಿಯೇ ತಿಲಕ್ ವರ್ಮಾ ಕೂಡ ಗೋಲ್ಡನ್ ಡಕ್ಗೆ ಬಲಿಯಾದರು. ನಂತರ ಅದೇ ಓವರ್ನ 5ನೇ ಎಸೆತದ ಬಳಿಕ ಮಳೆ ಜೋರಾಗಿ ಸುರಿದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಆದರೆ ಅದಾದ ಬಳಿಕ ಪಂದ್ಯ ಮುಂದುವರಿಯಲು ಮಳೆ ಅವಕಾಶವನ್ನೇ ನೀಡಲಿಲ್ಲ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ 6.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 47 ರನ್ಗಳನ್ನು ಗಳಿಸಿತ್ತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಮ್ ಇಂಡಿಯಾ ಕೇವಲ ಎರಡು ರನ್ಗಳ ಅಂತರದಿಂದ ಐರ್ಲೆಂಡ್ ತಂಡಕ್ಕಿಂತ ಮುಂದಿತ್ತು. ಅಂತಿಮವಾಗಿ ಮಳೆಯಿಂದಾಗಿ ಪಂದ್ಯ ಪುನಾರಂಭವಾಗುವುದು ಅಸಾಧ್ಯವೆಂದು ದೃಢಪಟ್ಟಾಗ ಭಾರತ ತಂಡ ಎರಡು ರನ್ಗಳ ಅಂತರದಿಂದ ಗೆದ್ದಿದೆ ಎಂದು ಘೋಷಿಸಲಾಯಿತು. ಋತುರಾಜ್ ಗಾಯಕ್ವಾಡ್ 19 ರನ್ಗಳನ್ನು ಗಳಿಸಿ ಅಜೇಯವಾಗಿಳಿದಿದ್ದರೆ ಸಂಜು ಸ್ಯಾಮ್ಸನ್ ಒಂದು ರನ್ಗಳಿಸಿ ಕ್ರೀಸ್ನಲ್ಲಿದ್ದರು.
ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ನಿರ್ಧಾರವನ್ನು ಮೊದಲ ಓವರ್ನಲ್ಲಿಯೇ ಸ್ವತಃ ನಾಯಕ ಬೂಮ್ರಾ ಸಮರ್ಥನೆ ಮಾಡಿಕೊಂಡರು. ಆರಂಭಿಕ ಓವರ್ನಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಆತಿಥೇಯ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅದಾದ ಬಳಿಕ ಹ್ಯಾರಿ ಟೆಕ್ಟರ್ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ವಿಕೆಟ್ ಕಲೆದುಕೊಂಡರೆ ರವಿ ಬಿಷ್ಣೋಯ್ ನಾಯಕ ಸ್ಟಿರ್ಲಿಂಗ್ ವಿಕಟ್ ಕಬಳಿಸಿದರು. ನಂತರ ಡಾಕ್ರೆಲ್ ವಿಕೆಟ್ ಪ್ರಸಿದ್ಧ ಕೃಷ್ಣಗೆ ನೀಡಿದಾಗ ಐರ್ಲೆಂಡ್ ತಂಡ ಕೇವಲ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ನಂತರ ಮಾರ್ಕ್ ಅದೈರ್ ಕೂಡ16 ರನ್ಗಳ ಕೊಡುಗೆ ನಿಡಿ ನಿರ್ಗಮಿಸಿದರು. ಆದರೆ ಬಳಿಕ ಕರ್ಟೀಸ್ ಕ್ಯಾಫೈರ್ ಹಾಗೂ ಬಾರಿ ಮೆಕ್ಕರ್ತಿ ಅದ್ಭುತ ಜೊತೆಯಾಟವೊಂದರಲ್ಲಿ ಭಾಗಿಯಾದರು. ಕ್ಯಾಂಫರ್ 39 ರನ್ಗಳ ಕೊಡುಗೆ ನೀಡಿದರೆ ಮೆಕ್ಕರ್ತಿ ಕೊನೆಯವರೆಗೂ ಹೋರಾಟ ನಡೆಸಿ 3 ಎಸೆತಗಳಲ್ಲಿ 51 ರನ್ಗಳನ್ನು ಗಳಿಸಿ ಅಜೇಯವಾಗುಳಿದರು. ಹೀಗಾಗಿ ಐರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ಗಳನ್ನು ಗಳಿಸಿದೆ.
ಟೀಮ್ ಇಂಡಿಯಾ ಪರವಾಗಿ ನಾಯಕ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಇನ್ನು ಅರ್ಷ್ದೀಪ್ ಸಿಂಗ್ ಅವರು ಒಂದು ವಿಕೆಟ್ ಸಂಪಾದಿಸಿದರು. ಈ ಮೂಲಕ ಭಾರತದ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು.
ಟೀಮ್ ಇಂಡಿಯಾ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್