
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಪಂದ್ಯದ ಎರಡನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಮೊದಲ ದಿನದಾಟದಲ್ಲಿ ಭಾರತ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಮಧ್ಯೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ತಂಡದ ಆಯ್ಕೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಾಗಿದೆ. ಏಕದಿನ ತಂಡದ ಆಯ್ಕೆ ಹಿನ್ನೆಲೆಯಲ್ಲಿ ನಡೆಸಬೇಕಿದ್ದ ಆಯ್ಕೆ ಸಮಿತಿಯ ಸಭೆಯನ್ನು ಈ ವಾರಾಂತ್ಯಕ್ಕೆ ಮುಂದೂಡಲಾಗಿದೆ.
ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವುದು ಇದಕ್ಕೆ ಕಾರಣ. ಟೆಸ್ಟ್ ಸರಣಿಗೆ ಮುನ್ನ ಅಭ್ಯಾಸ ಶಿಬಿರಲ್ಲಿ ರೋಹಿತ್ ಶರ್ಮಾ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಈಗ ಅವರು ಬೆಂಗಳೂರಿನ ಎನ್ಸಿಎನಲ್ಲಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಏಕದಿನ ಸರಣಿಯಲ್ಲಿ ಭಾಗಿಯಾಗಲು ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಮದು ವಾರಗಳ ಕಾದು ರೋಹಿತ್ ಶರ್ಮಾರ ಫಿಟ್ಸೆನ್ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆದ ಬಳಿಕ ಭಾರತದ ಏಕದಿನ ತಂಡದ ಆಯ್ಕೆ ನಡೆಸುವ ತೀರ್ಮಾನವನ್ನು ಆಯ್ಕೆ ಮಂಡಳಿ ತೆಗೆದುಕೊಂಡಿದೆ. ಡಿಸೆಂಬರ್ 30 ಅಥವಾ 31ರಂದು ಆಯ್ಕೆ ಸಮಿತಿ ಸಭೆ ನಡೆಸಲಿದೆ.
ಈ ಬಗ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ. "ತಂಡದ ಆಯ್ಕೆ ಸಮಿತಿಯ ಸಭೆಯನ್ನು ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ನಡೆಸಲು ನಿರ್ಧರಿಸಲಾಗಿದೆ. ಅದು ಡಿಸೆಂಬರ್ 30 ಅಥವಾ 31ರಂದು ನಡೆಯಬಹುದು. ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ರೋಹಿತ್ ಶರ್ಮಾ ಮುಂದಿನ ಸರಣಿಗೆ ಫಿಟ್ ಆಗಲು ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ. ಆದರೆ ಮಂಡಿರಜ್ಜು ಗಾಯ ಇತರ ಎಲ್ಲಾ ಗಾಯಗಳಿಗಿಂತ ಭಿನ್ನವಾಗಿರುತ್ತದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಏಕದಿನ ಸಣಿಯಲ್ಲಿ ಭಾಗಿಯಾಗುತ್ತಾರಾ ರೋಹಿತ್ ಶರ್ಮಾ: ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿರುವ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದಾರಾ ಎಂಬುದು ಈಗಿನ ಪ್ರಶ್ನೆಯಾಗಿದೆ. ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಚೇತರಿಕೆಗಾಗಿ ರಿಹ್ಯಾಬಿಲಿಟೇಶನ್ನಲ್ಲಿ ಭಾಗಿಯಾಗಿದ್ದಾರೆ. ಹಾಗಿದ್ದರೂ ಟೀಮ್ ಇಂಡಿಯಾ ನಾಯಕ ಸಂಪೂರ್ಣವಾಗಿ ಫಿಟ್ನೆಸ್ ಪಡೆದುಕೊಳ್ಳಲು ಕೆಲ ಕಾಲ ತೆಗೆದುಕೊಳ್ಳುತ್ತಿದೆ. ರೋಹಿತ್ ಇತ್ತೀಚೆಗಷ್ಟೇ ಸೀಮಿತ ಓವರ್ಗಳ ತಂಡದ ಪೂರ್ಣಕಾಲಿಕ ನಾಯಕನಾಗಿ ಆಯ್ಕೆಯಾಗಿದ್ದರು.
ಅಶ್ವಿನ್ ಕಮ್ಬ್ಯಾಕ್ ಸಾಧ್ಯತೆ: ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅಲಭ್ಯವಾಗುವುದು ಖಚಿತವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಏಕದಿನ ತಂಡಕ್ಕೆ ನಾಲ್ಕು ವರ್ಷಗಳ ಬಳಿಕ ಆರ್ ಅಶ್ವಿನ್ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಋತುರಾಜ್ ಗಾಯಕ್ವಾಡ್ ಹಾಗೂ ವೆಂಕಟೇಶ್ ಐಯ್ಯರ್ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ರೋಹಿತ್ ಅಲಭ್ಯವಾದರೆ ರಾಹುಲ್ ನಾಯಕ?: ಇನ್ನು ಟೀಮ್ ಇಂಡಿಯಾದ ಏಕದಿನ ಸರಣಿಯಿಂದಲೂ ರೋಹಿತ್ ಶರ್ಮಾ ಹೊರಗುಳಿಯಬೇಕಾದರೆ ಟೀಮ್ ಇಂಡಿಯಾದ ನಾಯಕತ್ವ ಯಾರ ಹೆಗಲಿಗೆ ಬೀಳಿದೆ ಎಂಬ ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ ಸೋಮಿತ ಓವರ್ಗಳ ನಾಯಕತ್ವದಿಂದ ಕೆಳಕ್ಕಿಳಿದಿರುವ ಕಾರಣ ತಂಡವನ್ನು ಮುನ್ನಡೆಸುವ ಹೊಣೆಗಾರಿಗೆ ಕನ್ನಡಿಗ ಕೆಎಲ್ ರಾಹುಲ್ ಹೆಗಲೇರುವ ಸಾಧ್ಯತೆ ದಟ್ಟವಾಗಿದೆ. ಕೆಎಲ್ ರಾಹುಲ್ ಭಾರತ ನೂತನ ಉಪನಾಯಕನೂ ಹೌದು.