ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪ್ರವಾಸಿ ಭಾರತ ತಂಡದ ಬೌಲರ್ಗಳು ಮತ್ತೊಮ್ಮೆ ಮಾರಕ ದಾಳಿ ನಡೆಸಿದರು. ಇದೀಗ ಟೀಮ್ ಇಂಡಿಯಾಗೆ ಗೆಲ್ಲಲು ಸುವರ್ಣಾವಕಾಶ ಒದಗಿ ಬಂದಿದೆ.
ಗುರುವಾರ, ಜನವರಿ 4ರಂದು ನಡೆಯುತ್ತಿರುವ ಎರಡನೇ ಪಂದ್ಯದ ಎರಡನೇ ದಿನದಂದು ದಕ್ಷಿಣ ಆಫ್ರಿಕಾ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಏಡೆನ್ ಮಾರ್ಕ್ರಾಮ್ ಅವರ ಭರ್ಜರಿ ಶತಕದ ಹೊರತಾಗಿಯೂ 36.5 ಓವರ್ಗಳಲ್ಲಿ 176 ರನ್ಗಳಿಗೆ ಸರ್ವಪತನ ಕಂಡಿತು.

ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಗೆಲ್ಲಲು ಕೇವಲ 78 ರನ್ಗಳ ಗುರಿ ನೀಡಲಾಗಿದ್ದು, ಎರಡನೇ ದಿನವೇ ಪಂದ್ಯ ಮುಕ್ತಾಯವಾಗುವ ಲಕ್ಷಣ ಗೋಚರಿಸುತ್ತಿದೆ.
ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಮೊದಲ ದಿನದಾಟದಂತ್ಯಕ್ಕೆ 62 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ದಿನದಂದು ಬ್ಯಾಟಿಂಗ್ ಆರಂಭಿಸಿತು. ನಂತರ 4 ರನ್ ಸೇರಿಸುವಷ್ಟರಲ್ಲಿ ಡೇವಿಡ್ ಬೆಡಿಂಗ್ಹ್ಯಾಮ್ (11) ಅವರ ವಿಕೆಟ್ ಕಳೆದುಕೊಂಡಿತು.

ಬಳಿಕ ಕ್ರೀಸ್ಗೆ ಬಂದ ಕೈಲ್ ವರೆನ್ನೆ ಅವರೊಂದಿಗೆ ಏಡೆನ್ ಮಾರ್ಕ್ರಾಮ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ತಂಡದ ಮೊತ್ತ 85 ರನ್ಗಳಾಗಿದ್ದಾಗ ಕೈಲ್ ವರೆನ್ನೆ (9) ಔಟಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಮತ್ತೊಂದೆಡೆ ನೆಲಕಚ್ಚಿ ಆಡಿದ ಏಡೆನ್ ಮಾರ್ಕ್ರಾಮ್ ಏಕಾಂಗಿಯಾಗಿ ಹೋರಾಡಿ ಶತಕ ಗಳಿಸಿದರು.
ಆರಂಭಿಕ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು 103 ಎಸೆತಗಳಲ್ಲಿ 17 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 106 ರನ್ ಬಾರಿಸಿದರು. ನಂತರ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಉಳಿದಂತೆ ಮಾರ್ಕೊ ಜಾನ್ಸೆನ್ 11 ರನ್, ಕೇಶವ್ ಮಹಾರಾಜ್ 3 ರನ್, ಕಗಿಸೊ ರಬಾಡ 2, ನಾಂದ್ರೆ ಬರ್ಗರ್ 6 ರನ್, ಲುಂಗಿ ಎನ್ಗಿಡಿ 8 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ಸಮೀಪಿಸಲು ನೆರವಾದರು.
ಬೌಲಿಂಗ್ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಬಿಗಿ ಬೌಲಿಂಗ್ ದಾಳಿ ನಡೆಸಿದರು. 13.5 ಓವರ್ಗಳಲ್ಲಿ 61 ರನ್ ನೀಡಿ 6 ವಿಕೆಟ್ ಕಬಳಿಸಿದರು. ಉಳಿದಂತೆ ಮುಖೇಶ್ ಕುಮಾರ್ 2 ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 55 ರನ್ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಭಾರತದ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದ್ದರು. ನಂತರ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 153 ರನ್ ಗಳಿಸಿ 98 ರನ್ಗಳ ಮುನ್ನಡೆ ಸಾಧಿಸಿತ್ತು.