ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ ಎರಡು ದಿನಗಳ ಆಟ ಪೂರ್ಣಗೊಂಡಿದೆ. ಈ 48 ಗಂಟೆಗಳಲ್ಲಿ ವಾಂಖೆಡೆ ಮೈದಾನದಲ್ಲಿ ಅದ್ಭುತ ನಡೆದಿದೆ. ಎರಡನೇ ದಿನದಂತ್ಯಕ್ಕೆ ಸ್ಟಾರ್ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅದ್ಭುತ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ವಿರುದ್ಧದ ವಾಂಖೆಡೆ ಟೆಸ್ಟ್ನಲ್ಲಿ ಭಾರತದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ 143 ರನ್ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಭಾರತದ ಬ್ಯಾಟಿಂಗ್ನೊಂದಿಗೆ ದಿನದಾಟ ಆರಂಭವಾಯಿತು. ಶುಭಮನ್ ಗಿಲ್ (90), ರಿಷಭ್ ಪಂತ್ (60) ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ 38) ಅವರ ಅದ್ಭುತ ಇನ್ನಿಂಗ್ಸ್ನಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಗಳಿಸಿ 28 ರನ್ಗಳ ಮುನ್ನಡೆ ಸಾಧಿಸಿತು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 235 ರನ್ ಗಳಿಸಿತ್ತು.

ನ್ಯೂಜಿಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಆಕಾಶ್ ದೀಪ್ ನಾಯಕ ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ಇದಾದ ನಂತರ ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಜೋಡಿ ಕಿವೀಸ್ ಪಡೆಯನ್ನು ಕಾಡಿದರು. ವಾಷಿಂಗ್ಟನ್ ಸುಂದರ್ ಕಾನ್ವೆ ವಿಕೆಟ್ ಪಡೆದು ಮಿಂಚಿದರು.
ಇದಾದ ಬಳಿಕ ಅಶ್ವಿನ್-ಜಡೇಜಾ ಮುಂದಿನ 7 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಇಂದು (ಭಾನುವಾರ) ಮೊದಲ ಸೆಷನ್ ಅಥವಾ ಎರಡನೇ ಸೆಷನ್ ನಲ್ಲಿ ಪಂದ್ಯ ನಿರ್ಧಾರವಾಗಲಿದೆ. ವಾಂಖೆಡೆ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆ ಪರ ವಿಲ್ ಯಂಗ್ 100 ಎಸೆತಗಳಲ್ಲಿ 51 ರನ್ ಗಳಿಸಿದ್ದಾರೆ. ಉಳಿದ ಯಾವುದೇ ಬ್ಯಾಟರ್ಗಳು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡೇ ದಿನಗಳಲ್ಲಿ ವಾಂಖೆಡೆ ಇತಿಹಾಸವೇ ಬದಲಾಯಿತು. ಮೊದಲ ದಿನದಲ್ಲಿ ಒಟ್ಟು 14 ವಿಕೆಟ್ಗಳು ಬಿದ್ದರೆ, ಎರಡನೇ ದಿನ 15 ಬ್ಯಾಟರ್ಗಳು ಔಟ್ ಆದರು. ಎರಡೂ ದಿನಗಳ ವಿಕೆಟ್ಗಳನ್ನು ಸೇರಿಸಿದರೆ ಒಟ್ಟು 29 ವಿಕೆಟ್ಗಳು ಬಿದ್ದವು. ಇದು ವಾಂಖೆಡೆಯಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲಿ ಪತನವಾದ ಅತಿ ಹೆಚ್ಚು ವಿಕೆಟ್ಗಳು. ಇದಕ್ಕೂ ಮೊದಲು 2000ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ 25 ವಿಕೆಟ್ಗಳು ಉರುಳಿದ್ದವು.