
ಹಾರ್ದಿಕ್ ಇರುವುದೇ ಭಾರತಕ್ಕೆ ದೊಡ್ಡ ಲಾಭ
ಇನ್ನು ನಿರ್ಣಾಯಕ ಹಂತದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಆಟಗಾರರು ಫಾರ್ಮ್ ಕಂಡುಕೊಳ್ಳಬೇಕಾದ ಅಗತ್ಯವಿದೆ. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಲೀಗ್ ಹಂತದ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಇದು ಭಾರತ ತಂಡಕ್ಕೆ ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕ ಬಲಿಷ್ಠವಿರುವ ಕಾರಣ ಅಗ್ರ ಕ್ರಮಾಂಕದ ವೈಫಲ್ಯ ತಂಡದ ಫಲಿತಾಂಶದ ಮೇಲೆ ಈ ಹಂತದವರೆಗೆ ಪರಿಣಾಮ ಬೀರಿಲ್ಲ. ರೋಹಿತ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ವಿಫಲವಾಗುತ್ತಿದ್ದರು ರಾಹುಲ್ ಬ್ಯಾಟ್ನಿಂದ ಸರಾಗವಾಗಿ ರನ್ ಹರಿದುಬರುತ್ತಿಲ್ಲ. ಇದು ಮ್ಯಾನೇಜ್ಮೆಂಟ್ನ ಚಿಂತೆ ಹೆಚ್ಚಿಸಿದೆ.

ಪರಿಣಾಮಕಾರಿ ಆಲ್ರೌಂಡರ್ನನ್ನು ಆದಷ್ಟು ಬೇಗ ಹುಡುಕಬೇಕು
ಮುಂದುವರಿದು ಮಾತನಾಡಿದ ಆಕಿಬ್ ಜಾವೇದ್ "ಪಾಕಿಸ್ತಾನ ತಂಡ ಟಿ20 ಮಾದರಿಯಲ್ಲಿ ಬೆಳವಣಿಗೆ ಸಾಧಿಸಬೇಕಾದರೆ ಹಾರ್ದಿಕ್ ಪಾಂಡ್ಯ ರೀತಿಯ ಆಟಗಾರ ತಂಡಕ್ಕೆ ಅಗತ್ಯವಾಗಿದೆ. ಅಂಥಾ ಆಟಗಾರನನ್ನು ಹುಡುಕಬೇಕಿದೆ. ಯಾಕೆಂದರೆ ಟಿ20 ಮಾದರಿ ಎಷ್ಟು ಆಲ್ರೌಂಡರ್ಗಳನ್ನು ನೀವು ನಿಮ್ಮ ತಂಡದಲ್ಲಿ ಹೊಂದಿದ್ದೀರಿ ಅದರ ಮೇಲೆ ನಿಂತಿದೆ. ಭಾರತ ತಂಡ ರವೀಂದ್ರ ಜಡೇಜಾ ಹಾರ್ದಿಕ್ ಪಾಂಡ್ಯ ಅವರಂಥಾ ಆಟಗಾರರನ್ನು ಹೊಂದಿದೆ" ಎಂದಿದ್ದಾರೆ ಆಕಿಬ್ ಜಾವೇದ್.

ಅಮೋಘ ಫಾರ್ಮ್ನಲ್ಲಿದ್ದಾರೆ ಹಾರ್ದಿಕ್ ಪಾಂಡ್ಯ
ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದಾಗಿ ಪೂರ್ಣಪ್ರಮಾಣದ ಬ್ಯತಾಟರ್ ಆಗಿ ಕಣಕ್ಕಿಳಿದಿದ್ದರು. ಆದರೆ ಪರಿಣಾಮಕಾರಿಯಾಗಿರದಿದ್ದ ಕಾರಣ ಪಾಂಡ್ಯ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ನಂತರ ಫಿಟ್ನೆಸ್ ಕಂಡುಕೊಳ್ಳುವ ನಿಟ್ಟಿನಲ್ಲಿ ತಂಡದಿಂದ ಹೊರಬಿದ್ದ ಅವರು ಸುದೀರ್ಘ ಐದು ತಿಂಗಳಕಾಲ ಕ್ರಿಕೆಟ್ನಿಂದ ದೂರವುಳಿದಿದ್ದರು. ಈ ಸಂದರ್ಭದಲ್ಲಿ ಬಹುತೇಕರು ಹಾರ್ದಿಕ್ ಪಾಂಡ್ಯ ಕಮ್ಬ್ಯಾಕ್ ಕಷ್ಟ ಎಂದೇ ಭಾವಿಸಿದ್ದರು. ಆದರೆ ಐಪಿಎಲ್ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿದರು. ಐಪಿಎಲ್ನಲ್ಲಿ ನಾಯಕನಾಗಿಯೂ ಜವಾಬ್ಧಾರಿ ವಹಿಸಿಕೊಂಡ ಹಾರ್ದಿಕ್ ನಾಯಕನಾಗಿಯೂ ಗೆದ್ದು ಬೀಗಿದರು. ನಂತರ ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಪಡೆದುಕೊಂಡ ಹಾರ್ದಿಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿದ್ದಾರೆ. ಪಾಕಿಸ್ತಾನದ ವಿರುದ್ಧದ ಲೀಗ್ ಪಂದ್ಯದಲ್ಲಿ ಹಾರ್ದಿಕ್ ನೀಡಿದ ಪ್ರದರ್ಶನ ಅವರ ಫಾರ್ಮ್ಗೆ ಇತ್ತೀಚಿನ ಉದಾಹರಣೆಯಾಗಿದೆ. ಹೀಗಾಗಿ ಸೂಪರ್ 4 ಹಂತದಲ್ಲಿಯೂ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆಗಳಿದೆ.


Click it and Unblock the Notifications
