ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ 3 ದಿನಗಳಿಗಿಂತ ಕಡಿಮೆ ಅವಧಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸೋಲು ಭಾರತ ತಂಡದ ಇತ್ತೀಚಿಗಿನ ಕೆಟ್ಟ ಸಾಗರೋತ್ತರ ಸೋಲುಗಳಲ್ಲಿ ಒಂದಾಗಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವಾಸಿ ಭಾರತ ತಂಡ ಇನ್ನಿಂಗ್ಸ್ ಹಾಗೂ 32 ರನ್ಗಳ ಹೀನಾಯ ಸೋಲನುಭವಿಸಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.

ಇನ್ನು ಭಾರತ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ಅವರು ತಮ್ಮ "ಅನನುಭವಿ' ಬೌಲರ್ಗಳ ಮೇಲೆ ಆರೋಪ ಹೊರಿಸಲು ನಿರಾಕರಿಸಿದರು ಮತ್ತು ಬೌಲರ್ಗಳ ಬೆಂಬಲಕ್ಕೆ ನಿಂತರು.
ಸೆಂಚುರಿಯನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಬ್ಯಾಟರ್ಗಳ ಪ್ರಯತ್ನದ ಕೊರತೆ ಕಾರಣ ಎಂದು ರೋಹಿತ್ ಶರ್ಮಾ ಹೇಳಿದರು.
ಕೆಎಲ್ ರಾಹುಲ್ ಅವರ ಮೊದಲ ಇನ್ನಿಂಗ್ಸ್ ಶತಕ ಮತ್ತು ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಏಕಾಂಗಿ 76 ರನ್ಗಳ ಪ್ರದರ್ಶನವನ್ನು ಶ್ಲಾಘಿಸಿದರು. ಆದರೆ ತಮ್ಮ ಬ್ಯಾಟರ್ಗಳಿಂದ ಸಾಮೂಹಿಕ ಪ್ರಯತ್ನದ ಕೊರತೆಯನ್ನು ಖಂಡಿಸಿದರು.
ಮೊದಲ ಇನಿಂಗ್ಸ್ನಲ್ಲಿ 163 ರನ್ಗಳ ಹಿನ್ನಡೆ ಅನುಭವಿಸಿದ ನಂತರ, ಭಾರತ ತಂಡವು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 34.1 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟ್ ಆಯಿತು.
ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್ ಸೇರಿದಂತೆ ಕೆಲವು ದೊಡ್ಡ ಆಟಗಾರರು ಎರಡೂ ಇನ್ನಿಂಗ್ಸ್ಗಳಲ್ಲಿ ವಿಫಲವಾದ ಕಾರಣ, ಭಾರತ ತಂಡವು ಬ್ಯಾಟ್ನೊಂದಿಗೆ ವೈಯಕ್ತಿಕ ಅದ್ಭುತದ ಎರಡು ಕ್ಷಣಗಳನ್ನು ಹೊರತುಪಡಿಸಿ ಉಳಿದವರೆಲ್ಲ ವಿಫಲರಾದರು.
ದಕ್ಷಿಣ ಆಫ್ರಿಕಾದಲ್ಲಿ ನಾಯಕನಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್ನಲ್ಲಿ ಸೊನ್ನೆ ಸೇರಿದಂತೆ ಕೇವಲ 5 ರನ್ ಗಳಿಸಿದರು.
ಇದು SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ ಭಾರತ ತಂಡದ ಸತತ ಐದನೇ ಸೋಲಾಗಿದೆ. ಆಧುನಿಕ ಕ್ರಿಕೆಟ್ನ ಉತ್ತಮ ತಂಡಗಳಲ್ಲಿ ಒಂದಾಗಿದೆ ಎಂಬ ಹೆಮ್ಮೆಯ ಟ್ಯಾಗ್ ಬೇಗನೆ ಮರೆಯಾಗುತ್ತಿದೆ.
"ಉತ್ತಮವಾಗಿ ಆಡಲಿಲ್ಲ. ಯೋಗ್ಯವಾದ ರನ್ಗಳನ್ನು ಹಾಕಲಾಗಲಿಲ್ಲ. ಕೆಎಲ್ ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು, ಆದರೆ ನಾವು ಚೆಂಡಿನೊಂದಿಗೆ ಪರಿಸ್ಥಿತಿಯನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಕಳಪೆಯಾಗಿತ್ತು, ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆದರೆ ನೀವು ಟೆಸ್ಟ್ ಪಂದ್ಯ ಗೆಲ್ಲಬೇಕಾದರೆ, ಸಾಮೂಹಿಕವಾಗಿ ಒಗ್ಗೂಡಿ ಆಡಬೇಕು".
"ಅದನ್ನು ಮಾಡಲು ನಾವು ವಿಫಲರಾಗಿದ್ದೇವೆ. ನಮ್ಮ ಹುಡುಗರು ಈ ಹಿಂದೆ ಇಲ್ಲಿಗೆ ಬಂದಿದ್ದಾರೆ, ಪರಿಸ್ಥಿತಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ," ಎಂದು ಸೆಂಚುರಿಯನ್ನಲ್ಲಿನ ಕಠಿಣ ಸೋಲಿನ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
ಭಾರತದ ಬೌಲಿಂಗ್ ವಿಭಾಗವು ದಯನೀಯವಾಗಿ ವಿಫಲವಾಯಿತು. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದರೂ, ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ಗಳನ್ನು ಬೇಗನೆ ಔಟ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ.
ಚೊಚ್ಚಲ ಪಂದ್ಯವಾಡಿದ ಪ್ರಸಿದ್ಧ್ ಕೃಷ್ಣ 20 ಓವರ್ಗಳಲ್ಲಿ 93 ರನ್ ನೀಡಿದರು. ಅನುಭವಿ ಶಾರ್ದೂಲ್ ಠಾಕೂರ್ 19 ಓವರ್ಗಳಲ್ಲಿ 101 ರನ್ಗಳನ್ನು ನೀಡಿ, ಪ್ರತಿ ಓವರ್ಗೆ 5ಕ್ಕಿಂತ ಹೆಚ್ಚು ರನ್ ನೀಡಿದರು.
ಮೊಹಮ್ಮದ್ ಸಿರಾಜ್ 2 ವಿಕೆಟ್ ಮತ್ತು ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಆದರೆ ನಾಯಕ ಟೆಂಬಾ ಬವುಮಾ ಗಾಯದ ಕಾರಣ ಬ್ಯಾಟಿಂಗ್ಗೆ ಬಾರದಿದ್ದರೂ, ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 408 ರನ್ ಗಳಿಸಿತು.
ಸೆಂಚುರಿಯನ್ನಲ್ಲಿ ನಡೆದ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ 185 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪ್ರದರ್ಶನದ ಪ್ರಮುಖ ಅಂಶವಾಗಿದೆ. ಮಾರ್ಕೊ ಜಾನ್ಸೆನ್ 84 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಡೇವಿಡ್ ಬೆಡಿಂಗ್ಹ್ಯಾಮ್ ಅರ್ಧಶತಕ ಗಳಿಸಿದರು.
"ನಾವು ಉತ್ತಮವಾಗಿ ಹೊಂದಿಕೊಳ್ಳಲಿಲ್ಲ. ನಾವು ಎರಡೂ ಬಾರಿ ಉತ್ತಮವಾಗಿ ಬ್ಯಾಟ್ ಮಾಡಲಿಲ್ಲ. ಅದಕ್ಕಾಗಿಯೇ ನಾವು ಇಲ್ಲಿ ನಿಂತಿದ್ದೇವೆ. ಬೌಲರ್ಗಳನ್ನು ಹೆಚ್ಚು ಟೀಕಿಸಲು ಬಯಸುವುದಿಲ್ಲ, ಅವರು ಇಲ್ಲಿ ಹೆಚ್ಚು ಆಡಿಲ್ಲ," ಎಂದು ರೋಹಿತ್ ಶರ್ಮಾ ತಿಳಿಸಿದರು.
ಜನವರಿ 3ರಿಂದ ಕೇಪ್ಟೌನ್ನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ನಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿರುವ ಭಾರತ ತಂಡಕ್ಕೆ ಸರಣಿಯನ್ನು ಸಮಬಲಗೊಳಿಸಲು ಗೆಲ್ಲಲೇಬೇಕಾದ ಅನಿವಾರ್ಯವಾಗಿದೆ.