
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಬೇಕು ಎಂದಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಈ ಪಂದ್ಯವನ್ನು ಭಾರತ ಯಾವ ಕಾರಣಕ್ಕೆ ಗೆಲ್ಲಬೇಕು ಎಂಬುದಕ್ಕೆ ಭಾವನಾತ್ಮಕ ಕಾರಣವನ್ನು ನೀಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯದ ನಾಲ್ಕನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸುನಿಲ್ ಗವಾಸ್ಕರ್ ಬಳಿ ಭಾರತ ಈ ಪಂದ್ಯವನ್ನು ಗೆಲ್ಲುವ ಸಾಧ್ಯತೆಯಿದೆಯಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸುನಿಲ್ ಗವಾಸ್ಕರ್ ಭಾರತ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಾರತ ಈ ಪಂದ್ಯವನ್ನು ಗೆಲ್ಲಬಹುದು ಎಂಬ ವಿಶ್ವಾಸವನ್ನು ನಾನು ಹೊಂದಿದ್ದೇನೆ. ಈ ಪಂದ್ಯವನ್ನು ಗೆದ್ದು ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಬಹುದು ಎಂದಿದ್ದಾರೆ ಸುನಿಲ್ ಗವಾಸ್ಕರ್. ಅಂದಹಾಗೆ ಭಾರತ ಕಂಡ ಶ್ರೆಷ್ಠ ಕ್ರಿಕೆಟಿಗ ಕಪಿಲ್ದೇವ್ ಗುರುವಾರ 63ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಮಾತನ್ನು ಹೇಳಿದ್ದಾರೆ.
ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ: ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಾಲ್ಕನೇ ದಿನ ಜೊಹನ್ಸ್ಬರ್ಗ್ನಲ್ಲಿ ಮುಂಜಾನೆ ಸುರಿದ ಭಾರೀ ಮಳೆಯ ಕಾರಣದಿಂದಾಗಿ ತಡವಾಗಿ ಆರಂಭವಾಯಿತು. ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದಾಗಿ ಸಂಜೆಯವರೆಗೂ ಆರಂಬವಾಗಿರಲಿಲ್ಲ. ಬಳಿಕ ಸಂಜೆ 7:15ಕ್ಕೆ ಪಂದ್ಯವನ್ನು ಮುಂದುವರಿಸಲಾಗಿದ್ದು ದಕ್ಷಿಣ ಆಫ್ರಿಕಾ ತಂಡ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ.
ಇನ್ನು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 202 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ನಾಯಕ ಕೆಎಲ್ ರಾಹುಲ್ 50 ರನ್ ಹಾಗೂ ಆರ್ ಅಶ್ವಿನ್ 46 ರನ್ಗಳಿಸಿತ್ತು ತಂಡದ ಪರವಾಗಿ ಗಳಿಸಿದ ಹೆಚ್ಚಿನ ರನ್ ಆಗಿತ್ತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಪ್ರಿಕಾ ತಂಡ 229 ರನ್ಗಳನ್ನು ಗಳಿಸಿ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು. ಭಾರತದ ಪರವಾಗಿ 7ವಿಕೆಟ್ಗಳನ್ನು ಪಡೆದು ಶಾರ್ದೂಲ್ ಠಾಕೂರ್ ಮಿಂಚಿದ್ದಾರೆ. ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿರುವ ಭಾರತ ತಂಡ 266 ರನ್ಗಳನ್ನು ಗಳಿಸಿ ಆಲೌಟ್ ಆಗಿದ್ದು 240 ರನ್ಗಳ ಗುರಿಯನ್ನು ನಿಗದಿಪಡಿಸಿದೆ.
ಈ ಗುರಿಯನ್ನು ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ದೊರೆತಿದೆ. ಹೀಗಾಗಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಅವಕಾಶ ದಕ್ಷಿಣ ಆಫ್ರಿಕಾ ತಂಡದ ಮುಂದಿದೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಡುವಾನ್ನೆ ಒಲಿವಿಯರ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ