ಭಾರತ ತಂಡದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಮುಖ್ಯ ಕೋಚ್ ಮತ್ತೊಂದು ಅವಧಿಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಸದ್ಯ 2024ರ ಟಿ20 ವಿಶ್ವಕಪ್ವರೆಗೆ ಅವರ ಹುದ್ದೆಯ ಅವಧಿಯನ್ನು ವಿಸ್ತರಿಸಲಾಗಿದೆ.
2023ರ ಏಕದಿನ ವಿಶ್ವಕಪ್ ಮುಕ್ತಾಯದೊಂದಿಗೆ ಅವರ ಮುಖ್ಯ ಕೋಚ್ ಅವಧಿಯು ಕೊನೆಗೊಂಡಿತ್ತು. ಆದರೆ, ಭಾರತ ಹಿರಿಯರ ಕ್ರಿಕೆಟ್ ತಂಡಕ್ಕೆ ದೊರೆತ ಅವರ ಮಾರ್ಗದರ್ಶನ ಬಿಸಿಸಿಐನ ಗಮನಸೆಳೆದಿತ್ತು. ಸ್ಥಿರತೆ ಹಾಗೂ ನಿರಂತರತೆ ಕಾಪಾಡಿಕೊಳ್ಳಲು ಅವರನ್ನು ಮುಂದುವರೆಸಲಾಗಿದೆ.

ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಈಗಾಗಲೇ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದು, 1-1 ಅಂತರದಲ್ಲಿ ಸಮಬಲ ಸಾಧಿಸಿದೆ.
ಇನ್ನು ಭಾನುವಾರ, ಡಿಸೆಂಬರ್ 17ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಮುಂಚಿತವಾಗಿ ಟೀಮ್ ಇಂಡಿಯಾದ ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೋಚಿಂಗ್ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
ಮುಂಬರುವ ಏಕದಿನ ಸರಣಿಯಲ್ಲಿ ರಾಹುಲ್ ದ್ರಾವಿಡ್ ಅವರ ನಿಯಮಿತ ಕೋಚಿಂಗ್ ಸಿಬ್ಬಂದಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಬಹು-ಸ್ವರೂಪದ ಸರಣಿಗಾಗಿ ದಕ್ಷಿಣ ಆಫ್ರಿಕಾದಲ್ಲಿ 75ಕ್ಕೂ ಅಧಿಕ ಆಟಗಾರರು ಉಪಸ್ಥಿತರಿದ್ದು, ತಂಡಗಳಲ್ಲಿ ಹಲವು ಬದಲಾವಣೆಗಳು ನಡೆದಿವೆ ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಕೂಡ ಒಟ್ಟುಗೂಡಿಸಲಾಗಿದೆ.

ಭಾರತೀಯ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಆಗಾಗ್ಗೆ ಮುಖ್ಯ ಕೋಚ್ ಸ್ಥಾನವನ್ನು ತುಂಬಿದ್ದಾರೆ.
ಆದರೆ, ಈ ಬಾರಿ ಅದೇ ರೀತಿ ಆಗಿಲ್ಲ. ಗಮನಾರ್ಹ ಸಂಗತಿಯೆಂದರೆ, ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಯು ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ತರಬೇತಿ ನೀಡುವ ಬದಲು, ಟೆಸ್ಟ್ ಸರಣಿಗೂ ಮುನ್ನ ಡಿಸೆಂಬರ್ 20ರಿಂದ 22ರವರೆಗೆ ಪ್ರಿಟೋರಿಯಾದಲ್ಲಿ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ನೋಡಿಕೊಳ್ಳುತ್ತದೆ.
ಮೂರು ಪಂದ್ಯಗಳ ಏಕದಿನ ಸರಣಿಗೆ ಕೋಚಿಂಗ್ ಸಿಬ್ಬಂದಿಯನ್ನು ಸಿತಾಂಶು ಕೊಟಕ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಸಿಬ್ಬಂದಿ ಮುನ್ನಡೆಸಲಿದ್ದಾರೆ.
ಕೆಲವು ವರದಿಗಳ ಪ್ರಕಾರ, ಅಜಯ್ ರಾತ್ರಾ ಅವರು ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ಎನ್ಸಿಎಗೆ ಸಂಬಂಧಿಸಿದ ರಾಜಿಬ್ ದತ್ತಾ ಅವರು ಏಕದಿನ ಸರಣಿಯಲ್ಲಿ ಬೌಲಿಂಗ್ ಕೋಚ್ ಆಗಲಿದ್ದಾರೆ.
ರಾಹುಲ್ ದ್ರಾವಿಡ್ ಅವರ ಸಿಬ್ಬಂದಿಯು ಸುದೀರ್ಘ ಸ್ವರೂಪದ ಆಟವಾದ ಟೆಸ್ಟ್ ಕ್ರಿಕೆಟ್ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಗೆ ಸಕಾರಾತ್ಮಕ ಆರಂಭವನ್ನು ಪಡೆಯಲು ತಯಾರಿ ನಡೆಸುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿಗದಿಯಾಗಿದೆ.
ಮೂರು ಪಂದ್ಯಗಳ ಟಿ20 ಸರಣಿಯನ್ನು 1-1 ಅಂತರದಲ್ಲಿ ಡ್ರಾ ಮಾಡಿಕೊಂಡ ಬಳಿಕ, ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಟೀಂ ಇಂಡಿಯಾ ಉತ್ಸುಕವಾಗಿದೆ. ಮೊದಲ ಟಿ20 ಪಂದ್ಯವು ಮಳೆಯ ಕಾರಣದಿಂದ ಒಂದೂ ಎಸೆತ ಕಾಣದೆ ರದ್ದುಗೊಂಡರೆ, ಎರಡನೇ ಟಿ20 ಪಂದ್ಯದಲ್ಲಿ ಹರಿಣ ಪಡೆ ಅದ್ಭುತ ಗೆಲುವು ದಾಖಲಿಸಿತು.
ಸರಣಿಯನ್ನು ಸಮಬಲಗೊಳಿಸಲು ಭಾರತ ತಂಡ ಮೂರನೇ ಟಿ20 ಪಂದ್ಯವನ್ನು ಗೆಲ್ಲಬೇಕಾಗಿತ್ತು ಮತ್ತು ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಸರಣಿಯನ್ನು ಸಮಬಲಗೊಳಿಸಲು ಆತಿಥೇಯರ ವಿರುದ್ಧ ಬೃಹತ್ ಅಂತರದ ಗೆಲುವು ಸಾಧಿಸಿತು.
ಆದಾಗ್ಯೂ, ಭಾರತ ತಂಡವು ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಪಂದ್ಯಗಳಲ್ಲಿ ಇನ್ನಷ್ಟು ಸುಧಾರಿಸಲು ಎದುರು ನೋಡುತ್ತದೆ. ಕೆಎಲ್ ರಾಹುಲ್ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಲಿದ್ದರೆ, ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.