ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್ ಮತ್ತು 141 ರನ್ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ.
ಎರಡನೇ ಮತ್ತು ಅಂತಿಮ ಟೆಸ್ಟ್ ಜುಲೈ 20ರಂದು ಪ್ರಾರಂಭವಾಗಲಿದೆ. ಟೆಸ್ಟ್ ಸರಣಿ ನಂತರ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೆಣಸಾಡಲಿದೆ. ಅನಂತರ ಐದು ಪಂದ್ಯಗಳ ಟಿ20 ಸರಣಿಯನ್ನು ಪೂರ್ಣಗೊಳಿಸಿದ ನಂತರ ಕೆರಿಬಿಯನ್ ನಾಡಿನಿಂದ ತೆರಳಲಿದೆ.
ಇದರ ನಂತರ, ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಐರ್ಲೆಂಡ್ಗೆ ಪ್ರಯಾಣಿಸಲಿದೆ. ಎಲ್ಲಾ ಮೂರು ಪಂದ್ಯಗಳನ್ನು ಆಗಸ್ಟ್ 18, 20 ಮತ್ತು 23ರಂದು ಡಬ್ಲಿನ್ನಲ್ಲಿ ಆಡಲಿದೆ.

ಕ್ರಿಕ್ಬಜ್ ವರದಿಯ ಪ್ರಕಾರ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಅವರ ಕೋಚಿಂಗ್ ಸಿಬ್ಬಂದಿಯು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ನಂತರ, ವಿಶ್ರಾಂತಿಗಾಗಿ ಭಾರತಕ್ಕೆ ಮರಳಲಿದ್ದಾರೆ.
ರಾಹುಲ್ ದ್ರಾವಿಡ್ ನೇತೃತ್ವದ ಕೋಚ್ ಸಿಬ್ಬಂದಿಯು ಐರ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡದೊಂದಿಗೆ ತೆರಳುವುದಿಲ್ಲ. ಇದೇ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಐರ್ಲೆಂಡ್ನಲ್ಲಿ ಭಾರತ ತಂಡದ ಕೋಚಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೊಟಕ್ ಅಥವಾ ಹೃಷಿಕೇಶ್ ಕಾನಿಟ್ಕರ್ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇನ್ನು ಬೌಲಿಂಗ್ ಕೋಚ್ ಹುದ್ದೆಯನ್ನು ಟ್ರಾಯ್ ಕೂಲಿ ಅಥವಾ ಸಾಯಿರಾಜ್ ಬಹುತುಲೆಗೆ ನೀಡುವ ನಿರೀಕ್ಷೆಯಿದೆ.
ವಿವಿಎಸ್ ಲಕ್ಷ್ಮಣ್ ಅವರು ಕೊನೆಯ ಬಾರಿ 2022ರಲ್ಲಿ ಐರ್ಲೆಂಡ್ಗೆ ಪ್ರಯಾಣಿಸಿದಾಗ ಭಾರತೀಯ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು.
ಇನ್ನು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬಹು ನಿರೀಕ್ಷಿತ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಪುನರಾಗಮನ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಏಷ್ಯಾ ಕಪ್, ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ಉತ್ತಮ ತಯಾರಿಯಾಗಿರಲಿದೆ.
ಐರ್ಲೆಂಡ್ ವಿರುದ್ಧ ಸರಣಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿರುವ ಶ್ರೇಯಸ್ ಅಯ್ಯರ್ ಐರ್ಲೆಂಡ್ ರಾಷ್ಟ್ರಕ್ಕೆ ಪ್ರಯಾಣಿಸುವ ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮತ್ತೊಬ್ಬ ಆಟಗಾರ ಕೆಎಲ್ ರಾಹುಲ್ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗಿದೆ. ಹೀಗಾಗಿ ಕೆಎಲ್ ರಾಹುಲ್ ಐರ್ಲೆಂಡ್ ಸರಣಿ ಮಾತ್ರವಲ್ಲದೆ ಏಷ್ಯಾ ಕಪ್ನಲ್ಲಿಯೂ ಕಾಣಿಸಿಕೊಳ್ಳುವ ಅವಕಾಶವನ್ನು ಹೊಂದಿಲ್ಲ.