ಯುವ ಸ್ಪಿನ್ನರ್ ರವಿ ಬಿಷ್ಣೋಯ್
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿರುವ ಭಾರತ ತಂಡದ ಜೊತೆಗೆ ಪ್ರಯಾಣಿಸಲಿದ್ದಾರೆ ಎಂಬುದು ಗಮನಾರ್ಹ. ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಮೀಸಲು ಆಟಗಾರನಾಗಿ ಬಿಷ್ಣೋಯ್ ಆಯ್ಕೆಯಾಗಿರುವ ಕಾರಣ ಈ ಈ ಸರಣಿಯಲ್ಲಿ ಬಿಷ್ಣೋಯ್ ಮೇಲೆ ಎಲ್ಲರ ಕಣ್ಣಿದೆ. ಹಾಗಿದ್ದರೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಸುಲಭವಿಲ್ಲ. ಯಾಕೆಂದರೆ ಅನುಭವಿ ಕುಲ್ದೀಪ್ ಯಾದವ್ ಜೊತೆಗೆ ಈ ಸ್ಥಾನಕ್ಕಾಗಿ ಬಿಷ್ಣೋಯ್ ಪೈಪೋಟಿ ನಡೆಸಬೇಕಿದೆ. ಆದರೆ ಚುಟುಕು ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾನ ನೀಡುವ ಸಾಧ್ಯತೆಯೂ ಇದೆ. ಇನ್ನು ಈ ಸರಣಿಯಲ್ಲಿ ಸಿಗುವ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳುವ ಮೂಲಕ ರವಿ ಬಿಷ್ಣೋಯ್ ತಾನು ಟೀಮ್ ಇಂಡಿಯಾದ ಮುಖ್ಯ ಸ್ಕ್ವಾಡ್ನಲ್ಲಿ ಇರಲು ಅರ್ಹವಾದ ಅಟಗಾರ ಎಂಬುದನ್ನು ಸಾಬೀತುಪಡಿಸಬೇಕಿದೆ.
ವೇಗಿ ದೀಪಕ್ ಚಹರ್
ರವಿ ಬಿಷ್ಣೋಯ್ ರೀತಿ ದೀಪಕ್ ಚಹರ್ ಕೂಡ ಟಿ20 ವಿಶ್ವಕಪ್ನ ತಂಡದ ಜೊತೆಗೆ ಮೀಸಲು ಆಟಗಾರನಾಗಿ ಪ್ರಯಾಣಿಸುವ ಅವಕಾಶ ಪಡೆದುಕೊಂಡಿದ್ದಾರೆ. ಜಸ್ಪ್ರೂತ್ ಬೂಮ್ರಾ ಅಲಭ್ಯವಾಗಿರುವ ಕಾರಣ ಮುಖ್ಯ ಸ್ಕ್ವಾಡ್ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ತಾನು ಸಮರ್ಥ ಬೌಲರ್ ಎಂಬುದನ್ನು ಸಾಬೀತುಪಡಿಸುವ ಅವಕಾಶ ದೀಪಕ್ ಚಹರ್ಗೆ ಇದೆ. ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿರುವ ಕಾರಣ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸಾಕಷ್ಟು ತಲೆನೋವಾಗಿದ್ದು ದೀಪಕ್ ಚಾಹರ್ ಪ್ರದರ್ಶನ ಬಹಳ ಮುಖ್ಯವಾಗಲಿದೆ.
ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಉಪನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ ಸಂಜು ಬದಲಿಗೆ ಶ್ರೇಯಸ್ ಐಯ್ಯರ್ಗೆ ಟೀಮ್ ಇಂಡಿಯಾದ ಉಪನಾಯಕನ ಜವಾಬ್ಧಾರಿ ದೊರೆತಿದೆ. ಹಾಗಿದ್ದರೂ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರಲಿದ್ದಾರೆ. ಇನ್ನು ಟಿ20 ವಿಶ್ವಕಪ್ನ ತಂಡದಲ್ಲಿಯೂ ಸ್ಥಾನ ಪಡೆಯಲು ಸಂಜು ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ ಸಣ್ಣ ಅಂತರದಿಂದ ಸಂಜುಗೆ ಈ ಅವಕಾಶ ತಪ್ಪಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಜವಾಬ್ಧಾರಿಯುತ ಅವಕಾಶ ದೊರೆತಿದ್ದು ಅನುಭವಿಯಾಗಿ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಮುಖ್ಯವಾಗಲಿದೆ. ಅಲ್ಲದೆ ಒತ್ತಡದಲ್ಲಿ ಸಂಜು ಸ್ಯಾಮ್ಸನ್ ಅವರಿಂದ ಬರುವ ಬ್ಯಾಟಿಂಗ್ ಪ್ರದರ್ಶನ ಬಹಳ ಮಹತ್ವ ಮಡೆದುಕೊಳ್ಳಲಿದೆ. ಹೀಗಾಗಿ ಸಂಜು ಸ್ಯಾಮ್ಸನ್ಗೆ ಕೂಡ ಈ ಸರಣಿ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿರಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡ
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಆವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್