
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಲ್ಲಾ ಮಾದರಿಯಲ್ಲಿಯೂ ಆಡುವ ಆಟಗಾರರ ಕೆಲದೊತ್ತಡವನ್ನು ಕಡಿಮೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದರು. ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ದ್ರಾವಿಡ್ ಪ್ರತಿ ಸರಣಿಗೂ ಅವರು ಲಭ್ಯವಿರುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದಿದ್ದಾರೆ.
ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ನಡೆಯುವ ಕಾರಣ ರೋಹಿತ್ ಶರ್ಮಾ ಅವರಂತೆ ಎಲ್ಲಾ ಮಾದರಿಯ್ಲಲಿಯೂ ಆಡುವ ಆಟಗಾರರ ಕೆಲಸದ ಒತ್ತಡವನ್ನು ನಿಭಾಯಿಸುವುದು ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ ರಾಹುಲ್ ದ್ರಾವಿಡ್. ಇನ್ನು ಆಯ್ಕೆಗಾರರು ಹಾಗೂ ಆಟಗಾರರೊಂದಿಗೆ ಉತ್ತಮವಾಗಿ ಸಂವಹನ ನಡೆಸುತ್ತಿದ್ದು ನಿರ್ಣಾಯಕ ಟೂರ್ನಿಯ ಸಂದರ್ಭದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಅವರಂತಾ ಆಟಗಾರರು ಸರಿಯಾದ ಸಮಯದಲ್ಲಿ ಉತ್ಕೃಷ್ಟಮಟ್ಟದ ಆಟವನ್ನು ನೀಡುವಂತಾಗಬೇಕು ಎಂದಿದ್ದಾರೆ ದ್ರಾವಿಡ್.
ರೋಹಿತ್ ಶರ್ಮಾ ಭಾರತದ ಎಲ್ಲಾ ಮಾದರಿಯ ನಾಯಕನಾಗಿ ಈ ವರ್ಷ ನೇಮಕವಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಲಭ್ಯವಿಲ್ಲ. ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಗೂ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಮರಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರಿದ್ಧಧ ಟಿ20 ಸರಣಿಯ ಐದು ಪಂದ್ಯಗಳು ಜೂನ್ 9ರಿಂದ ಆರಂಭವಾಗಲಿದ್ದು ಜೂನ್ 19ರವರೆಗೆ ಐದು ಭಿನ್ನ ತಾಣಗಳಲ್ಲಿ ನಡೆಯಲಿದೆ.
ಇನ್ನು ರೋಹಿತ್ ಅಲಭ್ಯತೆಯಲ್ಲಿ ಸರಣಿಯನ್ನು ಮುನನ್ಡೆಸುವುದು ಕಷ್ಟವಲ್ಲ ಎಂದು ಕೂಡ ರಾಹುಲ್ ದ್ರಾವಿಡ್ ಹೇಳಿದ್ದಾರೆ. "ಇದು ಕಠಿಣವೇನಲ್ಲ. ರೋಹಿತ್ ಮತ್ತು ನಾವು ಸಂಪರ್ಕದಲ್ಲಿದ್ದೇವೆ. ರಾಹುಲ್ ಈ ಮೊದಲು ಕೂಡ ತಂಡವನ್ನು ಮುನ್ನಡೆಸಿದ್ದಾರೆ. ಸಾಕಷ್ಟು ವಿಚಾರಗಳಲ್ಲಿ ನಾವು ಸ್ಪಷ್ಟತೆಯನ್ನು ಹೊಂದಿದ್ದೇವೆ. ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ ಆಡುವ ಆಟಗಾರ. ಹಾಗಾಗಿ ಪ್ರತಿ ಸರಣಿಗೂ ಆತನನ್ನು ನಿರೀಕ್ಷಿಸುವುದು ಸರಿಯಲ್ಲ ಎಂದಿದ್ದಾರೆ ಟೀಮ್ ಇಂಡಿಯಾ ಕೋಚ್.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ವಿಶ್ವದಾಖಲೆಯನ್ನು ಬರೆದಂತಾಗುತ್ತದೆ. ಸತತವಾಗಿ ಅತಿ ಹೆಚ್ಚು ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆಯುವ ಅವಕಾಶ ಭಾರತದ ಮುಂದಿದೆ. ಭಾರತ ಈಗ ಟಿ20 ಮಾದರಿಯಲ್ಲಿ ಸತತ 12 ಪಂದ್ಯಗಳನ್ನು ಗೆದ್ದಿದ್ದು ಅಫ್ಘಾನಿಸ್ತಾನದ ಜೊತೆಗೆ ಸಮ ಸಾಧನೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನಾವು ದಾಖಲೆಯನ್ನು ನಿರ್ಮೊಸುವತ್ತ ಯಾವುದೇ ಚಿತ್ತವನ್ನು ನೆಟ್ಟಿಲ್ಲ. ಪಂದ್ಯವನ್ನು ಗೆದ್ದರೆ ಖುಷಿಯಾಗುತ್ತದೆ. ಆದರೆ ನನಗೆ ದಾಖಲೆಗಳನ್ನು ನಿರ್ಮಿಸುವುದು ಹಾಗೂ ಅಂಕೆಗಳನ್ನು ಹೆಚ್ಚಿಸುವುದರಲ್ಲಿ ನಂಬಿಕೆಯಿಲ್ಲ. ಆದರೆನಾವು ಆಡುವ ಪ್ರತಿ ಪಂದ್ಯವನ್ನು ಕೂಡ ಗೆಲ್ಲಲು ಬಯಸುತ್ತೇವೆ" ಎಂದಿದ್ದಾರೆ ರಾಹುಲ್ ದ್ರಾವಿಡ್.