ಬೆಂಗಳೂರು ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪುನರಾಗಮನ ಮಾಡಿದೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಸರ್ಫರಾಜ್ ಖಾನ್ ತಮ್ಮ ವೃತ್ತಿಜೀವನದ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಸರ್ಫರಾಜ್ ಶತಕ ಸಿಡಿಸಿದ್ದಲ್ಲದೆ ಅದ್ಬುತ ಇನ್ನಿಂಗ್ಸ್ ಆಡಿ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಮುನ್ನಡೆ ತಂದುಕೊಟ್ಟಿದ್ದಾರೆ. ಬೆಂಗಳೂರು ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯದೆ ಸರ್ಫರಾಜ್ ವಿಕೆಟ್ ಕಳೆದುಕೊಂಡಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕ್ರೀಸ್ಗೆ ಕಚ್ಚಿ ನಿಂತು ಬಿರುಸಿನ ಬ್ಯಾಟಿಂಗ್ ಮಾಡಿದ ಅವರು ಟೀಮ್ ಇಂಡಿಯಾಕ್ಕೆ ಆಸರೆಯಾದರು.

ಸರ್ಫರಾಜ್ ಖಾನ್ ಎದುರಿಸಿದ 195 ಎಸೆತಗಳಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 150 ರನ್ಗಳನ್ನು ಬಾರಿಸಿದರು. ಇವರ ಈ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪುಟಿದೆದ್ದಿದೆ. ಆದರೆ, ಭಾರತ ದೊಡ್ಡ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ 462 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡ ಕೀವಿಸ್ ಪಡೆಗೆ 107 ರನ್ಗಳ ಸಾಧಾರಣ ಗುರಿ ನೀಡಿದೆ. ಇದೇ ವೇಳೆ ಚೊಚ್ಚಲ ಅಂತಾರಾಷ್ಟ್ರೀಯ ಅದ್ಭುತ ಶತಕ ಸಿಡಿಸಿದರ ಬಗ್ಗೆ ಸರ್ಫರಾಜ್ ಖಾನ್ ಮಾತನಾಡಿದ್ದಾರೆ.
ನಾಲ್ಕನೇ ದಿನದಾಟದ ಅಂತ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಫರಾಜ್, 'ನನ್ನ ದೇಶಕ್ಕಾಗಿ ಶತಕ ಬಾರಿಸಿದ್ದು ಅದೊಂದು ದೊಡ್ಡ ಅನುಭವ. ನನ್ನ ಬಾಲ್ಯದ ಕನಸು ನನಸಾಗಿದೆ' ಎಂದು ಹೇಳಿದರು. ನ್ಯೂಜಿಲೆಂಡ್ಗೆ ಇದು ಸುಲಭವಲ್ಲ. ಪಿಚ್ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಚೆಂಡು ಸಾಕಷ್ಟು ತಿರುಗುತ್ತಿದೆ. ಬ್ಯಾಟಿಂಗ್ ಮಾಡುವುದು ಸುಲಭವಾಗಿಲ್ಲ. ಕೊನೆ ದಿನ ನಾವು ಬೇಗ ಯಶಸ್ಸನ್ನು ಸಾಧಿಸಿದರೆ, ಅವರು ಕೂಡ ನಮ್ಮಂತೆಯೇ ಅದೇ ಪರಿಸ್ಥಿತಿಯಲ್ಲಿರಬಹುದು ಎಂದು ತಿಳಿಸಿದ್ದಾರೆ.
ಕೀವಿಸ್ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಮತ್ತಿ ರಿಷಬ್ ಪಂತ್ ತಮ್ಮ ತಾಕತ್ತು ಪ್ರದರ್ಶನ ಮಾಡಿದರು. ಕೀವಿಸ್ ಪಡೆಯ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಸರ್ಫರಾಜ್ 150 ರನ್ ಗಳಿಸಿದರೆ, ಪಂತ್ ಶತಕ ವಂಚಿತರಾಗಿ 99 ರನ್ ಬಾರಿಸಿ ಔಟಾದರು. ಪಂತ್ ಮತ್ತು ಸರ್ಫರಾಜ್ ಅದ್ಭುತ ಜೊತೆಯಾಟವಾಡಿದರು. ಈ ಬಗ್ಗೆ ಮಾತನಾಡಿದ ಸರ್ಫರಾಜ್, 'ಪಂತ್ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ಖುಷಿಯಾಗಿದೆ. ಅವನು ಸ್ಟ್ರೈಕ್ನಲ್ಲಿದ್ದಾಗ, ರನ್ಗಳನ್ನು ತ್ವರಿತವಾಗಿ ಗಳಿಸಲಾಗುತ್ತದೆ. ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ತಿಳಿದಿದ್ದೇವೆ. ಉತ್ತಮ ಸಂವಹನವನ್ನು ಹೊಂದಿದ್ದು, ಸಾಕಷ್ಟು ಇನ್ನಿಂಗ್ಸ್ಗಳನ್ನು ಆಡಿದ್ದೇವೆ ಎಂದು ಹೇಳಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆದ ನಂತರ ಸಂಕಷ್ಟ
ಸ್ಥಿತಿಯಲ್ಲಿತ್ತು. ಆದರೆ ರಿಷಬ್ ಪಂತ್ ಜೊತೆಗಿನ ಸರ್ಫರಾಜ್ ಅವರ 177 ರನ್ ಜೊತೆಯಾಟವು ಭಾರತ ತಂಡ ಮತ್ತೆ ಎದ್ದು ನಿಲ್ಲಲು ಸಾಧ್ಯವಾಯಿತು. 2016ರ ಅಂಡರ್-19 ವಿಶ್ವಕಪ್ ಭಾರತ ತಂಡದ ಭಾಗವಾಗಿದ್ದ ಈ ಇಬ್ಬರೂ ಆಟಗಾರರು ಎಚ್ಚರಿಕೆಯಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ
ನ್ಯೂಜಿಲೆಂಡ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಸರ್ಫರಾಜ್ ಮತ್ತು ಪಂತ್ ಜೊತೆಯಾಟವು ಭಾರತದ ಪರಿಸ್ಥಿತಿಯನ್ನು ಬದಲಾಯಿಸಿತು. ಈ ಇಬ್ಬರು ಪೆವಿಲಿಯನ್ಗೆ ಮರಳಿದ ನಂತರ ಭಾರತದ ಕೆಳ ಕ್ರಮಾಂಕದ ವಿಕೆಟ್ಗಳ ನಿರಂತರ ಪತನಗೊಂಡವು.