ಸೆಂಚುರಿಯನ್ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ಗಳಿಂದ ಸೋತ ನಂತರ, ಪ್ರವಾಸಿ ಭಾರತ ತಂಡವು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪುನರಾಗಮನ ಮಾಡಲು ಎದುರು ನೋಡುತ್ತಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಜನವರಿ 3ರಿಂದ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದರು. ಅದರ ಹೊರತಾಗಿಯೂ, ಭಾರತ ತಂಡವು ಮುಂದಿನ ಪಂದ್ಯಕ್ಕಾಗಿ ಬ್ಯಾಟಿಂಗ್ ಲೈನ್-ಅಪ್ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
ಟೆಸ್ಟ್ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್ ಅವರನ್ನು ಆಡಿಸುವ ಆಯ್ಕೆ ಇದೆ. ಆದರೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಮಿಂಚಲು ವಿಫಲರಾದ ಯಶಸ್ವಿ ಜೈಸ್ವಾಲ್ಗಿಂತ ಮಾಜಿ ಭಾರತ ಎ ನಾಯಕನಿಗೆ ಅವಕಾಶ ಸಿಗುವ ಸಾಧ್ಯತೆ ವಿರಳ.

ಇದೇ ವೇಳೆ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ತನ್ನ ಆಡುವ 11ರ ಬಳಗದಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಮೊದಲ ಪಂದ್ಯಕ್ಕೂ ಮುನ್ನ ಬೆನ್ನುಮೂಳೆ ಸೆಳೆತದ ಬಗ್ಗೆ ದೂರು ನೀಡಿದ ನಂತರ ತಪ್ಪಿಸಿಕೊಂಡರು.
ಆ ಬಳಿಕ ರವೀಂದ್ರ ಜಡೇಜಾ ಸ್ಥಾನದಲ್ಲಿ ವಿಶ್ವದ ನಂ.1 ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಲಾಯಿತು. ಆದರೆ ಕೇವಲ ಒಂದು ವಿಕೆಟ್ ಪಡೆದು, 8 ಮತ್ತು 0 ರನ್ ಗಳಿಸಲಷ್ಟೆ ಶಕ್ತರಾದರು.
ರವಿಚಂದ್ರನ್ ಅಶ್ವಿನ್ ಅವರಿಗಿಂತ ಹೆಚ್ಚು ವಿಶ್ವಾಸಾರ್ಹ ಬ್ಯಾಟರ್ ಮತ್ತು ಸಾಗರೋತ್ತರ ಪರಿಸ್ಥಿತಿಗಳಲ್ಲಿ ಸಮರ್ಥ ಸ್ಪಿನ್ನರ್ ಆಗಿರುವ ರವೀಂದ್ರ ಜಡೇಜಾ ಅವರಿಗೆ ಜಾಗ ಬಿಟ್ಟುಕೊಡುವ ಸಾಧ್ಯತೆ ಇದೆ.
ರವಿಚಂದ್ರನ್ ಅಶ್ವಿನ್ ಹೊರತಾಗಿ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕಾಗಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಕೂಡ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದು, ಮುಖೇಶ್ ಕುಮಾರ್ ಆಡುವ ಬಳಗ ಸೇರಿಕೊಳ್ಳಲಿದ್ದಾರೆ.
ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಮೊದಲ 4-ದಿನದ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ನಂತರ, ಪ್ರಸಿದ್ಧ್ ಕೃಷ್ಣ ಮೇಲೆ ಹೆಚ್ಚಿನ ಭರವಸೆ ಇತ್ತು. ಆದರೆ ಸೆಂಚುರಿಯನ್ನಲ್ಲಿ 20 ಓವರ್ಗಳಲ್ಲಿ 93 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಅವರ ಕಳಪೆ ಬೌಲಿಂಗ್ ಪ್ರದರ್ಶನಕ್ಕಾಗಿ ಅನೇಕ ಕ್ರಿಕೆಟ್ ತಜ್ಞರಿಂದ ಟೀಕೆಗೆ ಒಳಗಾಗಿದ್ದಾರೆ.
ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಚೆಂಡನ್ನು ಪಳಗಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಬ್ಯಾಟಿಂಗ್ನಿಂದಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ.
ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಎಂದಿಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಮತ್ತು ಸರಣಿಯ ಮೊದಲ ಪಂದ್ಯದ ಸೋಲಿನ ನಂತರ, ಈ ಬಾರಿಯೂ ಐತಿಹಾಸಿಕ ದಾಖಲೆ ಸಾಧಿಸಲಾಗುವುದಿಲ್ಲ. ಆದರೆ ಭಾರತವು ಟೆಸ್ಟ್ ಸರಣಿಯನ್ನು ಸೋಲುವ ಮುಜುಗರವನ್ನು ತಪ್ಪಿಸಲು ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್.