
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶುಕ್ರವಾರದಿಂದ ಸೆಣೆಸಾಟ ನಡೆಸಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಗ್ರ ಕ್ರಮಾಂಕದ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಆರಂಭಿಕನಾಗಿ ಯುವ ಆಟಗಾರ ರಿಷಭ್ ಪಂತ್ಗೆ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಸಲಹೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲ ಪಂದ್ಯಕ್ಕೆ ಆಡುವ ಬಳಗವನ್ನು ವಾಸಿಮ್ ಜಾಫರ್ ಹೆಸರಿಸಿದ್ದಾರೆ. ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಆರಂಭಿಕರಾಗಿ ಶುಬ್ಮನ್ ಗಿಲ್ ಜೊತೆಗೆ ರಿಷಭ್ ಪಂತ್ ಕಣಕ್ಕಿಳಿಯಲಿ ಎಂದಿದ್ದಾರೆ ಮಾಜಿ ಕ್ರಿಕೆಟಿಗ. ಶುಬ್ಮನ್ ಗಿಲ್ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಈಗಾಗಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರೂ ಚುಟುಕು ಮಾದರಿಯಲ್ಲಿ ಇನ್ನಷ್ಟೇ ಪದಾರ್ಪಣೆ ಮಾಡಬೇಕಿದೆ.
ಇನ್ನು ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಎರಡನೇ ಆಯ್ಕೆ ವಿಕೆಟ್ ಕೀಪರ್ ಆಗಿದ್ದರು. ಎರಡು ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ರಿಷಭ್ ಪಂತ್ ಮದ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ವೈಫಲ್ಯ ಅನುಭವಿಸಿದ್ದರು. ಆರಂಬಿಕನಾಗಿ ಪಂತ್ ಕಣಕ್ಕಿಳಿದರೆ ಭಾರತ ತಂಡಕ್ಕೆ ಸ್ಪೋಟಕ ಆರಂಭ ದೊರೆಯಲಿದೆ ಎಂಬ ವಿಶ್ವಾಸವನ್ನು ಜಾಫರ್ ವ್ಯಕ್ತಪಡಿಸಿದ್ದಾರೆ.
ಇಎಸ್ಪಿಎನ್ ಜೊತೆಗೆ ಸಂವಾದಲ್ಲಿ ಭಾಗಿಯಾಗಿದ್ದ ಜಾಫರ್ ರಿಷಭ್ ಪಂತ್ ಅವರಿಗೆ ಚುಟುಕು ಮಾದರಿಯಲ್ಲಿ ಅಗ್ರ ಕ್ರಮಾಂಕವೇ ಸೂಕ್ತವಾದ ಕ್ರಮಾಂಕ ಎಂದಿದ್ದಾರೆ. "ಪಂತ್ ಟೆಸ್ಟ್ ಹಾಗೂ ಏಕದಿನ ಮಾದರಿಯ ರೀತಿಯಲ್ಲಿಯೇ ಆಡಿದರೆ ಅಪಾಯಕಾರಿ ಬ್ಯಾಟರ್ ಎನಿಸಿಕೊಳ್ಳುತ್ತಾರೆ. ಒಮ್ಮೆ ಅವರಿ 20-30 ರ್ಗಳಿಸಿ ಉತ್ತಮ ಆರಂಭ ಪಡೆದುಕೊಂಡರೆ ಬಳಿ ಆತ ಅತ್ಯಂತ ಅಪಾಯಕಾರಿ ಆಟಗಾರ ಎನಿಸಿಕೊಳ್ಳುತ್ತಾರೆ. ಹೊರಗಡೆಯಿರುವ ಫಿಲ್ಡರ್ಗಳು ಆತನಿಗೆ ದೊಡ್ಡ ಸಂಗತಿಯಾಗಲಾರರು" ಎಂದದ್ದಾರೆ ವಾಸಿಮ್ ಜಾಫರ್.
"ಪಂತ್ ಐದನೇ ಕ್ರಮಾಂಕದಲ್ಲಿ ಆಡಲು ಇಳಿದರೆ ಆತನ ಮೇಲೆ ಒತ್ತಡ ಇರುತ್ತದೆ. ಅಂಥಾ ಸಂದರ್ಭದಲ್ಲಿ ಆತನಿಗೆ ಸಿಕ್ಸರ್ಗಳನ್ನು ಬಾರಿಸುವುದು ಕಷ್ಟವಾಗುತ್ತದೆ. ಆದರೆ ಸ್ಪೋಟಕ ಆರಂಭವನ್ನು ಪಡೆಯಬೇಕಾದರೆ ಅದಕ್ಕೆ ತಕ್ಕನಾದ ಆಟಗಾರ ರಿಷಭ್ ಪಂತ್" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್.
ಭುವಿಯನ್ನು ಹೊರಗಿಟ್ಟ ಜಾಫರ್: ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಜಾಫರ್ ಆಯ್ಕೆ ಮಾಡಿರುವ ಆಡುವ ಬಳಗದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಹೊರಗಿಡಲಾಗಿದೆ. ಮೂವರು ವೇಗದ ಬೌಲರ್ಗಳನ್ನು ಹೆಸರಿಸಿರುವ ಜಾಫರ್ ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ.
ಶುಬ್ಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಕುಲದೀಪ್ ಯಾದವ್ / ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್