ನಾಯಕ ತೆಂಬು ಬವುಮಾ ಬಾರಿಸಿದ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಕೋಲ್ಕತ್ತಾ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಸಾಧಾರಣ ಮೊತ್ತವನ್ನು ಕಲೆ ಹಾಕಿದೆ. ಟೀಮ್ ಇಂಡಿಯಾದ ಬೌಲರ್ಗಳ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ದಕ್ಷಿಣ ಆಫ್ರಿಕಾದ ನಾಯಕ ತೆಂಬು ಬವುಮಾ ಅವರನ್ನು ಹೊರತು ಪಡಿಸಿದರೆ ಬೇರೆ ಯಾವೊಬ್ಬ ಆಟಗಾರ ಸಫಲರಾಗಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 124 ರನ್ಗಳ ಗುರಿಯನ್ನು ಟೀಮ್ ಇಂಡಿಯಾಕ್ಕೆ ನೀಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಟ್ಟು 10 ಬ್ಯಾಟರ್ಗಳೊಂದಿಗೆ ಆಡಲಿದೆ. ಶುಭಮನ್ ಗಿಲ್ ಗಾಯದ ಕಾರಣದಿಂದ ಅಂಗಳಕ್ಕೆ ಇಳಿಯುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
ಭಾನುವಾರ ಮೂರನೇ ದಿನ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ನಲ್ಲಿ 7 ವಿಕೆಟ್ಗೆ 93 ರನ್ಗಳಿಂದ ಆಟವನ್ನು ಮುಂದುವರೆಸಿತು. ಭಾನುವಾರ ನಾಯಕ ತೆಂಬು ಬವುಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕಾರ್ಬಿನ್ ಬಾಷ್ ತಂಡದ ಪರ ಉತ್ತಮ ಆಟದ ಪ್ರದರ್ಶನ ನೀಡಿದರು. ಈ ಜೊಡಿಯನ್ನು ಕಟ್ಟಿ ಹಾಕುವಲ್ಲಿ ಭಾರತ ತಂಡದ ಬೌಲರ್ಸ್ಗಳು ಕೊಂಚ ಹಿನ್ನಡೆ ಅನುಭವಿಸಿದರು. ಈ ಜೋಡಿ 8ನೇ ವಿಕೆಟ್ಗೆ 79 ಎಸೆತಗಳಲ್ಲಿ 44 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಕಾರ್ಬಿನ್ ಬಾಷ್ 37 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್ ಸಿಡಿಸಿದ್ದಾಗ ಜಸ್ಪ್ರಿತ್ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು.

ಕೆಳ ಕ್ರಮಾಂಕದಲ್ಲಿ ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ನಾಯಕ ತೆಂಬು ಬವುಮಾ ಅವರಿಗೆ ಉತ್ತಮ ಸಾಥ್ ನೀಡುವಲ್ಲಿ ವಿಫಲರಾದರು. ಪರಿಣಾಮ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ನಲ್ಲಿ 153 ರನ್ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 30 ರನ್ ಹಿನ್ನಡೆ ಅನುಭವಿಸಿದ್ದರಿಂದ, ಭಾರತಕ್ಕೆ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾ 124 ರನ್ ಗುರಿಯನ್ನು ನೀಡಿದೆ.
ದಕ್ಷಿಣ ಆಫ್ರಿಕಾದ ನಾಯಕ ತೆಂಬು ಬವುಮಾ ಅವರು ಏಕಾಂಗಿ ಹೋರಾಟ ನಡೆಸಿದರು. ಒಂದು ಬದಿಯಲ್ಲಿ ವಿಕೆಟ್ಗಳು ಬೀಳುತ್ತಾ ಇದ್ದರೆ ಇನ್ನೊಂದು ಬದಿಯಲ್ಲಿ ತೆಂಬು ಬವುಮಾ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಕೋಲ್ಕತ್ತಾದಂತಹ ಪಿಚ್ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ತೆಂಬು ಬವುಮಾ ತೋರಿಸಿಕೊಟ್ಟರು. ಇವರು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ 136 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅಜೇಯ 55 ರನ್ ಬಾರಿಸಿದರು. ಇವರನ್ನು ಔಟ್ ಮಾಡುವಲ್ಲಿ ಭಾರತೀಯ ಬೌಲರ್ಗಳು ವಿಫಲರಾದರು.
ಟೀಮ್ ಇಂಡಿಯಾದ ಪರ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಅವರು ನಾಲ್ಕು ವಿಕೆಟ್ ಕಬಳಿಸಿದರು. ಉಳಿದಂತೆ ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರೆ, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.