
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಮೂಲಕ ಹರಿಣಗಳ ನಾಡಿನಲ್ಲಿ ಐತಿಹಾಸಿಕ ಸರಣಿ ಗೆಲ್ಲುವ ಗುರಿ ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಟ್ಟಿದೆ ವಿರಾಟ್ ಕೊಹ್ಲಿ ಬಳಗ. ಸೆಂಚುರಿಯನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಭಾರತೀಯ ತಂಡದ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಥಮ ಟೆಸ್ಟ್ ಸರಣಿಯನ್ನು ಗೆಲ್ಲುವ ಅದ್ಭುತವಾದ ಅವಕಾಶವಿದೆ ಎಂದಿದ್ದಾರೆ ಹರ್ಭಜನ್ ಸಿಂಗ್. ಭಾರತ ತಂಡ ಈಗ ಹಿಂದಿನಂತಿಲ್ಲ. ಭಾರತ ತಂಡದ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದ್ದು ಯಾವುದೇ ಪರಿಸ್ಥಿತಿಯಲ್ಲಿಯೂ ಟೆಸ್ಟ್ ಕ್ರಿಕೆಟ್ನಲ್ಲಿ 20 ವಿಕೆಟ್ಗಳನ್ನು ಪಡೆಯುವಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ ಹರ್ಭಜನ್ ಸಿಂಗ್.
ನಾವು ಇದನ್ನು ಈ ಸರಣಿ ಆರಂಭವಾಗುವುದಕ್ಕೂ ಮೊದಲೇ ಮಾತನಾಡಿದ್ದೇವೆ. ಈ ಬಾರಿಯ ಸರಣಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಅದ್ಭುತವಾದ ಅವಕಾಶವನ್ನು ನೀಡಲಿದೆ. ಮೊದಲೆಲ್ಲಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತೆರಳುತ್ತಿದ್ದಾಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಆಡಲು ತೆರಳುತ್ತಿರುವಂತೆ ಭಾಸವಾಗುತ್ತಿತ್ತು. ಆದರೆ ಈಗ ದಕ್ಷಿಣ ಆಫ್ರಿಕನ್ ಕ್ರಿಕೆಟ್ನ ಪರಿಸ್ಥಿತಿಯನ್ನು ಲೆಕ್ಕಿಸದೆಯೇ ಭಾರತ 20 ವಿಕೆಟ್ಗಳನ್ನು ಪಡೆಯುವ ಬೌಲಿಂಗ್ ಪಡೆಯನ್ನು ಹೊಂದಿದೆ. ಶಮಿ ಐದು ವಿಕೆಟ್ಗಳ ಗೊಂಚಲನ್ನು ಪಡೆದರೆ ಎರಡನೇ ಇನ್ನಿಂಗ್ಸ್ನಲ್ಲಿಯೂ ಅಮೋಘ ಆಟವಾಡಿದರು. ನಾಲ್ಕನೇ ದಿನದಾಟದಲ್ಲಿ ಬೂಮ್ರಾ ಕೂಡ ನಿರ್ಣಾಯಕ ವಿಕೆಟ್ಗಳನ್ನು ಕಬಳಿಸಿದ್ದಾರೆ" ಎಂದು ಭಾರತೀಯ ಬೌಲಿಂಗ್ ವಿಭಾಗದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಈಗಿನ ಭಾರತೀಯ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಹೋಲಿಸಿದರೆ ಬಹಳಷ್ಟು ಬಲಿಷ್ಠವಾಗಿದೆ. ಹೀಗಾಗಿ ಕೊಹ್ಲಿ ಪಡೆಗೆ ಆತಿಥೇಯ ತಂಡ ಯಾವುದೇ ರೀತಿಯಲ್ಲಿಯೂ ಸರಿಸಾಟಿಯಾಗದು ಎಂದಿದ್ದಾರೆ. ಇನ್ನು ಈ ಸರಣಿಯನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಶಕ್ಕೆ ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದಿದ್ದಾರೆ ಹರ್ಭಜನ್ ಸಿಂಗ್.
"ಒಟ್ಟಾರೆಯಾಗಿ ನೋಡಿದಾಗ ದಕ್ಷಿಣ ಆಫ್ರಿಕಾ ತಂಡವನ್ನು ನೀವು ಗಮನಿಸಿದರೆ ಭಾರತೀಯ ತಂಡಕ್ಕೆ ಯಾವ ವಿಭಾಗದಲ್ಲಿಯೂ ಹೋಲಿಕೆಯಾಗಲಾರದು. ನನ್ನ ಪ್ರಕಾರ ಇದು ಅತ್ಯಂತ ಬಲಿಷ್ಠವಾದ ಭಾರತೀಯ ತಂಡ. ನಾನು ಈಗಾಗಲೇ ಹೇಳಿರುವಂತೆ ಇದು ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಜಯಿಸಲು ಅತ್ಯಂತ ಪ್ರಶಸ್ತವಾದ ಸಂದರ್ಭ. ಈ ಬಾರಿಯೂ ಭಾರತ ತಂಡಕ್ಕೆ ಸರಣಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಬಹಳಷ್ಟು ಕಠಿಣವಾಗಿರಲಿದೆ. ಭಾರತ ಉತ್ತಮವಾದ ಆರಂಭವನ್ನು ಪಡೆದುಕೊಂಡಿದ್ದು ಭಾರತದ ಸರಣಿ ಗೆಲುವಿನ ಸಂದರ್ಭ ಬರಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಖಂಡಿತವಾಗಿಯೂ ಒಂದು ಪಂದ್ಯವನ್ನು ಗೆದ್ದುಕೊಳ್ಳಲಿದ್ದು ಆ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜನವರಿ 3ನೇ ತಾರೀಕಿನಿಂದ ಜೊಹನ್ಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಾದ ಬಳಿಕ ಅಂತಿಮ ಪಂದ್ಯ ಜನವರಿ 11ರಿಂದ ಆರಂಭವಾಗಲಿದ್ದು ಈ ಪಂದ್ಯ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಸ್ಕ್ವಾಡ್: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ,ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಪ್ರಿಯಾಂಕ್ ಪಾಂಚಾಲ್, ಹನುಮ ವಿಹಾರಿ, ಇಶಾಂತ್ ಶರ್ಮಾ
ದಕ್ಷಿಣ ಆಫ್ರಿಲಾ ಸ್ಕ್ವಾಡ್: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಡುವಾನ್ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್