ಭಾರತ ತಂಡ 2026ರ ಆರಂಭವನ್ನು ನ್ಯೂಜಿಲೆಂಡ್ ವಿರುದ್ದದ ಸರಣಿಯಿಂದ ಮಾಡಲಿದೆ. ಈ ಕ್ಯಾಲೆಂಡರ್ ವರ್ಷದ ಮೊದಲ ಸರಣಿ ಇದಾಗಿದೆ. ನಾಯಕ ಶುಭಮನ್ ಗಿಲ್ ಅವರಿಗೆ ದೊಡ್ಡ ಸತ್ವ ಪರೀಕ್ಷೆ. ತವರಿನಲ್ಲಿ ಕಿವೀಸ್ ತಂಡದ ಸದ್ದಡಗಿಸಲು ಗಿಲ್ ಪಡೆ ಯೋಜನೆ ಮಾಡಿಕೊಂಡಿದೆ. ಈಗಾಗಲೇ ತಮ್ಮ ನಾಯಕತ್ವದ ಗುಣಗಳಿಂದ ಗುರುತಿಸಿಕೊಂಡಿರುವ ಶುಭಮನ್ ಗಿಲ್ ಅವರಿಗೆ ಮೊದಲ ತವರಿನ ಸರಣಿ.
ಶುಭಮನ್ ಗಿಲ್ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂಡಕ್ಕೆ ನಾಯಕರಾಗಿ ಆಯ್ಕೆ ಆದರು. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-2 ರಿಂದ ಸೋಲು ಕಂಡಿತ್ತು. ಇದಾದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡುವಾಗ ಗಿಲ್ ಕುತ್ತಿಗೆಯ ಗಾಯಕ್ಕೆ ತುತ್ತಾದರು. ಆ ಬಳಿಕ ಅವರು ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರ ನಡೆದರು. ಹೀಗಾಗಿ ಶುಭಮನ್ ಗಿಲ್ ಅವರಿಗೆ ಇದು ತವರಿನಲ್ಲಿ ಮೊದಲ ಏಕದಿನ ಸರಣಿ ಆಗಿರಲಿದೆ.

ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ತಂಡ ಸೇರಿಕೊಳ್ಳುತ್ತಿದ್ದಂತೆ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಇವರು ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಬೆಂಚ್ ಕಾಯಬೇಕಾಗುತ್ತದೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಈ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಏಕದಿನ ಫಾರ್ಮೆಟ್ನಲ್ಲಿ ಮಾತ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಸದ್ಯ ಇಬ್ಬರೂ ಭರ್ಜರಿ ಫಾರ್ಮ್ ಹೊಂದಿರುವುದಿಂದ ಈ ಆಟಗಾರರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಾಗೂ ದೇಶೀಯ ವಿಜಯ್ ಹಜಾರೆ ಏಕದಿನ ಸರಣಿಯಲ್ಲೂ ಈ ಪ್ಲೇಯರ್ಸ್ ಸ್ಥಿರ ಪ್ರದರ್ಶನ ನೀಡಿದ್ದರು.

ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರು ಮುಂದೆ ಸಾಲು ಸಾಲು ಟಿ20 ಪಂದ್ಯಗಳನ್ನು ಆಡುವ ಸಾಧ್ಯತೆ ಇದ್ದು, ಇದರಿಂದಾಗಿ ಇವರಿಗೆ ಏಕದಿನ ಸರಣಿಯಲ್ಲಿ ವಿಶ್ರಾಂತಿ ನೀಡಬಹುದು. ಈ ಇಬ್ಬರೂ ಆಟಗಾರರು ಟಿ20 ಸರಣಿಯಲ್ಲಿ ಆಡುವ ಸಾಧ್ಯತೆ ಇದೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣಾ ಕಾಣಿಸಿಕೊಳ್ಳಬಹುದಾಗಿದೆ.
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಗೆ ಈ ಸರಣಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಇವರು ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ಅವರ ಕ್ಯಾಚ್ ಪಡೆಯಲು ಹೋಗಿ ಗಾಯಕ್ಕೆ ತುತ್ತಾಗಿದ್ದರು. ಈಗ ಇವರು ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.
ನ್ಯೂಜಿಲೆಂಡ್ ಸರಣಿಗೆ ಭಾರತ ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ವಾಶಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣಾ