ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಆರಂಭ ಕಂಡಿದೆ. ಮೊದಲ ದಿನದ ಆಟ ಮಳೆಯಿಂದಾಗಿ ಕೊಚ್ಚಿ ಹೋದರೆ, ಎರಡನೇ ದಿನದ ಆಟ ಗುರುವಾರ ಆರಂಭವಾಯಿತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ ಕೇವಲ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆಯನ್ನು ಹಣೆಗೆ ಕಟ್ಟಿಕೊಂಡಿದೆ. ಇದು ತವರು ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಲ್ಲರ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಡ್ವೇನ್ ಕಾನ್ವೆ ಜೊತೆಗೆ ಮೊಹಮ್ಮದ್ ಸಿರಾಜ್ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನ್ಯೂಜಿಲೆಂಡ್ ಪರ ಕಾನ್ವೆ ಮತ್ತು ಟಾಮ್ ಲ್ಯಾಥಮ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಸುಲಭವಾಗಿ ಭಾರತದ ಸ್ಕೋರ್ ದಾಟಿದರು. ಆದರೆ 15ನೇ ಓವರ್ನಲ್ಲಿ ಸಿರಾಜ್ ಎಸೆತಕ್ಕೆ ಕಾನ್ವೆ ಬೌಂಡರಿ ಬಾರಿಸಿದರು. ಇದರಿಂದ ನಿರಾಶೆಗೊಂಡ ಸಿರಾಜ್ ಅವರು ಕಾನ್ವೆ ಜೊತೆಗೆ ವಾಗ್ವಾದಕ್ಕಿಳಿದರು. ಆದರೆ ಕಾನ್ವೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಶಾಂತವಾಗಿರಲು ಮತ್ತು ಪಂದ್ಯದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು.
ಮೊಹಮ್ಮದ್ ಸಿರಾಜ್ ಮತ್ತು ಡ್ವೇನ್ ಕಾನ್ವೆ ನಡುವೆ ವಾಗ್ವಾದ ನಡೆಯುವಾಗ ಕಾಮೆಂಟೇಟರ್ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಎಲ್ಲರ ಗಮನ ಸೆಳೆದರು. ತೆಲಂಗಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಆಗಿ ಸಿರಾಜ್ ಆಯ್ಕೆಯಾಗಿರುವ ಬಗ್ಗೆ ಮಾತನಾಡಿದರು. 'ಈಗ ಡಿಎಸ್ಪಿ ಆಗಿದ್ದಾರೆ ಎನ್ನುವುದನ್ನು ಮರೆಯಬೇಡಿ' ಎಂದು ಸುನಿಲ್ ಗವಾಸ್ಕರ್ ಹೇಳಿದರು. ಇತ್ತ ಅಭಿಮಾನಿಗಳು ಡಿಎಸ್ಪಿ ಎಂದು ಗವಾಸ್ಕರ್ ಹೇಳುತ್ತಿದ್ದಂತೆ ಜೋರಾಗಿ 'ಡಿಎಸ್ಪಿ...ಡಿಎಸ್ಪಿ' ಎಂದು ಘೋಷಣೆ ಕೂಗಿದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.