ಇದನ್ನು ಆತ ಆಸ್ಟ್ರೇಲಿಯಾದಲ್ಲಿ ಮಾಡಿರಲಿಲ್ಲ: ಕೋಚ್ ದ್ರಾವಿಡ್ ಮೇಲೆ ಭಾರ ಹಾಕಿದ ಗವಾಸ್ಕರ್!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಾಟ ನಡೆಯುತ್ತಿದೆ. ಮೂರು ದಿನಗಳ ಸಂಪೂರ್ಣ ಆಟದ ಬಳಿಕ ನಾಲ್ಕನೇ ದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಗೆಲುವಿಗೆ 240 ರನ್ಗಳ ಗುರಿಯನ್ನು ಪಡೆದಿರುವ ದಕ್ಷಿಣ ಆಫ್ರಿಕಾ ಈ ಗುರಿ ಬೆನ್ನಟ್ಟಲು ಆರಂಭಿಸಿದೆ. 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡ 122 ರನ್ಗಳ ಹಿನ್ನಡೆಯಲ್ಲಿದ್ದು ಗೆಲುವಿನ ಕನಸು ಕಾಣುತ್ತಿದೆ.
ಇನ್ನು ಇದಕ್ಕೂ ಮುನ್ನ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಸತತವಾಗಿ ವೈಫಲ್ಯ ಅನುಭವಿಸಿದ್ದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಜೊತೆಯಾಟ ನೀಡಿದ್ದು ಅಂತಿಮ ಹಂತದಲ್ಲಿ ಹನುಮ ವಿಹಾರಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಸವಾಲಿನ ಮೊತ್ತ ಪೇರಿಸಿದೆ. ಈ ಸಂದರ್ಭದಲ್ಲಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಭಾರತ ತಂಡದ ಯುವ ಆಟಗಾರನ ಪ್ರದರ್ಶನಕ್ಕೆ ಕಿಡಿ ಕಾರಿದ್ದಾರೆ. ಅದರಲ್ಲೂ ಎರಡನೇ ಇನ್ನಿಂಗ್ಸ್ನಲ್ಲಿನ ಬೇಜವಾಬ್ಧಾರಿಯುತ ಬ್ಯಾಟಿಂಗ್ ಬಗ್ಗೆ ಸುನಿಲ್ ಗವಾಸ್ಕರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಸುಸ್ಥಿತಿಯಿಂದ ಒತ್ತಡಕ್ಕೆ ಸಿಲುಕಿತ್ತು ಭಾರತ
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಒಂದು ಹಂತದಲ್ಲಿ 155 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಜೋಡಿ 111 ರನ್ಗಳ ಜೊತೆಯಾಟ ನೀಡಿ ಕ್ರೀಸ್ನಲ್ಲಿದ್ದರು. ಈ ಸಂದರ್ಭದಲ್ಲಿ ಅರ್ಧ ಶತಕಗಳಿಸಿದ್ದ ರಹಾನೆ ಹಾಗೂ ಪೂಜಾರ ಜೊಡಿಯನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಸಫಲವಾಗಿದ್ದರು ರಬಾಡ. ಈ ಹಂತದಲ್ಲಿ ಕ್ರೀಸ್ಗೆ ಇಳಿದಿದ್ದ ಹೊಸ ಬ್ಯಾಟರ್ ರಿಷಭ್ ಪಂತ್ ಅತ್ಯಂತ ಕಳಪೆ ಹೊಡೆತವನ್ನು ಬಾರಿಸಲು ಹೋಗಿ ವಿಕೆಟ್ ಕಳೆದುಕೊಂಡರು. ನಿರ್ಣಾಯಕ ಹಂತದಲ್ಲಿ ಪಂತ್ ಈ ರೀತಿಯಾಗಿ ವಿಕೆಟ್ ಕಳೆದುಕೊಂಡಿದ್ದು ತಂಡವನ್ನು ಒತ್ತಡಕ್ಕೆ ಸಿಲುಕಿಸಿತ್ತು.

ಬೇಜವಾಬ್ಧಾರಿಯುತ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಪಂತ್
ಒಂದರ ಹಿಂದೊಂದರಂತೆ ಎರಡು ವಿಕೆಟ್ಗಳು ಬಿದ್ದಾಗ ಆಗಷ್ಟೇ ಕ್ರೀಸ್ಗೆ ಬಂದಿದ್ದ ರಿಷಭ್ ಪಂತ್ ಇನ್ನಿಂಗ್ಸ್ ಕಟ್ಟುವತ್ತ ಗಮನಹರಿಸದೆ ಕಗಿಸೋ ರಬಾಡ ಎಸೆತಕ್ಕೆ ಬಾರಿಸಿಹೊಡೆಯುವ ಪ್ರಯತ್ನ ಮಾಡಿದ್ದರು. ಇದು ಎಡ್ಜ್ ಆಗಿ ವಿಕೆಟ್ ಕೀಪರ್ ಕೈ ಸೇರಿಕೊಂಡಿತ್ತು. ಇದಕ್ಕೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಾ ಹೊಡೆತವನ್ನು ರಿಷಭ್ ಪಂತ್ 30 ಅಥವಾ 40 ರನ್ಗಳಿಸಿದ್ದಾಗ ಬಾರಿಸಿದ್ದರೆ ಅರ್ಥ ಮಾಡಿಕೊಳ್ಳಬಹುದಾಗಿತ್ತು. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಾಡದಿರಿರುವುದನ್ನು ಪಂತ್ ಇಲ್ಲಿ ಮಾಡಿದ್ದರು" ಎಂದು ಗವಾಸ್ಕರ್ ಅಸಮಾಧಾನದಿಂದ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪಂತ್ ಬ್ಯಾಟಿಂಗ್ ಬಗ್ಗೆ ಗವಾಸ್ಕರ್ ಮಾತು
ಇನ್ನು ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಆಸ್ಟ್ರೇಲಿಯಾದಲ್ಲಿ ಪಂತ್ ಆಡಿದ ಪ್ರಬುದ್ಧ ಬ್ಯಾಟಿಂಗ್ ಬಗ್ಗೆ ಗಮನಸೆಳೆದರು. "ಅಲ್ಲಿ ರಿಷಭ್ ಪಂತ್ ಆರಂಭದಲ್ಲಿ ಕಠಿಣವಾದ ಕ್ಷಣಗಳು ಎದುರಾಗುತ್ತವೆ ಎಂಬುದನ್ನು ಗುರುತಿಸಿದ್ದರು ಮತ್ತು ಅದರ ವಿರುದ್ಧ ಹೋರಾಡಿದ್ದರು. ಕ್ರೀಸ್ಗೆ ಸೆಟ್ ಆಡುತ್ತಲೇ ಪಿಚ್ಚನ್ನು ಅರ್ಥ ಮಾಡಿಕೊಂಡರು. ಬಳಿಕ ಅವರು ದೊಡ್ಡ ಹೊಡೆತಗಳತ್ತ ಚಿತ್ತ ನೆಟ್ಟಿದ್ದರು. ಆಸ್ಟ್ರೇಲಿಯಾದಲ್ಲಿ ಅವರು ಇದನ್ನು ಅದ್ಭುತವಾಗಿ ನಿರ್ವಹಿಸಿದ್ದರು" ಎಂದು ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ.

ದ್ರಾವಿಡ್ ಮೇಲೆ ಭಾರತ ಹಾಕಿದ ಗವಾಸ್ಕರ್
ಇನ್ನು ರಿಷಭ್ ಪಂತ್ ಅವರ ಈ ಪ್ರದರ್ಶನದಿಂದಾಗಿ ರಾಹುಲ್ ದ್ರಾವಿಡ್ ಕೂಡ ಖಂಡಿತಾ ನಿರಾಶರಾಗಿರುತ್ತಾರೆ ಎಂದ ಗವಾಸ್ಕರ್ ಈ ಬಗ್ಗೆ ಅವರಿಗೆ ತಿಳಿಸಿ ಹೇಳುವ ಪ್ರಯತ್ನವನ್ನು ರಾಹುಲ್ ಖಂಡಿತಾ ಮಾಡಲಿದ್ದಾರೆ ಎಂದಿದ್ದಾರೆ. "ಇಂಗ್ಲೆಂಡ್ ಭಾರತಕ್ಕೆ ಬಂದಿದ್ದಾಗ ಟೆಸ್ಟ್ ಸರಣಿಯ ಆರಂಭದಲ್ಲಿ ಜೇಮ್ಸ್ ಆಂಡರ್ಸನ್ ಎಸೆತಕ್ಕೆ ಅದ್ಭುತವಾದ ರೀತಿಯಲ್ಲಿ ದೊಡ್ಡ ಹೊಡೆತವನ್ನು ಬಾರಿಸಿದ್ದರು. ಅದನ್ನು ಅವರು ಅದ್ಭುತವಾಗಿ ಮಾಡಿದ್ದರು. ಆದರೆ ಅದಾದ ಬಳಿಕ ಅವರು ಆಡಲು ತನಗಿರುವ ದಾರಿ ಅದು ಮಾತ್ರವೇ ಎಂದುಕೊಂಡಿದ್ದಾರೆ. ಹಾಗಾಗಿಯೇ ರಾಹುಲ್ ದ್ರಾವಿಡ್ ಈ ಬಗ್ಗೆ ರಿಷಭ್ ಪಂತ್ಗೆ ತಿಳಿಹೇಳುವ ಪ್ರಯತ್ನವನ್ನು ಖಂಡಿತಾಗಿಯೂ ಮಾಡಲಿದ್ದಾರೆ" ಎಂದು ಗವಾಸ್ಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications