
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವವ ಶಾರ್ದೂಲ್ ತನ್ನಲ್ಲಿನ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶಾರ್ದೂಲ್ ಠಾಕೂರ್ ಅವರ ಈ ಬೌಲಿಂಗ್ ಪ್ರದರ್ಶನವನ್ನು ಸಾಕಷ್ಟು ದಿಗ್ಗಜ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ಪ್ರಶಂಸಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಶಾರ್ದೂಲ್ ಠಾಕೂರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಶಾರ್ದೂಲ್ ಠಾಕೂರ್ ಎರಡನೇ ಟೆಸ್ಟ್ನಲ್ಲಿ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವಂತೆಯೇ ಸಾಮಾಜಿಕ ಜಾಲತಾಣದಲ್ಲಿ "ಲಾರ್ಡ್ ಶಾರ್ದೂಲ್" ಟ್ರೆಂಡಿಂಗ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಾಗೆಲ್ಲಾ ಅದ್ಭುತವಾಗಿ ಬಳಸಿಕೊಳ್ಳುತ್ತಿರುವ ಶಾರ್ದೂಲ್ ಠಾಕೂರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ "ಲಾರ್ಡ್ ಶಾರ್ದೂಲ್" ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದಾರೆ.
ಜೋಹನ್ಸ್ಬರ್ಗ್ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾದ ಬಳಿಕ ಸ್ವತಃ ಶಾರ್ದೂಲ್ ಠಾಕೂರ್ ಈ ನಿಕ್ ನೇಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಹೆಸರು ಎಲ್ಲಿಂದ ಬಂತು ಎಂಬ ಬಗ್ಗೆ ಶಾರ್ದೂಲ್ ಠಾಕೂರ್ ವಿವರಿಸಿದ್ದಾರೆ.
ಲಾರ್ಡ್ ಎಂದು ಮೊದಲಿಗೆ ಕರೆದಿದ್ದು ಯಾರು ಗೊತ್ತಿಲ್ಲ ಆದರೆ..: ಟೆಸ್ಟ್ ಕ್ರಿಕೆಟ್ನಲ್ಲಿ ಇತ್ತೀಚೆಗೆ ಭಾರತದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಿರುವ ಶಾರ್ದೂಲ್ ಠಾಕೂರ್ ತಮಗೆ ಅಭಿಮಾನಿಗಳು ನೀಡಿರುವ ಲಾರ್ಡ್ ಅಡ್ಡ ಹೆಸರನ್ನು ಆರು ಆರಂಭದಲ್ಲಿ ಕರೆದರು ಎಂಬ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾರೆ. ಆದರೆ ಇದು ಯಾವಾಗ ಆರಂಭವಾಯಿತು ಎಂದು ಅವರು ಹೇಳಿದ್ದಾರೆ. "ನನಗೆ ಖಂಡಿತವಾಗಿತೂ ಲಾರ್ಡ್ ಅಂತ ಮೊದಲಿಗೆ ಯಾರು ಆರಂಭಿಸಿದರು ಎಂದುದು ತಿಳಿದಿಲ್ಲ. ಆದರೆ ಇದು ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭವಾಗಿತ್ತು. ನಾವು ಆಗ ಆಸ್ಟ್ರೇಲಿಯಾ ಪ್ರವಾಸದಿಂದ ವಾಪಾಸಾಗಿದ್ದೆವು ಹಾಗೂ ಐಪಿಎಲ್ಗೆ ಕೆಲವೇ ದಿನಗಳಿದ್ದವು. ಆ ಸರಣಿಯಲ್ಲಿ ನಾನು ಕೆಲ ವಿಕೆಟ್ಗಳನ್ನು ಪಡೆದುಕೊಂಡಿದ್ದೆ. ಒಂದೇ ಓವರ್ನಲ್ಲಿ ಸತತ ವಿಕೆಟ್ಗಳನ್ನು ಕೂಡ ಪಡೆದುಕೊಂಡಿದ್ದೆ. ಆ ನಂತರ ಈ ಹೆಸರು ನನಗೆ ಬಂದಿದೆ" ಎಂದು ಶಾರ್ದೂಲ್ ಠಾಕೂರ್ ತಮಗೆ ಬಂದಿರುವ ಅಡ್ಡ ಹೆಸರಿನ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದ ಕಾರಣಕ್ಕೆ ಅಭಿನಂದನೆ ಸಲ್ಲಿಸಿದ ಬಗ್ಗೆಯೂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಪರವಾಗಿ ಆಡುವಾಗ ಸಚಿನ್ ತೆಂಡೂಲ್ಕರ್ ಸಾಕಷ್ಟು ಸ್ಪೂರ್ತಿಯನ್ನು ತುಂಬಿದ್ದರು ಎಂದು ಶಾರ್ದೂಲ್ ಹೇಳಿಕೊಂಡಿದ್ದಾರೆ.
"ಸ್ವತಃ ದೇವರೇ ನನ್ನ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದರೆ ಅದು ನನ್ನ ಅದೃಷ್ಠ. ಅವರ ಜೊತೆಗೆ ಮುಂಬೈ ತಂಡದ ಪರವಾಗಿ ಕೆಲ ಪಂದ್ಯಗಳಲ್ಲಿ ಆಡಿದ್ದೇನೆ. ಅವರು ನನಗೆ ಯಾವಾಗಲೂ ಬೆಂಬಲಿಸುತ್ತಾರೆ. ಅವರಿಂದ ಇಂತಾ ಮಾತುಗಳನ್ನು ಕೇಳುವುದು ಖುಷಿನೀಡುತ್ತದೆ. ಆ ಮಾತುಗಳು ಮತ್ತಷ್ಟು ಹುರುಪು ನೀಡುತ್ತವೆ" ಎಂದಿದ್ದಾರೆ ಶಾರ್ದೂಲ್ ಠಾಕೂರ್.
ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ಗೆ 202 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದರೂ ಇದರ ಲಾಭವನ್ನು ಪಡೆದುಕೊಳ್ಳಲು ದಕ್ಷಿಣ ಆಫ್ರಿಕಾಗೆ ಸಾಧ್ಯವಾದ ರೀತಿಯ ಪ್ರದರ್ಶನ ನೀಡಿದ್ದು ಶಾರ್ದೂಲ್ ಠಾಕೂರ್. ದಕ್ಷಿಣ ಆಫ್ರಿಕಾದ 7 ಆಟಗಾರರನ್ನು ಫೆವಿಲಿಯನ್ಗೆ ಅಟ್ಟಿದ ಶಾರ್ದೂಲ್ ದಕ್ಷಿಣ ಆಫ್ರಿಕಾಗೆ ದೊಡ್ಡ ಮುನ್ನಡೆಯನ್ನು ಪಡೆಯದಂತೆ ತಡೆಯಲು ಕಾರಣವಾದರು. ಹೀಗಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 27 ರನ್ಗಳ ಮುನ್ನಡೆಯನ್ನು ಮಾತ್ರವೇ ಪಡೆದಿದೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಡುವಾನ್ನೆ ಒಲಿವಿಯರ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ