
ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಈಗಾಗಲೇ ಅಂತ್ಯವಾಗಿದ್ದು ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿರುವ ಕಾರಣ ಏಕದಿನ ಸರಣಿಯನ್ನಾದರೂ ವಶಕ್ಕೆ ಪಡೆಯುವ ಹಂಬಲದಲ್ಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಯ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೆಎಲ್ ರಾಹುಲ್ ಅನೇಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಲ್ ರಾಹುಲ್ ಬೇರೆ ಬೇರೆ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಅನುಭವ ಹೊಂದಿರುವ ಕಾರಣ ನಾಯಕನಾಗಿ ಯಾವ ಕ್ರಮಾಂಕದಲ್ಲಿ ಇಳಿಯಲಿದ್ದಾರೆ ಎಂಬ ಪ್ರಶ್ನೆಗೆ ಕೆಎಲ್ ರಾಹುಲ್ ಸ್ಪಷ್ಟವಾದ ಉತ್ತರ ನೀಡಿದ್ದಾರೆ. ಈ ಸರಣಿಯಲ್ಲಿ ತಾನು ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ ಎಂದಿದ್ದಾರೆ ಕೆಎಲ್ ರಾಹುಲ್. ಕೆಎಲ್ ರಾಹುಲ್ಗೆ ಆರಂಭಿಕನಾಗಿ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಸಾಥ್ ನಿಡುವ ಸಾಧ್ಯತೆ ದಟ್ಟವಾಗಿದೆ.
"ಕಳೆದ 14-15 ತಿಂಗಳಿನಲ್ಲಿ ನಾನು ವಿಭಿನ್ನ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದೇನೆ. ಆದರೆ ಈಗ ರೋಹಿತ್ ಶರ್ಮಾ ಈ ಸರಣಿಗೆ ಅಲಭ್ಯವಾಗಿದ್ದಾರೆ. ಹಾಗಾಗಿ ನಾನು ಆರಂಭಿಕನಾಗಿ ಕಣಕ್ಕಿಳಿಯಲಿದ್ದೇನೆ. ಎಂದು ಕೆಎಲ್ ರಾಹುಲ್ ಮಂಗಳವಾರ ನಡೆಯಲಿರುವ ಏಕದಿನ ಸರಣಿಯ ಮುನ್ನಾ ದಿನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಭಾರತೀಯ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಬಗ್ಗೆಯೂ ಸುಳಿವನ್ನು ನೀಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಆರ್ ಅಶ್ವಿನ್ ಏಕದಿನ ತಮಡದಿಮದ ಹೊರಬಿದ್ದಿದ್ದರು. ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ಗೆ ಆಯ್ಕೆಯಾಗುವ ಮೂಲಕ ಚುಟುಕು ಮಾದರಿಯಲ್ಲಿ ಕಮ್ಬ್ಯಾಕ್ ಮಾಡಿದ ಅಶ್ವಿನ್ ಇದೀಗ ಏಕದಿನ ಮಾದರಿಯಲ್ಲಿಯೂ ಕಮ್ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇನ್ನು ಈ ಬಾರಿಯ ಏಕದಿನ ಸರಣಿಗೆ ಆಯ್ಕೆಯಾಗಿರುವ ವೆಂಕಟೇಶ್ ಐಯ್ಯರ್ ಬಗ್ಗೆಯೂ ಕೆಎಲ್ ರಾಹುಲ್ ಮಾತನಾಡಿದ್ದಾರೆ. "ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಕಾರಣ ಆತ ತಂಡಕ್ಕೆ ನಿಜಕ್ಕೂ ಅಸ್ತ್ರವಾಗಬಲ್ಲ ಆಟಗಾರ. ಈ ಸರಣಿ ಆತನ ಪಾಲಿಗೆ ಅದ್ಭುತವಾದ ಅವಕಾಶವಾಗಿದೆ. ಅಲ್ಲದೆ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಆರನೇ ಬೌಲರ್ನ ಅವಶ್ಯಕತೆ ಬಹಳ ಇರುವ ಕಾರಣ ಇದೊಂದು ಉತ್ತಮ ಅವಕಾಶವಾಗಿದೆ" ಎಂದು ವೆಂಕಟೇಶ್ ಐಯ್ಯರ್ ಬಗ್ಗೆ ಕೆಎಲ್ ರಾಹುಲ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ಇಶಾನ್ ಕಿಶನ್, ಯುಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಶರದ್ ಥಾಕ್ ಕೃಷ್ಣ, , ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.