ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20, ಏಕದಿನ, ಟೆಸ್ಟ್ ಸರಣಿಯನ್ನು ಆಡಲಿದೆ. ಈಗಾಗಲೇ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಸಮಬಲ ಸಾಧಿಸಿದೆ. ಅಲ್ಲದೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಎಲ್ಲ ಸರಣಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆದ ಸರಣಿ ಟೆಸ್ಟ್.. ಈ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಟೀಂ ಇಂಡಿಯಾ ಇಲ್ಲಿಯವರೆಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಒಂದೂ ಸರಣಿ ಗೆದ್ದಿಲ್ಲ. ಭಾರತ ತಂಡ ಇಲ್ಲಿ ಒಟ್ಟು ಎಂಟು ಟೆಸ್ಟ್ ಸರಣಿಗಳನ್ನು ಆಡಿದ್ದು, ಪ್ರತಿ ಬಾರಿಯೂ ಬರಿಗೈಯಲ್ಲಿ ತವರಿಗೆ ಮರಳಬೇಕಾಗಿದೆ. ಆದರೆ, ಈ ಬಾರಿ ಭಾರತ ತಂಡ ಇಲ್ಲಿ ಇತಿಹಾಸ ಸೃಷ್ಟಿಸಬಹುದು ಎಂದು ಶ್ರೇಷ್ಠ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದಲ್ಲಿ ಇಬ್ಬರು ಶ್ರೇಷ್ಠ ಬೌಲರ್ಗಳ ಅನುಪಸ್ಥಿತಿಯು ಟೀಂ ಇಂಡಿಯಾಗೆ ಸರಣಿ ಗೆಲ್ಲುವ ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದರು. ಈ ವೇಳೆ ಮುಂಬರುವ ಟೆಸ್ಟ್ ಸರಣಿಯಲ್ಲಿ ಭಾರತದ ಗೆಲುವಿನ ಸಾಧ್ಯತೆಗಳ ಬಗ್ಗೆ ಗವಾಸ್ಕರ್ ಅವರನ್ನು ಕೇಳಿದಾಗ, 'ಖಂಡಿತವಾಗಿಯೂ, ಈ ಬಾರಿ ಟೀಮ್ ಇಂಡಿಯಾಗೆ ಗೆಲುವಿನ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರ ಇಬ್ಬರು ಅತ್ಯುತ್ತಮ ಬೌಲರ್ಗಳಿಲ್ಲ. ನಾರ್ಕಿಯಾ ಅಥವಾ ರಬಾಡಾ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಅಂದರೆ ಭಾರತದ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡಿದರೆ ಈ ಬಾರಿ ಗೆಲುವಿನ ಸಾಧ್ಯತೆ ಹೆಚ್ಚಿದೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆ ಆಡಿದರೆ, 400 ಅಥವಾ ಹೆಚ್ಚಿನ ರನ್ಗಳನ್ನು ಗಳಿಸಬಹುದು ಎಂದಿದ್ದಾರೆ.
ಆರಂಭದಲ್ಲಿ ಚೆಂಡು ಕೆಂಪು ಮತ್ತು ತನ್ನ ಹೊಳಪನ್ನು ಹೊಂದಿದ್ದಾಗಿ ನಿಶ್ಚಿತವಾಗಿ ಬೌಲರ್ಗಳಿಗೆ ಪ್ರಯೋಜನವಾಗಲಿದೆ. ಬೌನ್ಸ್ ಬ್ಯಾಟರ್ಗಳಿಗೆ ಹೈರಾಣ ಮಾಡಬಲ್ಲದು. ಇದು ಟೆಸ್ಟ್ ಕ್ರಿಕೆಟ್. ಅದಕ್ಕಾಗಿಯೇ ನೀವು 5 ದಿನಗಳನ್ನು ಹೊಂದಿರುತ್ತೀರಿ. ಬ್ಯಾಟರ್ಗಳು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು. ಅವರು 300 ಮತ್ತು 500 ರ ನಡುವೆ ರನ್ಗಳನ್ನು ಮಾಡುತ್ತಾ ಮುಂದುವರೆದರೆ, ಬೌಲರ್ಗಳು ಎರಡೂ ಇನ್ನಿಂಗ್ಸ್ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಕಟ್ಟಿ ಹಾಕುವ ಉತ್ತಮ ಅವಕಾಶವನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಬಾರಿ ಬಹುಶಃ ಟೀಂ ಇಂಡಿಯಾಗೆ ಉತ್ತಮ ಅವಕಾಶವಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ನನ್ನ ಪ್ರಕಾರ 2018ರಲ್ಲಿ ಭಾರತ ತಂಡ ಗೆಲ್ಲಬೇಕಿತ್ತು. ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವಿನ ಸನಿಹದಲ್ಲಿ ಬಂದು ಎಡವಿತ್ತು. ಆದರೆ ಈ ಬಾರಿ ಟೀಮ್ ಇಂಡಿಯಾ ಬಲಿಷ್ಠವಾಗಿದ್ದು ತಂಡಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಗೆಲ್ಲುವ ಉತ್ತಮ ಅವಕಾಶ ಇದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಅಂಗಳಕ್ಕೆ ಪ್ರವೇಶಿಸಲಿದ್ದು, ಎಲ್ಲರ ಚಿತ್ತ ಇವರ ಮೇಲೆ ನೆಟ್ಟಿದೆ.