
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡಿವಿನ ಏಕದಿನ ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದ್ದು ಎರಡು ತಂಡಗಳು ಕೂಡ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದ ಗುರಿ ನೀಡಿದ ಹೊರತಾಗಿಯೂ ನ್ಯೂಜಿಲೆಂಡ್ ಅಮೋಘ ಹೋರಾಟ ನಡೆಸಿದ ಕಾರಣ ಈ ಪಂದ್ಯ ಕೊನೆಯ ಕ್ಷಣದ ವರೆಗೂ ಕುತೂಹಲ ಕೆರಳುವಂತೆ ಮಾಡಿತ್ತು. ಆದರೆ ಅಂತಿಮವಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 12 ರನ್ಗಳ ಅಂತರದ ಗೆಲುವು ಸಾಧಿಸುವಲದಲಿ ಯಶಸ್ವಿಯಾಗಿತ್ತು.
ಇದೀಗ ಎರಡನೇ ಪಂದ್ಯ ರಾಯ್ಪುರದಲ್ಲಿ ನಡೆಯಲಿದ್ದು ಎರಡು ತಂಡಗಳು ಕೂಡ ಈಗಾಗಲೇ ರಾಯ್ಪುರ ತಲುಪಿ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನಿಡುತ್ತಿದ್ದು ಬೌಲಿಂಗ್ ವಿಭಾಗ ಮೊದಲು ಗಳಿಸಿದ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಮತ್ತೆ ವಿಫಲವಾಗುತ್ತಿರುವುದು ಮ್ಯಾನೇಜ್ಮೆಂಟ್ಗೆ ಚಿಂತೆ ಹೆಚ್ಚಿಸಿದೆ.
ಆದರೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರ ಫಾರ್ಮ್ ಮ್ಯಾನೇಜ್ಮೆಂಟ್ಗೆ ಸಮಾಧಾನ ತಂದಿದೆ. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರ ತೀಕ್ಷ್ಣ ದಾಳಿ ತಂಡಕ್ಕೆ ದೊಡ್ಡ ಭರವಸೆ ಮೂಡಿಸಿರುವುದು ಸುಳ್ಳಲ್ಲ.
ಇನ್ನು ನ್ಯೂಜಿಲೆಂಡ್ ತಂಡ ಮೊದಲ ಪಂದ್ಯದಲ್ಲಿ ಎಲ್ಲಿ ಎಡವಿತ್ತು ಎಂಬುದನ್ನು ಅರಿತುಕೊಂಡು ಕಣಕ್ಕಿಳಿಯಲಿದೆ. ಅದರಲ್ಲೂ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ವಿರುದ್ಧ ಮತ್ತಷ್ಟು ತೀಕ್ಷ್ಣ ರಣತಂತ್ರಗಳೊಂದಿಗೆ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಆರಂಬಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅವರನ್ನು ಬೇರ್ಪಡಿಸುವುದರ ಜೊತೆಗೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಪಲವಾಗಿದ್ದರೂ ಅವರ ಫಾರ್ಮ್ ಕಿವೀಸ್ ಪಡೆಗೆ ಆಘಾತ ನೀಡಲಿದೆ ಎಂಬುದು ಸ್ಪಷ್ಟ. ಹೀಗಾಗಿ ಅಗ್ರ ಕ್ರಮಾಂಕದ ಆಟಗಾರರ ವಿರುದ್ಧ ಕಠಿಣ ರಣತಂತ್ರ ಹೆಣೆಯುವುದರಲ್ಲಿ ಅನುಮಾನವಿಲ್ಲ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಶ್ರೀಕರ್ ಭರತ್, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್ , ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್, ಮಾರ್ಕ್ ಚಾಪ್ಮನ್, ಡೌಗ್ ಬ್ರೇಸ್ವೆಲ್, ಜಾಕೋಬ್ ಡಫ್ಲಿ