ಇವರೆಂಥಾ ದುರದೃಷ್ಟವಂತರು!: ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯದ 5 ಭಾರತೀಯ ಕ್ರಿಕೆಟಿಗರು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮುಕ್ತಾಯದ ಬಳಿಕ ಏಕದಿನ ಸರಣಿಯನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಆಡಲಿದೆ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಆಟಗಾರರು ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದು ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ. ಹಾಗಾಗಿ ಯುವ ಆಟಗಾರರಿಗೆ ಈ ಸರಣಿಯಲ್ಲಿ ಭರ್ಜರಿ ಅವಕಾಶ ದೊರೆತಿದ್ದು ಶಿಖರ್ ಧವನ್ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೇಯಸ್ ಐಯ್ಯರ್ ಟೀಮ್ ಇಂಡಿಯಾದ ಉಪನಾಯಕನಾಗಿ ಆಯ್ಕೆಯಾಗಿದ್ದು ಅನೇಕ ಹೊಸಮುಖಗಳಿಗೆ ಅವಕಶ ದೊರೆತಿದೆ. ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್ ಹಾಗೂ ಶಹ್ಬಾಜ್ ಅಹ್ಮದ್ ಈ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರಾಗಿದ್ದಾರೆ. ಹಾಗಿದ್ದರೂ ಈ ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದ ಕೆಲ ಯುವ ಆಟಗಾರರಿಗೆ ನಿರಾಸೆಯಾಗಿದೆ. ಅದರಲ್ಲೂ ಈ ಐವರು ಕ್ರಿಕೆಟಿಗರು ಈ ತಂಡದಲ್ಲಿ ಸ್ಥಾನ ಪಡೆಯದ ದುರದೃಷ್ಟವಂತ ಆಟಗಾರರು. ಯಾರು ಆ ಐವರು ಕ್ರಿಕೆಟಿಗರು? ಮುಂದೆ ಓದಿ..

ಯುವ ಆರಂಭಿಕ ಆಟಗಾರ ಪೃಥ್ವಿ ಶಾ
ಪೃಥ್ವಿ ಶಾ ಕಿರಿಯ ವಯಸ್ಸಿನಲ್ಲಿಯೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆಟಗಾರ ಎನಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕವಾಗಿ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಪೃಥ್ವಿ ಶಾ. ಆದರೆ ಈ ವರ್ಷ ಭಾರತ ತಂಡದಲ್ಲಿ ಯಾವುದೇ ಮಾದರಿಯಲ್ಲಿಯೂ ಪೃಥ್ವಿ ಶಾ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶಾ ಆಯ್ಕೆಯಾಗುವ ನಿರೀಕ್ಷೆಯಿತ್ತು. ಆದರೆ ಮತ್ತೊಮ್ಮೆ ಮುಂಬೈ ಮೂಲಕ ಈ ಯುವ ಆಟಗಾರನಿಗೆ ನಿರಾಸೆ ಮೂಡಿಸಿದೆ.

ಆಲ್ರೌಂಡರ್ ವೆಂಕಟೇಶ್ ಐಯ್ಯರ್
ಕಳೆದ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಮಿಂಚಿದ ಆಟಗಾರ ವೆಂಕಟೇಶ್ ಐಯ್ಯರ್. ಈ ಮೂಲಕ ಹಾರ್ದಿಕ್ ಪಾಂಡ್ಯಾಗೆ ಸೂಕ್ತ ಬದಲಿ ಆಟಗಾರ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಆದರೆ ಅದಾದ ಬಳಿಕ ಐಪಿಎಲ್ ಸೇರಿದಂತೆ ನಂತರ ದೊರೆತ ಅವಕಾಶದಲ್ಲಿ ವೆಂಕಟೇಶ್ ಐಯ್ಯರ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾದರು. ಹೀಗಾಗಿ ಈಗ ಭಾರತದ ಎರಡನೇ ದರ್ಜೆಯ ತಂಡದಲ್ಲಿಯೂ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.

ಆಲ್ರೌಂಡರ್ ಕೃನಾಲ್ ಪಾಂಡ್ಯ
ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯದಲ್ಲಿಯೇ ವೇಗದ ಅರ್ಧ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೃನಾಲ್ ಪಾಂಡ್ಯ ತಮ್ಮ ಹೆಸರಿಸಿದ್ದರು. ಆದರೆ ಅದಾದ ಬಳಿಕ ಕೃನಾಲ್ಗೆ ಹೆಚ್ಚಿನ ಅವಕಾಶಗಳು ದೊರೆಯಲೇ ಇಲ್ಲ. ಕೃನಾಲ್ ಪಾಂಡ್ಯ ಬದಲಿಗೆ ಈ ಸರಣಿಗೆ ಶಹ್ಬಾಜ್ ಅಹ್ಮದ್ಗೆ ಅವಕಾಶ ದೊರೆತಿದೆ.

ಭರವಸೆಯ ವೇಗಿ ಮೊಹ್ಸಿನ್ ಖಾನ್
ಕಳೆದ ಐಪಿಎಲ್ ಆವೃತ್ತಿಯಲ್ಲಿ ವೇಗದ ಬೌಲಿಂಗ್ ಮೂಲಕ ಹೆಚ್ಚು ಮಿಂಚಿದ ಯುವ ಆಟಗಾರರೆಂದರೆ ಮೊಹಸಿನ್ ಖಾನ್ ಹಾಗೂ ಮುಕೇಶ್ ಕುಮಾರ್. ಈ ಪೈಕಿ ಮುಕೇಶ್ ಕುಮಾರ್ ಈ ಏಕದಿನ ಸರಣಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಆದರೆ ಯುವ ವೇಗಿ ಮೊಹ್ಸಿನ್ ಖಾನ್ ಮತ್ತಷ್ಟು ಕಾಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಸರಣಿಗೆ ಆಯ್ಕೆಯಾಗುವ ವಿಶ್ವಾಸವ ನ್ನು ಹೊಂದಿದ್ದರೂ ದುರದೃಷ್ಟವಶಾತ್ ನಿರಾಸೆ ಅನುಭವಿಸಿದ್ದಾರೆ.

ವೇಗದ ಬೌಲರ್ ಚೇತನ್ ಸಕಾರಿಯಾ
ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಚೇತನ್ ಸಕಾರಿಯ ಆಡುವ ಮೂಲಕ ಭಾರತ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿದ್ದರು. ಆದರೆ ನಂತರ ಈ ವರ್ಷದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬೆಂಚ್ ಕಾದು ಕಾಲ ಕಳೆದ ಚೇತನ್ ಸಕಾರಿಯಾ ಅವರನ್ನು ಭಾರತೀಯ ಆಯ್ಕೆ ಸಮಿತಿ ಕೂಡ ಈ ಸರಣಿಗೆ ಪರಿಗಣಿಸಿಲ್ಲ. ಈ ಮೂಲಕ ಮತ್ತೋರ್ವ ಪ್ರತಿಭಾವಂತ ಅವಕಾಶ ಈ ಸರಣಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications