
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಕುರಿತ ಸುದ್ದಿಗೋಷ್ಠಿ ನಡೆಸಲಿದ್ದಾರೆ ಕೆಎಲ್ ರಾಹುಲ್!
ವಾಡಿಕೆಯಂತೆ ಯಾವುದೇ ಸರಣಿಗಳ ಕುರಿತಾಗಿ ಸುದ್ದಿಗೋಷ್ಠಿ ನಡೆಸಬೇಕೆಂದರೆ ಅದನ್ನು ತಂಡದ ನಾಯಕನೇ ನಡೆಸಬೇಕು. ಹೌದು, ಟೀಮ್ ಇಂಡಿಯಾ ನಾಯಕ ಮತ್ತು ಕೋಚ್ ಮಾಧ್ಯಮಗಳ ಮುಂದೆ ಬಂದು ತಮ್ಮ ಮುಂದಿನ ಸರಣಿಗಳ ಕುರಿತು ಮಾತನಾಡುವುದು ಸಾಮಾನ್ಯ. ಆದರೆ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆಯಲಿರುವ ಮಾಧ್ಯಮಗೋಷ್ಠಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬದಲು ಉಪನಾಯಕ ಕೆಎಲ್ ರಾಹುಲ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ಇದು ವಿರಾಟ್ ಕೊಹ್ಲಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಗಾಯಕ್ಕೊಳಗಾದ ರೋಹಿತ್ ಶರ್ಮಾ ಬದಲು ಉಪ ನಾಯಕನಾದ ಕೆಎಲ್ ರಾಹುಲ್
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾಗಿದ್ದ ಟೆಸ್ಟ್ ತಂಡದಲ್ಲಿ ಅಜಿಂಕ್ಯ ರಹಾನೆ ಬದಲು ರೋಹಿತ್ ಶರ್ಮಾಗೆ ಉಪ ನಾಯಕನ ಪಟ್ಟವನ್ನು ನೀಡಲಾಗಿತ್ತು. ಆದರೆ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನವೇ ಗಾಯಕ್ಕೊಳಗಾದ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದರು. ಹೀಗಾಗಿ ಬಿಸಿಸಿಐ ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಹೆಗಲಿಗೆ ಉಪ ನಾಯಕನ ಜವಾಬ್ದಾರಿಯನ್ನು ಹೊರಿಸಿತು.

ಡಿಸೆಂಬರ್ 24 ಅಥವಾ 25ರಂದು ಸುದ್ದಿಗೋಷ್ಠಿ
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರ ಭಾನುವಾರದಂದು ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಕೆಎಲ್ ರಾಹುಲ್ ಡಿಸೆಂಬರ್ 24 ಅಥವಾ ಡಿಸೆಂಬರ್ 25ರಂದು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications
