ಮಂಗಳವಾರ, ಡಿಸೆಂಬರ್ 26ರಿಂದ ಪ್ರವಾಸಿ ಭಾರತ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಬೌಲರ್ಗಳ ಸ್ವರ್ಗ ಎನಿಸಿರುವ ಸೆಂಚುರಿಯನ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ವಿರಾಮದ ನಂತರ ಭಾರತ ತಂಡದ ಅಗ್ರ ಆಟಗಾರರು ಮೈದಾನಕ್ಕೆ ಮರಳಲಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು 2023ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಯಾವುದೇ ಕ್ರಿಕೆಟ್ ಪಂದ್ಯ ಆಡಿರಲಿಲ್ಲ.

ಇದೇ ವೇಳೆ ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಸೆಂಚುರಿಯನ್ನಲ್ಲಿ ಪಿಚ್ ಪರಿಸ್ಥಿತಿಯ ಹೊರತಾಗಿಯೂ ಭಾರತ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಇಬ್ಬರು ಸ್ಪಿನ್ನರ್ಗಳನ್ನು ಆಡಬೇಕೆಂದು ಬಯಸಿದ್ದಾರೆ.
ಅನುಭವಿ ಸ್ಪಿನ್ ಬೌಲಿಂಗ್ ಜೋಡಿಯಾಗಿರುವ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಹೆಸರಿಸಬೇಕೆಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡುವಾಗ ಭಾರತದ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಭಾರತ ತಂಡವು ಮೂರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಅವರು ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದ ಅಗ್ರ 3 ವೇಗಿಗಳಾಗಿ ಹೆಸರಿಸಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇನ್ನು ಫಿಟ್ನೆಸ್ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ನಂತರ ಭಾರತ ತಂಡಕ್ಕೆ ವೇಗದ ಬೌಲರ್ ಮೊಹಮ್ಮದ್ ಶಮಿ ಸೇವೆ ಇರುವುದಿಲ್ಲ. 2023ರ ಏಕದಿನ ವಿಶ್ವಕಪ್ನಲ್ಲಿ ಪಾದದ ಗಾಯಕ್ಕೆ ಒಳಗಾದ ನಂತರ, ಮೊಹಮ್ಮದ್ ಶಮಿ ಸಮಯಕ್ಕೆ ಚೇತರಿಸಿಕೊಳ್ಳಲು ವಿಫಲರಾದರು.
ಭಾರತ ತಂಡದಲ್ಲಿ ಇನ್ನೆರಡು ಬದಲಾವಣೆಗಳನ್ನು ಮಾಡಲಾಗಿದ್ದು, ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಬದಲಿಗೆ ಕೆಎಸ್ ಭರತ್ ಮತ್ತು ಅಭಿಮನ್ಯು ಈಶ್ವರನ್ ಅವರನ್ನು ಕರೆತರಲಾಗಿದೆ.
ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಒಮ್ಮೆಯೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಮತ್ತು ಹರಿಣಗಳ ದೇಶಕ್ಕೆ ಬಲಿಷ್ಠ ತಂಡವನ್ನು ಕೊಂಡೊಯ್ಯುವ ಮೂಲಕ ಅದನ್ನು ಬದಲಾಯಿಸಲು ಭಾರತ ಆಶಿಸುತ್ತಿದೆ.