ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿಯೂ ಭಾರತ ತಂಡ ಸತತ ಗೆಲುವು ಸಾಧಿಸಿದ್ದು ಇದೀಗ ಮತ್ತೊಂದು ಬಲಿಷ್ಠ ಕಾದಾಟಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಮತ್ತೊಂದು ಅಜೇಯ ತಂಡವಾಗಿರುವ ನ್ಯೂಜಿಲೆಂಡ್ ತಂಡ ಭಾರತಕ್ಕೆ ಈಗ ಸವಾಲೊಡ್ಡಲು ಸಜ್ಜಾಗಿದ್ದು ಭಾನುವಾರ ಧರ್ಮಶಾಲಾದಲ್ಲಿ ಈ ಸೆಣೆಸಾಟ ನಡೆಸಲಿದೆ.
ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಕಾದಾಟ ನೋಡಲು ಈಗ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಅತ್ಯಂತ ಬಲಿಷ್ಠ ಪಡೆಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾಗ ತಂಡಕ್ಕೆ ಗಾಯದ ಸಮಸ್ಯೆ ಕಾಡಿದೆ. ಹೀಗಾಗಿ ತಂಡದಲ್ಲಿ ಅನಿವಾರ್ಯ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಟೀಮ್ ಇಂಡಿಯಾದ ಓರ್ವ ಆಟಗಾರ ಗಾಯಕ್ಕೆ ತುತ್ತಾಗಿದ್ದು ಇದರಿಂದಾಗಿ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯ ಸೃಷ್ಟಿಯಾಗಿದೆ.

ಟೀಮ್ ಇಂಡಿಯಾದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಪಾಂಡ್ಯ ಈ ಪಂದ್ಯಕ್ಕೆ ಅಲಭ್ಯವಾಗುವುದು ಖಚಿತವಾಗಿದೆ. ಹೀಗಾಗಿ ಅವರು ತಂಡದ ಜೊತೆಗೆ ಧರ್ಮಶಾಲಾಗೆ ಪ್ರಯಾಣಿಸಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಹಾರ್ದಿಕ್ ತಂಡಕ್ಕೆ ಅದ್ಭುತ ಸಂಯೋಜನೆ ನೀಡುತ್ತಿದ್ದ ನೀಡುತ್ತಿದ್ದ ಕಾರಣ ಇದು ಭಾಋತ ತಂಡಕ್ಕೆ ದೊಡ್ಡ ಹಿನ್ನಡೆ.
ಹಾರ್ದಿಕ್ ಪಾಂಡ್ಯ ಈ ಗಾಯಕ್ಕೆ ತುತ್ತಾಗಿರುವ ಕಾರಣ ಭಾರತ ತಂಡದಲ್ಲಿ ಎರಡು ಬದಲಾವನೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದು ಸ್ವತಃ ಹಾರ್ದಿಕ್ ಪಾಂಡ್ಯ ಈ ಪಂದ್ಯದಿಮದ ಹೊರಗುಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಸಮನಾದ ಆಯ್ಕೆ ತಂಡದಲ್ಲಿ ಇಲ್ಲ. ಹೀಗಾಗಿ ಸಂಯೋಜನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ. ಹಾಗಾಗಿ ಮತ್ತೋರ್ವ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬೀಳಲಿರುವ ಕಾರಣದಿಂದಾಗಿ ಅವರ ಸ್ಥಾನದಲ್ಲಿ ಪೂರ್ಣ ಪ್ರಮಾಣದ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ಗೆ ಈ ಪಂದ್ಯದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಮತ್ತೊಂದೆಡೆ ಶಾರ್ದೂಲ್ ಠಾಕೂರ್ ಕೂಡ ತಮ್ಮ ಸ್ಥಾನವನ್ನು ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಿಟ್ಟುಕೊಡಬೇಕಾಗಬಹುದು. ಹೀಗಾಗಿ ಈ ಪಂದ್ಯದಲ್ಲಿ ಭಾರತ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿದಂತಾಗುತ್ತದೆ. ತಂಡದ ಸಂಯೋಜನೆಯ ದೃಷ್ಟಿಯಿಂದ ಈ ಬದಲಾವಣೆ ಅಗತ್ಯ ಎನಿಸುತ್ತಿದೆ.