ಭಾನುವಾರ, ಆಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ನ 21ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 4 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.
ನ್ಯೂಜಿಲೆಂಡ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ ಮತ್ತು ಆತನಿಗಿಂತ ಉತ್ತಮ ಫಿನಿಶರ್ ಇರಲು ಸಾಧ್ಯವಿಲ್ಲ ಎಂದು ಗಮನ ಸೆಳೆದಿದ್ದಾರೆ.

ಕಿವೀಸ್ ನೀಡಿದ್ದ 274 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 48 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು. ಆಲ್ರೌಂಡರ್ ರವೀಂದ್ರ ಜಡೇಜಾ ಗೆಲುವಿನ ಬೌಂಡರಿ ಬಾರಿಸಿದರು.
ಈ ವೇಳೆ ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 95 ರನ್ ಗಳಿಸಿ ಎರಡು ಬಾರಿಯ ಚಾಂಪಿಯನ್ ತಂಡಕ್ಕೆ ಎರಡು ಓವರ್ಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ಗಳ ಗೆಲುವು ದಾಖಲಿಸಲು ಸಹಾಯ ಮಾಡಿದರು.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ನಡೆದ ಚರ್ಚೆಯ ವೇಳೆ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದ ಬ್ಯಾಟರ್ ಆಗಿ ಆಟವನ್ನು ಪೂರ್ಣಗೊಳಿಸಿದ ಬಗ್ಗೆ ಗೌತಮ್ ಗಂಭೀರ್ ಅವರನ್ನು ಕೇಳಲಾಯಿತು, ಅದಕ್ಕೆ ಅವರು ಪ್ರತಿಕ್ರಿಯಿಸಿ, ""ಫಿನಿಶರ್ ಟ್ಯಾಗ್ ಅನ್ನು 5ರಿಂದ 7 ಕ್ರಮಾಂಕದ ಬ್ಯಾಟರ್ಗಳಿಗೆ ಮಾತ್ರ ಏಕೆ ನೀಡಲಾಗಿದೆ ಎಂದು ನನಗೆ ಅರ್ಥವಾಗಿಲ್ಲ''.

"ಅಗ್ರ ಕ್ರಮಾಂಕದ ಬ್ಯಾಟರ್ ಕೂಡ ಫಿನಿಶರ್ ಆಗಿರಬಹುದು. 11ರಲ್ಲಿ ಬರುವ ಬ್ಯಾಟರ್ ಫಿನಿಶರ್ ಆಗಿರಬಹುದು. ಇದನ್ನು ಮಾಧ್ಯಮಗಳು ಈಗಷ್ಟೇ ರಚಿಸಿವೆ," ಎಂದು ತಿಳಿಸಿದರು.
"10 ವರ್ಷಗಳ ಹಿಂದೆ ಬಹುಶಃ ಯಾವುದೇ ಫಿನಿಶರ್ ಇರಲಿಲ್ಲ, ವಿರಾಟ್ ಕೊಹ್ಲಿ ಅವರು ಗೆಲ್ಲಿಸಿರುವ ಪಂದ್ಯಗಳ ಸಂಖ್ಯೆಯಿಂದಾಗಿ ಅವರಿಗಿಂತ ಉತ್ತಮ ಫಿನಿಶರ್ ಇರಲು ಸಾಧ್ಯವಿಲ್ಲ. ಹೀಗಾಗಿ 5, 6 ಮತ್ತು 7ನೇ ಕ್ರಮಾಂಕಗಳನ್ನು ಮಾತ್ರ ಫಿನಿಶರ್ ಎಂದು ಕರೆಯಬೇಡಿ. ಕೊನೆಯ ರನ್ ಗಳಿಸುವವನು ಫಿನಿಶರ್,'' ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
ಫಿನಿಶರ್ ಟ್ಯಾಗ್ ಇರಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು 'ಮಾಸ್ಟರ್ ಬ್ಲಾಸ್ಟರ್' ಎಂದು ಕರೆಯುವಂತೆಯೇ, ವಿರಾಟ್ ಕೊಹ್ಲಿಯನ್ನು ಸಮರ್ಥವಾಗಿ "ಮಾಸ್ಟರ್ ಚೇಸರ್' ಎಂದು ಕರೆಯಬೇಕು ಎಂದು ಅವರು ಸಂಜಯ್ ಮಂಜ್ರೇಕರ್ ಅವರೊಂದಿಗೆ ಸಮ್ಮತಿಸಿದರು.

ಆಧುನಿಕ ಬ್ಯಾಟಿಂಗ್ ಶ್ರೇಷ್ಠ ವಿರಾಟ್ ಕೊಹ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಆಡಿದ 95 ರನ್ಗಳಿಗಾಗಿ ಶ್ಲಾಘಿಸಬೇಕಾಗಿದೆ ಎಂದು ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಗೌತಮ್ ಗಂಭೀರ್ ತಿಳಿಸಿದರು.
"ಕೊಹ್ಲಿ ನಿಮಗೆ ಪಂದ್ಯವನ್ನು ಗೆಲ್ಲಿಸಿದ ಕಾರಣ ಅವರನ್ನು ಹೊಗಳಿರಿ. ಶೂನ್ಯದಿಂದ 95 ರನ್ಗಳು ದೊಡ್ಡ ಪ್ರಯಾಣವಾಗಿದೆ. ಅವರು ಬ್ಯಾಟಿಂಗ್ ಮಾಡಿದ ಒತ್ತಡದಿಂದಾಗಿ ಅವರನ್ನು ಪ್ರಶಂಸಿಸಿ. ಭಾರತ ವಿಶ್ವಕಪ್ ಗೆಲ್ಲಬೇಕಾದರೆ ಅಂಕಿಅಂಶಗಳ ಗೀಳು ಕೊನೆಗೊಳ್ಳಬೇಕು ಎಂದು ನಾವು ಪದೇ ಪದೇ ಹೇಳಬೇಕಾಗಿದೆ," ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಹೇಳಿದರು.